ರಾಜ್ಯದ ದೀರ್ಘಾವಧಿ ಸಿಎಂ ದಾಖಲೆ; ಸಿದ್ದರಾಮಯ್ಯಗೆ ಶುಭ ಹಾರೈಸಿದ ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು

      ಕುಮಾರಸ್ವಾಮಿ ಅವರು ಯಾವಾಗಲೋ ಬರುತ್ತಾರೆ, ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಹೋಗುತ್ತಾರೆ. ಅವರು ಗಂಭೀರ ರಾಜಕಾರಣ ಮಾಡುವವರಲ್ಲ. ಮಾಧ್ಯಮಗಳ ಮುಂದೆ ಮಾತ್ರ ರಾಜಕಾರಣ ಮಾಡುವವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್  ತಿರುಗೇಟು ನೀಡಿದರು. ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸೋಮವಾರ ಅವರು ಪ್ರತಿಕ್ರಿಯೆ ನೀಡಿದರು.

   ಜನಾರ್ಧನ ರೆಡ್ಡಿ ಅವರು ಅಮೆರಿಕಾದಿಂದ ಬೇಕಾದರೂ ಭದ್ರತೆ ತೆಗೆದುಕೊಳ್ಳಲಿ ಎಂಬ ನಿಮ್ಮ ಹೇಳಿಕೆಗೆ ಗ್ರೇಟ್ ಡಿಸಿಎಂ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ ಎಂದು ಗಮನ ಸೆಳೆದಾಗ, ʼನಾವು ಯಾರಿಗೆ ಭದ್ರತೆ ಕೊಡಬೇಕು? ಯಾವ ಕಾರಣಕ್ಕೆ ಭದ್ರತೆ ನೀಡಬೇಕು ಎಂದು ಆಮೇಲೆ ಮಾತನಾಡೋಣ. ಈ ವಿಚಾರವಾಗಿ ಗೃಹ ಸಚಿವರು ಉತ್ತರ ನೀಡುತ್ತಾರೆ. ನಾನು ಯಾರಿಗೂ ಉತ್ತರ ನೀಡುವುದಿಲ್ಲ ಎಂದು ಹೇಳಿದರು.

   ನಾನು ಕೂಡ ಬಳ್ಳಾರಿಗೆ ಹೋಗುತ್ತಿದ್ದೇನೆ. ನಮ್ಮ ಕಾರ್ಯಕರ್ತ ಮೃತಪಟ್ಟಿದ್ದಾನೆ. ನಾನು ಪಕ್ಷದ ಸಮಿತಿಯಿಂದ ಮಾಹಿತಿ ಪಡೆದಿದ್ದೇನೆ. ಅಧಿಕೃತವಾಗಿ ವರದಿ ನೀಡಬೇಕಿದೆ. ನಾನು ಕುಮಾರಸ್ವಾಮಿ ಹಾಗೂ ಇತರರ ಹೇಳಿಕೆಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ. ಅವರು ತಮ್ಮ ಖುಷಿಗೆ ಏನಾದರೂ ಹೇಳಿಕೊಳ್ಳಲಿ. ಕುಮಾರಸ್ವಾಮಿ ಅವರು ಬರುತ್ತಾರೆ, ಮಾತನಾಡುತ್ತಾರೆ, ಹೋಗುತ್ತಾರೆ. ಬಳ್ಳಾರಿಯಲ್ಲಿ ಶಾಂತಿ ನೆಲೆಸಬೇಕು. ಬಳ್ಳಾರಿ ಜನ ಈ ಹಿಂದೆ ಅನುಭವಿಸಿರುವುದೇ ಸಾಕು, ಮುಂದೆ ಯಾವುದೇ ತೊಂದರೆ ಆಗಬಾರದು. ನಮಗೆ ಅಷ್ಟೇ ಸಾಕು. ಈ ಹಿಂದೆ ಆಗಬಾರದ್ದೆಲ್ಲಾ ಆಗಿದೆ. ಮೊನ್ನೆ ನಡೆದ ದುರ್ಘಟನೆ ಆಗಬಾರದಿತ್ತು, ಆದರೆ ಆಗಿಹೋಗಿದೆ. ಇದರಿಂದ ನನಗೆ ದುಃಖವಾಗಿದೆʼ ಎಂದರು.ಕುಮಾರಸ್ವಾಮಿ ಅವರಿಗೆ ನನ್ನ ಮೇಲೆ ಬಹಳ ಅಭಿಮಾನ ಇದೆಯಲ್ಲಾ, ಇದು ಬಹಳ ಒಳ್ಳೆಯದು. ಒಳ್ಳೆಯದ್ದಕ್ಕೆ ಹೇಳಿದ್ದಾರೋ, ಕೆಟ್ಟದ್ದಕ್ಕೆ ಹೇಳಿದ್ದಾರೋ, ಒಟ್ಟಿನಲ್ಲಿ ನನ್ನನ್ನು ಗ್ರೇಟ್ ಡಿಸಿಎಂ ಎಂದು ಕರೆದಿರುವುದಕ್ಕೆ ಸಂತೋಷʼ ಎಂದು ಅವರು ತಿಳಿಸಿದರು.

