3-4 ದಿನಗಳಲ್ಲಿ ದೆಹಲಿಗೆ ಸಿಎಂ | ಬಿರುಸುಗೊಂಡ ಶಾಸಕರ ಲಾಬಿ | ಹೈಕಮಾಂಡ್ ಅಂಗಳಕ್ಕೆ ಸಚಿವಾಕಾಂಕ್ಷಿಗಳ ಪಟ್ಟಿ

ಬೆಂಗಳೂರು: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಚಟುವಟಿಕೆಗಳು ಗರಿಗೆದರಿವೆ. “ಆದಷ್ಟು ಶೀಘ್ರವಾಗಿ ಸಂಪುಟ ವಿಸ್ತರಣೆ ಆಗಲಿದ್ದು, ಈ ಕುರಿತು ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೂರ್ನಾಲ್ಕು ದಿನಗಳಲ್ಲಿ ದೆಹಲಿಗೆ ತೆರಳಲಿದ್ದು, ವರಿಷ್ಠರ ಅಂಕಿತ ದೊರೆಯುವುದೇ ಬಾಕಿಯಿದೆ.
ಸೋಮವಾರ ಸದಾಶಿವನಗರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಆದಷ್ಟು ಶೀಘ್ರವಾಗಿ ಸಂಪುಟ ವಿಸ್ತರಣೆ ಆಗಲಿದೆ. ರಾಹುಲ್ ಗಾಂಧಿ ಅವರು ದೆಹಲಿಗೆ ಬಂದಿದ್ದಾರೆ. ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಗೃಹ ಕಚೇರಿ ಕೃಷ್ಣಾದಲ್ಲಿ ಮಾಹಿತಿ ನೀಡಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಗಸ್ಟ್ 6ರಂದು ಅಧಿವೇಶನ ಕರೆಯುತ್ತಿದ್ದೇನೆ. ಅದಕ್ಕೂ ಮುಂಚೆ ಹೈಕಮಾಂಡ್ ಬುಲಾವ್ ಮೇರೆಗೆ ದೆಹಲಿಗೆ ಹೋಗಿ ಬರುತ್ತೇನೆ. ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸುತ್ತೇನೆ ಎಂದು ತಿಳಿಸಿದ್ದಾರೆ.
ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರೊಂದಿಗೆ ಸಿಎಂ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಸಚಿವರ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಿದ್ದಾರೆ. ದೆಹಲಿಯಲ್ಲಿ ರಾಹುಲ್ ಗಾಂಧಿ ಅವರ ಅಂಕಿತ ದೊರೆತ ತಕ್ಷಣವೇ ನೂತನ ಸಚಿವರ ಪದಗ್ರಹಣ ನಡೆಯಲಿದೆ.
ಸಂಪುಟ ವಿಸ್ತರಣೆ ಖಚಿತವಾಗುತ್ತಿದ್ದಂತೆ ಸಚಿವಾಕಾಂಕ್ಷಿಗಳು ದೆಹಲಿ ಹಾಗೂ ರಾಜ್ಯ ನಾಯಕರ ಮನೆ ಬಾಗಿಲು ತಟ್ಟುತ್ತಿದ್ದಾರೆ. ಸೋಮವಾರ ಸದಾಶಿವನಗರದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಶಾಸಕರಾದ ಅಶೋಕ್ ಪಟ್ಟಣ್, ರಾಜೇಗೌಡ ಹಾಗೂ ಶಿವಲಿಂಗೇಗೌಡ ಅವರು ಭೇಟಿ ನೀಡಿ, ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸಿದರು.
ಈ ತಿಂಗಳ 15 ರಿಂದ ಆಷಾಢಮಾಸ ಆರಂಭವಾಗಲಿದ್ದು, ಅಷ್ಟರೊಳಗೆ ಸಂಪುಟ ವಿಸ್ತರಿಸುವ ಇರಾದೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೊಂದಿದ್ದು, ಒಂದು ವೇಳೆ 15 ರೊಳಗೆ ಸಚಿವರ ಪಟ್ಟಿಗೆ ವರಿಷ್ಠರ ಅಂಕಿತ ಸಿಗದಿದ್ದರೆ ಆಷಾಢ ಮಾಸ ಎಂಬುದನ್ನು ನೋಡದೆ ಈ ವಾರದ ಅಂತ್ಯದಲ್ಲಿ ಅಥವಾ ಮುಂದಿನ ವಾರದ ಆರಂಭದಲ್ಲಿ ಸಂಪುಟ ವಿಸ್ತರಣೆಯಾದರೂ ಅಚ್ಚರಿ ಇಲ್ಲ. ಆಷಾಢಮಾಸ ಇವನ್ನೆಲ್ಲಾ ಕಾಂಗ್ರೆಸ್ ವರಿಷ್ಠರು ಹೆಚ್ಚು ನಂಬದ ಕಾರಣ ಆಷಾಡ ಯಾವುದನ್ನು ಲೆಕ್ಕಿಸದೆ ಸಂಪುಟ ವಿಸ್ತರಣೆ ಅವರು ಹಸಿರು ನಿಶಾನೆ ತೋರಲಿದ್ದಾರೆ ಎಂದು ಹೇಳಲಾಗಿದೆ.
