ವೈದ್ಯಕೀಯ ಸಂಸ್ಥೆಗಳು ಮತ್ತು ಆಸ್ಪತ್ರೆಗಳ ಸಮಸ್ಯೆ: ಗವರ್ನರ್ ಕೌನ್ಸಿಲಿಂಗ್ ಸಭೆ ನಡೆಸಿ ಇತ್ಯರ್ಥ: ಸಚಿವ ಡಿ.ಕೆ.ಶಿವಕುಮಾರ

 ಬಳ್ಳಾರಿ:

      ರಾಜ್ಯದಲ್ಲಿರುವ ವೈದ್ಯಕೀಯ ಸಂಸ್ಥೆಗಳು ಮತ್ತು ಆಸ್ಪತ್ರೆಗಳ ಸಮಸ್ಯೆ-ಸವಾಲುಗಳಿಗೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಗವರ್ನರ್ ಕೌನ್ಸಿಲಿಂಗ್ ಸಭೆ ನಡೆಸಿ ಈ ಸಂಸ್ಥೆ ಮತ್ತು ಆಸ್ಪತ್ರೆಗಳ ಸಮಸ್ಯೆಗಳನ್ನು ಕುರಿತು ಸುಧೀರ್ಘವಾಗಿ ಚರ್ಚಿಸಲಾಗುವುದು ಮತ್ತು ಅವುಗಳ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ ಅವರು ಹೇಳಿದರು.

      ನಗರದ ವಿಮ್ಸ್‍ಗೆ ಗುರುವಾರ ಭೇಟಿ ನೀಡಿ ನಿರ್ದೇಶಕರ ಸಭಾಂಗಣದಲ್ಲಿ ಸಭೆ ನಡೆಸಿ ಅವರು ಮಾತನಾಡಿದರು.
ವಿಜಯನಗರ ವೈದ್ಯಕೀಯ ಸಂಸ್ಥೆ ಮತ್ತು ಆಸ್ಪತ್ರೆ(ವಿಮ್ಸ್) ಸೇರಿದಂತೆ ರಾಜ್ಯದಲ್ಲಿರುವ ಎಲ್ಲ ವೈದ್ಯಕೀಯ ಸಂಸ್ಥೆಗಳು ಮೂಲಸೌಕರ್ಯ, ಅನುದಾನದ ಕೊರತೆ, ಕಟ್ಟಡ, ಸಿಬ್ಬಂದಿ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ಬಳಲುತ್ತಿವೆ. ಇದಕ್ಕಾಗಿ ಗವರ್ನರ್ ಕೌನ್ಸಿಲಿಂಗ್ ಸಭೆಯನ್ನು ಒಂದು ದಿನ ನಡೆಸಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ ಎಂದರು.

ವಿಮ್ಸ್ ಜಾಗ ಜಿಪಿಎಸ್ ಸರ್ವೆಗೆ ಸೂಚನೆ:

      ವಿಜಯನಗರ ವೈದ್ಯಕೀಯ ಸಂಸ್ಥೆ ಮತ್ತು ಆಸ್ಪತ್ರೆ(ವಿಮ್ಸ್)ಯ ಜಾಗವನ್ನು ಅತ್ಯಂತ ಯೋಜಿತವಾಗಿ ಜಿಪಿಎಸ್ ಸರ್ವೆ ಮೂಲಕ ಶೀಘ್ರ ಸಮೀಕ್ಷೆ ನಡೆಸಿ, ಎಷ್ಟು ಒತ್ತುವರಿಯಾಗಿದೆ ಮತ್ತು 175 ಎಕರೆ ಜಾಗದಲ್ಲಿ ಈಗ ತಮ್ಮಲ್ಲಿ ಎಷ್ಟು ಉಳಿದಿದೆ ಎಂಬುದು ಗೊತ್ತಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ ಅವರು ವಿಮ್ಸ್ ನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

      ವಿಮ್ಸ್‍ಗೆ ಹೊಸ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇಲ್ಲ; ಅದಕ್ಕಿಂತಲೂ ಮೊದಲು ನಮ್ಮ ಜಾಗ ಎಷ್ಟಿದೆ ಎಂಬುದು ತಿಳಿದುಕೊಳ್ಳಬೇಕು ಎಂದು ಹೇಳಿದ ಸಚಿವ ಡಿಕೆಶಿ ಅವರು ಟಿಎಸ್‍ಎಸ್ ಸಮೀಕ್ಷೆ ಮಾಡಿ ಅಪ್‍ಡೇಟ್ ಮಾಡಿಕೊಳ್ಳಬೇಕು ಎಂದರು.

