ಬೆಂಗಳೂರು
ಕ್ಷುಲ್ಲಕ ಕಾರಣಕ್ಕೆ ಪುಡಿ ರೌಡಿಗಳ ಗುಂಪೊಂದು ಪಾನ್ ಶಾಪ್ ಮೇಲೆ ದಾಳಿ ನಡೆಸಿ ಅಲ್ಲಿದ್ದ ಅಂಗಡಿ ಮಾಲಿಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಬಷೀರ್ ಎಂಬವರ ಮನೆಗೆ ನುಗ್ಗಿ 10ಕ್ಕೂ ಹೆಚ್ಚು ಪುಡಿ ರೌಡಿಗಳು ಹಲ್ಲೆ ನಡೆಸಿ ದಾಂಧಲೆ ಮಾಡಿದ್ದಾರೆ. ಪಾನ್ ಶಾಪ್ನಲ್ಲಿದ್ದ ಬಾಟಲ್ಗಳನ್ನ ಒಡೆದು ಹಾಕಿ ಎಸ್ಕೇಪ್ ಆಗಿದ್ದಾರೆ. ಇದರ ಜೊತೆಗೆ, ಕಾರೊಂದರ ಮೇಲೂ ರೌಡಿಗಳು ದಾಳಿ ಮಾಡಿದ್ದಾರೆ. ಕಾರಿನ ಒಳಗೆ ಇದ್ದ ಇಬ್ಬರು ಯುವಕರ ಮೇಲೆ ಪುಡಿ ರೌಡಿಗಳು ದಾಳಿ ಮಾಡಲು ಯತ್ನಿಸಿದ್ದಾರೆ. ಕಾರಿನೊಳಗಿದ್ದ ಯುವಕರು ಅದೃಷ್ಟವಶಾತ್ ಗ್ರೇಟ್ ಎಸ್ಕೇಪ್ ಆಗಿದ್ದಾರೆ.
ಸಿಸಿಟಿವಿಯಲ್ಲಿ ದಾಳಿಗಳ ದೃಶ್ಯ ಸೆರೆಯಾಗಿದೆ. ಬನಶಂಕರಿ ಮೂರನೇ ಹಂತ ಕತ್ರಿಗುಪ್ಪೆ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದ್ದು, ಮಚ್ಚು, ಲಾಂಗು ಹಿಡಿದು ಹಲ್ಲೆ ನಡೆಸಿದ್ದು ಕಂಡುಬಂದಿದೆ. ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಮತ್ತೆ ರೌಡಿಗಳ ಅಟ್ಟಹಾಸ ತೀವ್ರತೆ ಪಡೆದುಕೊಂಡಿರುವುದಕ್ಕೆ ಇದು ಸಾಕ್ಷಿಯಾಗಿದೆ.








