ಬೆಳಗಾವಿ
ʼಬೆಂಗಳೂರು ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶ ಇರುವ ಹಿನ್ನೆಲೆಯಲ್ಲಿ ಸರ್ಕಾರವು ಯೋಜನೆಯಲ್ಲಿ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲʼʼ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು. ಸುವರ್ಣ ವಿಧಾನ ಸೌಧದದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆ ವಿಧಾನ ಪರಿಷತ್ನಲ್ಲಿ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯರ ಪ್ರಶ್ನೆಗಳಿಗೆ ಗುರುವಾರ ಅವರು ಉತ್ತರಿಸಿದರು.
ಕಾಂಗ್ರೆಸ್ ಸದಸ್ಯ ಮಧು ಮಾದೇಗೌಡ, ʼʼಬಿಎಂಐಸಿಪಿಎ ಯೋಜನೆ ಭಾಗವಾಗಿ ನಮ್ಮ ಕಡೆ ಎನ್ಎಚ್ 275 ಬಂದಿದ್ದು, ಮತ್ತೊಂದು ಹೆದ್ದಾರಿ ಅಗತ್ಯವಿದೆಯೇ? ಇಲ್ಲಿ ಭೂ ಪರಿವರ್ತನೆ ಹಾಗೂ ನಕ್ಷೆ ಅನುಮೋದನೆಗೆ ಸಮಸ್ಯೆ ಎದುರಾಗಿದೆʼʼ ಎಂದು ತಿಳಿಸಿದರು. ಇದಕ್ಕೆ ಉತ್ತರಿಸಿದ ಡಿಕೆಶಿ, ʼʼ1995ರಲ್ಲೇ ಈ ಬೆಂಗಳೂರು ಮೈಸೂರು ಕಾರಿಡಾರ್ ಯೋಜನೆಯನ್ನು ದೇವೇಗೌಡರು ಸಿಎಂ ಆಗಿದ್ದಾಗ ಅನುಮೋದನೆ ನೀಡಲಾಗಿತ್ತು. ಇಡೀ ದೇಶಕ್ಕೆ ಮಾದರಿಯಾಗುವಂತಹ ಮಾಸ್ಟರ್ ಪ್ಲಾನ್ ಈ ಯೋಜನೆ. ಕಾರಣಾಂತರಗಳಿಂದ ಇದು ಪೂರ್ಣಗೊಂಡಿಲ್ಲ. ಸದಸ್ಯರು ಈ ಭಾಗದಲ್ಲಿ ಭೂಮಿ ಪರಿವರ್ತನೆ ಬಗ್ಗೆ ಕೇಳಿದ್ದು, ಈಗ ನಾವು ಆನ್ಲೈನ್ನಲ್ಲಿ ಭೂಮಿ ಪರಿವರ್ತನೆಗೆ ಅವಕಾಶ ಕಲ್ಪಿಸಿದ್ದೇವೆ. ಇನ್ನು ಕಟ್ಟಡ ನಕ್ಷೆಗೆ ಅನುಮತಿ ಪಡೆಯಲು ಸ್ಥಳೀಯ ಯೋಜನಾ ಪ್ರಾಧಿಕಾರಕ್ಕೆ ಅಧಿಕಾರ ನೀಡಲಾಗಿದೆʼʼ ಎಂದು ತಿಳಿಸಿದರು.