      ಅಲ್ಯುಮಿನಿಯಂ ಅಸೋಸಿಯೇಶನ್ ರಚಿಸಿ: ವಿಮ್ಸ್‍ನ ಹಳೆ ವಿದ್ಯಾರ್ಥಿಗಳ ಒಕ್ಕೂಟ ಅಲ್ಯುಮಿನಿಯಂ ಅಸೋಸಿಯೇಶನ್‍ನನ್ನು ಕೂಡಲೇ ರಚಿಸುವಂತೆ ವಿಮ್ಸ್ ನಿರ್ದೇಶಕರಿಗೆ ಸೂಚನೆ ನೀಡಿದ ಸಚಿವ ಡಿಕೆಶಿ ಅವರು, ಯಾರ್ಯಾರು ಇಲ್ಲಿಯವರೆಗೆ ಓದಿದ್ದಾರೆ ಅವರೆಲ್ಲರನ್ನು ಸಂಪರ್ಕಿಸಿ ಮತ್ತು ಸಚಿವರು ಹೇಳಿದ್ದಾರೆ ಅಂತ ಹೇಳಿ. ಒಂದು ದೊಡ್ಡ ಸಮಾವೇಶ(ಕಾನ್ಪರೆನ್ಸ್) ಆಯೋಜಿಸಿ ಅವರನ್ನು ಸನ್ಮಾನಿಸುವ ವ್ಯವಸ್ಥೆ ಮಾಡಬೇಕು ಎಂದರು.

      ಅಲ್ಯುಮಿನಿಯಂ ಅಸೋಸಿಯೇಶನ್‍ಗಾಗಿ ಒಂದಿಷ್ಟು ಕೊಠಡಿಗಳನ್ನು ಅವರಿಗೆ ನೀಡಿ ಮತ್ತು ಯಾರ್ಯಾರು ಬರುವುದಕ್ಕೆ ತಯಾರಿದ್ದಾರೋ ಅಂತವರಿಗೆಲ್ಲ ಹೇಳಿ. ವೆಬ್‍ಸೈಟ್ ಒಪನ್ ಮಾಡಿ ಮತ್ತು ಇದಕ್ಕೆ ಸಂಬಂಧಿಸಿದ ಜಾಹೀರಾತು ನೀಡಿ. 20ದಿನದೊಳಗೆ ಎಷ್ಟು ಜನರನ್ನು ನೋಂದಣಿ ಮಾಡಲಿಕ್ಕಾಗುತ್ತದೆಯೋ ಅಷ್ಟು ಮಾಡಿ ಎಂದು ಅವರು ಸೂಚಿಸಿದರು.ಇವರೆಲ್ಲರಿಗೂ ಸನ್ಮಾನಿಸುವೆ ಮತ್ತು ಯಾರ್ಯಾರು ಎಷ್ಟು ಬೆಳೆದಿದ್ದಾರೆ ಅಂತ ನೋಡೋಣ ಎಂದರು.