   ಬಳ್ಳಾರಿ ಗಲಭೆಯಲ್ಲಿ ಮೃತಪಟ್ಟಿರುವ ಪಕ್ಷದ ಕಾರ್ಯಕರ್ತನ ಮನೆಗೆ ಹೋಗುತ್ತೀರಾ ಎಂದು ಕೇಳಿದಾಗ, ʼನಮ್ಮ ನಾಯಕರು ಎಲ್ಲೆಲ್ಲಿ ಹೋಗಬೇಕು ಎಂದು ಹೇಳುತ್ತಾರೋ ಅಲ್ಲಿಗೆ ಹೋಗುವೆʼ ಎಂದು ಹೇಳಿದರು.

   ಕ್ರಿಮಿನಲ್ ಶಾಸಕರಿಗೆ ಡಿ.ಕೆ. ಶಿವಕುಮಾರ್ ಬೆಂಬಲ ನೀಡುತ್ತಿದ್ದಾರೆ ಎಂಬ ಜನಾರ್ಧನ ರೆಡ್ಡಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ʼನನ್ನ ಮೇಲೂ ಕ್ರಿಮಿನಲ್ ಕೇಸ್ ದಾಖಲಿಸಿ ನನಗೂ ಕ್ರಿಮಿನಲ್ ಪಟ್ಟ ಕೊಟ್ಟಿದ್ದಾರೆ. ಜನಾರ್ಧನ ರೆಡ್ಡಿ ಅವರು ತಮ್ಮ ಇತಿಹಾಸದ ಪುಸ್ತಕವನ್ನು ತೆರೆದು ಯಾರ ಮೇಲೆ ಕ್ರಿಮಿನಲ್ ಕೇಸ್ ಇದೆ ಎಂಬುದನ್ನು ನೋಡಿಕೊಳ್ಳಲಿ. ಮಾಜಿ ಸಿಎಂ, ಶಾಸಕರು, ಸಂಸದರ ಮೇಲೆ ಕ್ರಿಮಿನಲ್ ಕೇಸ್ ಗಳಿವೆಯಲ್ಲಾ? ಎಫ್ಐಆರ್ ದಾಖಲಿಸಿದ ನಂತರ ನ್ಯಾಯಾಲಯದಲ್ಲಿ ತೀರ್ಪು ಬರುವವರೆಗೂ ಆ ಕ್ರಿಮಿನಲ್ ಅನ್ನು ಆರೋಪಿ ಅಂತಲೇ ಪರಿಗಣಿಸುತ್ತಾರೆ ಅಲ್ಲವೇ?ʼ ಎಂದರು.

   ಸಿಎಂ ಸಿದ್ದರಾಮಯ್ಯ ಅವರು ದೀರ್ಘಾವಧಿ ಆಡಳಿತ ಮಾಡಿದ ದಾಖಲೆ ಬರೆಯುತ್ತಿದ್ದಾರೆ ಎಂದು ಕೇಳಿದಾಗ, ʼಇದು ಬಹಳ ಸಂತೋಷದ ವಿಷಯ. ನಮಗೆ, ನಿಮಗೆ ಎಲ್ಲರಿಗೂ ಸಂತೋಷದ ವಿಚಾರ. ನೀವು ಈ ಬಗ್ಗೆ ಉತ್ತಮವಾಗಿ ಪ್ರಚಾರ ಮಾಡಿ. ನಾನು ಅವರಿಗೆ ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ. ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ಬಯಕೆ ಎಲ್ಲರಿಗೂ ಇರುತ್ತದೆ. ನಮ್ಮ ಮುಖ್ಯಮಂತ್ರಿಗಳು ಇತಿಹಾಸದ ಪುಟಕ್ಕೆ ಹಿಂದೆಯೂ ಸೇರಿದ್ದಾರೆ, ಮುಂದೆಯೂ ಸೇರುತ್ತಾರೆʼ ಎಂದು ತಿಳಿಸಿದರು.