ಜೂನ್. 3 ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜತೆ 13 ಸಚಿವರು ಸಂಪುಟ ಸೇರಿದ್ದಾರೆ. ಇನ್ನೂ 20 ಸ್ಥಾನಗಳು ಖಾಲಿ ಉಳಿದಿವೆ. ಪೂರ್ಣ ಪ್ರಮಾಣದಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, 2 ಸ್ಥಾನಗಳನ್ನು ಖಾಲಿ ಇಟ್ಟುಕೊಂಡು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಿಸುವ ಸಾಧ್ಯತೆಗಳು ಹೆಚ್ಚಿವೆ.
ಆಷಾಢದ ಲೆಕ್ಕಾಚಾರ: ಈ ತಿಂಗಳ 15ರಿಂದ ಆಷಾಢಮಾಸ ಆರಂಭವಾಗಲಿದ್ದು, ಅಷ್ಟರೊಳಗೆ ಸಂಪುಟ ವಿಸ್ತರಿಸುವ ಇರಾದೆ ಸಿಎಂ ಅವರಿಗಿದೆ. ಒಂದು ವೇಳೆ 15ರೊಳಗೆ ಅಂಕಿತ ಸಿಗದಿದ್ದರೂ, ಕಾಂಗ್ರೆಸ್ ವರಿಷ್ಠರು ಆಷಾಢವನ್ನು ಹೆಚ್ಚಾಗಿ ಲೆಕ್ಕಿಸದ ಕಾರಣ ಈ ವಾರಾಂತ್ಯ ಅಥವಾ ಮುಂದಿನ ವಾರದ ಆರಂಭದಲ್ಲೇ ವಿಸ್ತರಣೆಯಾಗುವ ಸಾಧ್ಯತೆಯಿದೆ.
ಖಾಲಿ ಇರುವ ಸ್ಥಾನಗಳು: ಕಳೆದ ಜೂನ್ 3ರಂದು ಸಿಎಂ ಜತೆ 13 ಸಚಿವರು ಸಂಪುಟ ಸೇರಿದ್ದರು. ಸದ್ಯ 20 ಸ್ಥಾನಗಳು ಖಾಲಿ ಉಳಿದಿವೆ.
2 ಸ್ಥಾನ ಕಾಯ್ದಿರಿಸುವ ಸಾಧ್ಯತೆ: ಪೂರ್ಣ ಪ್ರಮಾಣದಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದರೂ, ಭವಿಷ್ಯದ ರಾಜಕೀಯ ಲೆಕ್ಕಾಚಾರಗಳಿಗಾಗಿ 2 ಸ್ಥಾನಗಳನ್ನು ಖಾಲಿ ಇಟ್ಟುಕೊಂಡು ಉಳಿದ ಸ್ಥಾನಗಳನ್ನು ಭರ್ತಿ ಮಾಡುವ ಸಾಧ್ಯತೆಗಳು ದಟ್ಟವಾಗಿವೆ.
ಬೆಂಗಳೂರಲ್ಲೇ ದೆಹಲಿ ದರ್ಬಾರ್
ಸಚಿವ ಸ್ಥಾನಕ್ಕಾಗಿ ಈ ಹಿಂದೆಲ್ಲಾ ದೆಹಲಿಗೆ ಹಾರುತ್ತಿದ್ದ ಆಕಾಂಕ್ಷಿಗಳು, ಇದೀಗ ಬೆಂಗಳೂರಿನ ಸದಾಶಿವನಗರದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲೇ ಬೀಡುಬಿಟ್ಟಿದ್ದಾರೆ. ಟಿಕೆಟ್ ಗಿಟ್ಟಿಸಲು ತಮ್ಮ ನಾಯಕರ ಮೂಲಕ ಬಿರುಸಿನ ಲಾಬಿ ನಡೆಸುತ್ತಿರುವುದು ವಿಶೇಷ.