ತನಿಖಾ ತಂಡ ರಚನೆಗೆ ಸೂಚನೆ:

      ವಿಮ್ಸ್‍ನಲ್ಲಿರುವ ವೈದ್ಯರು ರೋಗಿಗಳಿಗೆ ಹೊರ ಆಸ್ಪತ್ರೆಗಳಿಗೆ ಕಳುಹಿಸುತ್ತಾರೆ ಅಂತ ಕೇಳಿಬಂದಿದ್ದು,ಇದಕ್ಕೆ ಸಂಬಂಧಿಸಿದಂತೆ ಅಂತರಿಕವಾಗಿ ತನಿಖಾ ತಂಡ ರಚಿಸಿ ತನಿಖೆ ನಡೆಸಬೇಕು ಮತ್ತು ಇದಕ್ಕೆ ಸಂಬಂಧಿಸಿದ ಸಮಗ್ರ ವರದಿಯನ್ನು ನೀಡುವಂತೆ ಸಚಿವ ಡಿಕೆಶಿ ಅವರು ಸೂಚನೆ ನೀಡಿದರು.

      ಹೊರಗುತ್ತಿಗೆ ಸೇವೆ ಪಡೆದಿರುವ ಏಜೆನ್ಸಿಗಳು ನಿಗದಿಪಡಿಸಿದ ಸಂಖ್ಯೆಯಷ್ಟು ಸಿಬ್ಬಂದಿಯನ್ನು ಕಳುಹಿಸದೇ ಹಣ ಪಾವತಿ ಮಾಡಿಕೊಳ್ಳಲಾಗುತ್ತಿದೆ ಎಂಬ ದೂರುಗಳಿದ್ದು,ಅದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೊರಗುತ್ತಿಗೆ ಅಡಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳ ಬ್ಯಾಡ್ಜ್‍ಗೆ ಜಿಪಿಎಸ್ ಅಳವಡಿಸಬೇಕು ಮತ್ತು ಅವರು ಪ್ರತಿದಿನ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳುವಲ್ಲಿ ಬಯೋಮೆಟ್ರಿಕ್ ಮಶೀನ್ ಜತೆಗೆ ಸಿಸಿಟಿವಿ ವಿಡಿಯೋ ಕೂಡ ಕಡ್ಡಾಯವಾಗಿರಬೇಕು ಎಂದು ಅವರು ಸೂಚಿಸಿದರು.

      ಈ ವಿಮ್ಸ್‍ನಲ್ಲಿ ಬಹಳಷ್ಟು ಸಮಸ್ಯೆಗಳು ಕೇಳಿದ್ದೇನೆ. ಒಂದು ದಿನ ಬಂದು ಸಂಪೂರ್ಣವಾಗಿ ಈ ವಿಮ್ಸ್ ಪರಿಶೀಲಿಸುವೆ;ಅಷ್ಟರೊಳಗೆ ಏನೆಲ್ಲಾ ಲೋಪದೋಷಗಳಿವೆಯೋ ಅವುಗಳೆಲ್ಲಾ ಸರಿಪಡಿಸಿಕೊಳ್ಳಿ ಎಂದರು.

      ವಿಮ್ಸ್ ನಿರ್ದೇಶಕರು ತಮ್ಮ ಸಿಬ್ಬಂದಿ ಕೊರತೆ,ಅನುದಾನದ ಸಮಸ್ಯೆ, ಹೊಸ ಕಟ್ಟಡ ನಿರ್ಮಾಣ ಹಾಗೂ ಇನ್ನೀತರ ಸೌಕರ್ಯಗಳ ಸಮಸ್ಯೆಗಳನ್ನು ಸಚಿವ ಡಿಕೆಶಿ ಅವರೆದರು ಬಿಚ್ಚಿಟ್ಟರು.ಇದನ್ನೆಲ್ಲಾ ಆಲಿಸಿದ ಸಚಿವರು ಕ್ರಮಕೈಗೊಳ್ಳಲಾಗುವುದು ಎಂದರು.

      ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್, ಶಾಸಕರಾದ ಬಿ.ನಾಗೇಂದ್ರ, ಆನಂದಸಿಂಗ್, ಗಣೇಶ, ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್, ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ, ಎಸ್ಪಿ ಅರುಣ ರಂಗರಾಜನ್ ಸೇರಿದಂತೆ ವಿಮ್ಸ್‍ನ ವಿವಿಧ ವಿಭಾಗಗಳ ಪ್ರಮುಖರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

  

Recent Articles

spot_img

Related Stories

Share via
Copy link