   ಇದರಿಂದ ನಿಮ್ಮ ಹಾದಿ ಸುಗಮವಾಗುತ್ತದೆಯೇ ಎಂದು ಕೇಳಿದಾಗ, ʼಹಳ್ಳಿಯಿಂದ ಬಂದ ನಾನು ಇಲ್ಲಿಯವರೆಗೂ ತಲುಪಿದ್ದೇನೆ. ಇದಕ್ಕಿಂತ ಇನ್ನೇನು ಬೇಕು ನನಗೆ. ಯಾವುದನ್ನೂ ಹುಡುಕಿಕೊಂಡು ಹೋಗುವ ಅವಶ್ಯಕತೆ ಇಲ್ಲ. ನನ್ನ ಬಾಯಲ್ಲಿ ಏನೇನೋ ಮಾತನಾಡಿಸಲು ಪ್ರಯತ್ನಿಸಬೇಡಿʼ ಎಂದರು.

   ಶುಭ ದಿನಗಳು ಬರುತ್ತಿವೆ ಎಂಬ ಡಿ.ಕೆ. ಸುರೇಶ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ʼನಮಗೆ ಎಲ್ಲಾ ದಿನವೂ ಒಳ್ಳೆಯ ದಿನಗಳು, ನಿನ್ನೆ ಭೂತಕಾಲ, ನಾಳೆ ಭವಿಷ್ಯಕಾಲ, ಇಂದು ವರ್ತಮಾನ. ನಿಮ್ಮ ಜತೆ ಮಾತನಾಡುತ್ತಿರುವುದು ಒಳ್ಳೆಯ ದಿನʼ ಎಂದು ಚಟಾಕಿ ಹಾರಿಸಿದರು.ಮಲೇಷ್ಯಾದ ಪೆನಾಂಗ್ ರಾಜ್ಯದ ಡಿಸಿಎಂ ಜಗದೀಪ್ ಸಿಂಗ್ ಅವರ ಭೇಟಿ ಬಗ್ಗೆ ಕೇಳಿದಾಗ, ʼಜಗದೀಪ್ ಸಿಂಗ್ ಅವರು ಭಾರತೀಯ ಮೂಲದವರು. ಅವರು ಮಲೇಷ್ಯಾ ಪೆನಾಂಗ್ ರಾಜ್ಯದ ಉಪಮುಖ್ಯಮಂತ್ರಿಗಳಾಗಿದ್ದು, ಶಿಕ್ಷಣ ಸಚಿವರೂ ಆಗಿದ್ದಾರೆ. ಅವರು ನಮ್ಮ ವಿವಿಗಳನ್ನು ಭೇಟಿ ಮಾಡಿದ್ದಾರೆ. ಬೆಂಗಳೂರು ವಿವಿಯ ಸಹಯೋಗ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದು, ನಮಗೂ ಆಹ್ವಾನ ನೀಡಿದ್ದಾರೆʼ ಎಂದರು. 

   ಮನರೇಗಾ ಹೋರಾಟದ ಬಗ್ಗೆ ಕೇಳಿದಾಗ, ʼಜ.8ರಂದು ಸಂಜೆ 5ಗಂಟೆಗೆ ಎಲ್ಲಾ ಶಾಸಕರು, ಪರಿಷತ್ ಸದಸ್ಯರು, ಸಂಸದರನ್ನು ಮನರೇಗಾ ಉಳಿಸಿ ಹೋರಾಟದ ಪೂರ್ವಭಾವಿ ಸಭೆಗೆ ಆಹ್ವಾನಿಸಿದ್ದೇನೆ. ಎಐಸಿಸಿ ನಾಯಕರು ನಮಗೆ ನಿರ್ದೇಶನ ನೀಡಿದ್ದಾರೆ. ಮಾಧ್ಯಮಗಳ ಮೂಲಕ ನಾನು ನಮ್ಮ ನಾಯಕರನ್ನು ಆಹ್ವಾನಿಸುತ್ತಿದ್ದೇನೆ. ಈ ಪ್ರತಿಭಟನೆ ನಂತರ ಜಿಲ್ಲಾ ಹಾಗೂ ತಾಲೂಕು ಮಟ್ಟದ ಕಾರ್ಯಕ್ರಮ ರೂಪಿಸುತ್ತೇವೆʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.

Recent Articles

spot_img

Related Stories

Share via
Copy link