ʼʼಸ್ಥಳೀಯ ಶಾಸಕ ಉದಯ್ ಈ ವಿಚಾರವಾಗಿ ನನ್ನ ಬಳಿ ಸುಮಾರು ಹತ್ತು ಬಾರಿ ಚರ್ಚೆ ಮಾಡಿದ್ದಾರೆ. ನಾನು ಅದನ್ನು ಪರಿಶೀಲಿಸಿದ್ದೇನೆ. ಆದರೆ ಸುಪ್ರೀಂ ಕೋರ್ಟ್ನಲ್ಲಿ ತ್ರಿಸದಸ್ಯ ಪೀಠದಿಂದ ತೀರ್ಪು ಬಂದಿದ್ದು, ಈ ಯೋಜನೆಯನ್ನು ಮೂಲ ಪರಿಕಲ್ಪನೆಯಲ್ಲಿ ಜಾರಿಗೆ ತರಬೇಕು. ಯಾವುದೇ ಬದಲಾವಣೆ ಮಾಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹೀಗಾಗಿ ಸರ್ಕಾರ ಇದರಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ಕೂಡ ಇದೆ. ಪರಮೇಶ್ವರ್ ಅವರ ನೇತೃತ್ವದಲ್ಲಿ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿದೆ. ಮಂಡ್ಯದಲ್ಲಿ ನಗರ ಯೋಜನೆ ಕಚೇರಿ ಆರಂಭಿಸಲಾಗಿದೆ. ಈ ಯೋಜನೆಯಲ್ಲಿ ಬದಲಾವಣೆಗೆ ಅವಕಾಶವಿಲ್ಲ, ಆದರೆ ಸ್ಥಳಿಯವಾಗಿ ಇರುವ ಸಮಸ್ಯೆಗಳನ್ನು ನಿವಾರಿಸಲು ನಾವು ಬದ್ಧವಾಗಿದ್ದೇವೆʼʼ ಎಂದದರು.
ಬಿಜೆಪಿ ಸದಸ್ಯ ಕಿಶೋರ್ ಕುಮಾರ್ ಪುತ್ತೂರ್, ʼʼಜೈಲಿನಲ್ಲಿ ಉಗ್ರರು ಸೇರಿದಂತೆ ಖೈದಿಗಳಿಗೆ ಮೊಬೈಲ್, ಟಿ.ವಿ.ಯಂತಹ ಸೌಲಭ್ಯ ಕಲ್ಪಿಸಲಾಗಿದೆ. ಜೈಲಿನಿಂದಲೇ ಹಾಟ್ ಲೈನ್ ಕರೆ ಬಂದಿದೆ. ಈ ವಿಚಾರವಾಗಿ ಪತ್ರಿಕೆಗಳಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹೆಸರು ಕೇಳಿ ಬಂದಿದೆʼʼ ಎಂದು ಪ್ರಸ್ತಾವಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿ ಸ್ಪಷ್ಟನೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ʼʼನಾನು ಇಂತಹ ಯಾವುದೇ ಹಾಟ್ ಲೈನ್ ಕರೆಗಳನ್ನು ಸ್ವೀಕರಿಸುವುದಿಲ್ಲ. ನನಗೆ ಜೈಲಿನಿಂದ ಯಾವುದೇ ಕರೆ ಬಂದಿಲ್ಲ. ಪತ್ರಿಕೆಗಳಲ್ಲಿ ಏನು ಬಂದಿದೆಯೋ? ನೀವು ಅದನ್ನು ಇಲ್ಲಿ ಪ್ರಸ್ತಾಪಿಸಿದರೆ, ನಂತರ ನೀವು ಅದಕ್ಕೂ ಹಾಗೂ ನನ್ನ ಮಧ್ಯೆ ಬೇರೆ ರೀತಿ ಲಿಂಕ್ ಬೆಳೆಸುತ್ತೀರಿ. ಹೀಗಾಗಿ ನಾನು ಈ ವಿಚಾರವಾಗಿ ಸ್ಪಷ್ಟಪಡಿಸಲು ಬಯಸುತ್ತೇನೆ. ನಾನು ಜೈಲು ಮಂತ್ರಿಯಾಗಿದ್ದೆ, ಜೈಲಲ್ಲಿ ಇದ್ದೆ. ಜೈಲಲ್ಲಿ ಏನೆಲ್ಲ ನಡೆಯುತ್ತದೆ ಎಂದು ತಿಳಿದುಕೊಂಡಿದ್ದೇನೆ. ಪತ್ರಿಕೆಗಳಲ್ಲಿ ಸಾವಿರ ಬಂದಿರಬಹುದು. ಆದರೆ ಇದಕ್ಕೂ ನನಗೂ ನಂಟು ಹಾಕಬೇಡಿʼʼ ಎಂದು ತಿಳಿಸಿದರು.








