ಚಳ್ಳಕೆರೆ-07
ಕಳೆದ ಹಲವಾರು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷ ತನ್ನ ಸಂಘಟನೆಯ ಬಲದಿಂದ ಕಾರ್ಯಕರ್ತರ ಶ್ರಮದಿಂದ ಜಯವನ್ನು ಗಳಿಸುತ್ತಿದೆ. ಆದರೆ, ನಗರದಲ್ಲಿ ಇತ್ತೀಚೆಗೆ ನಡೆದ ನಗರಸಭಾ ಚುನಾವಣೆಗಳು ಭಾರತೀಯ ಜನತಾ ಪಕ್ಷಕ್ಕೆ ಹೆಚ್ಚು ಸ್ಥಾನಗಳನ್ನು ತಂದುಕೊಡಲು ಸಾಧ್ಯವಾಗಿಲ್ಲ. ಇದರಿಂದ ಚುನಾವಣೆಯಲ್ಲಿ ಸೋತ ಯಾವುದೇ ಅಭ್ಯರ್ಥಿಗಳು ನಿರಾಶರಾಗದೆ ಎಂದಿನಂತೆ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕೆಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಎಸ್.ನವೀನ್ ತಿಳಿಸಿದರು.
ಅವರು ಶುಕ್ರವಾರ ಪಕ್ಷದ ಕಾರ್ಯಾಲಯದ ಆವರಣದಲ್ಲಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳೊಂದಿಗೆ ಸೋಲಿನ ಪರಾಮರ್ಶೆ ನಡೆಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ನಗರಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ನಾಲ್ಕು ಸ್ಥಾನಗಳನ್ನು ಗಳಿಸಿದ ವಿಜೇತ ನೂತನ ಸದಸ್ಯರಾದ ಸಾಕಮ್ಮ, ಶಿವಕುಮಾರ್, ಎಸ್.ಜಯಣ್ಣ ಹಾಗೂ ಪಾಲಮ್ಮನವರನ್ನು ಪಕ್ಷದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ನೂತನ ನಗರಸಭಾ ಸದಸ್ಯ ಎಸ್.ಜಯಣ್ಣ ಮಾತನಾಡಿ, ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿ ನಗರಸಭೆ ಚುನಾವಣೆಯನ್ನು ಎದುರಿಸಿ ಜಯಗಳಿಸಿದ್ದೇನೆ. ಬಿಜೆಪಿಯಲ್ಲಿ ನುರಿತ ನಾಯಕರ ತಂಡವಿದೆ. ಸಕಾಲದಲ್ಲಿ ಉತ್ತಮ ಮಾರ್ಗದರ್ಶನವನ್ನು ಸಹ ಪಕ್ಷದ ಮುಖಂಡರು ನೀಡಿದ್ಧಾರೆ. ನನ್ನ ವಾರ್ಡ್ನ ಮತದಾರರು ಸಹ ನನ್ನನ್ನು ಹೆಚ್ಚು ಮತಗಳಿಂದ ಚುನಾವಣೆಯಲ್ಲಿ ಗೆಲುವು ತಂದುಕೊಟ್ಟಿದ್ಧಾರೆ. ಮುಂಬರುವ ದಿನಗಳಲ್ಲೂ ಸಹ ಪಕ್ಷ ಸಂಘಟನೆಗೆ ಒತ್ತು ನೀಡುವ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಲಾಧ್ಯಕ್ಷ ಬಿ.ವಿ.ಸಿರಿಯಣ್ಣ ವಹಿಸಿದ್ದರು, ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಬಿ.ಎಸ್.ಶಿವಪುತ್ರಪ್ಪ, ಬಾಳೆಮಂಡಿರಾಮದಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರತ್ನಮ್ಮ, ಬೋರನಾಯಕ, ಬಾಲರಾಜು, ಎ.ವಿಜಯೇಂದ್ರ, ದೇವೇಂದ್ರಪ್ಪ, ಜೆಎಂಸಿ ವೀರೇಶ್, ಆರ್.ನಾಗೇಶ್ನಾಯಕ ಮುಂತಾದವರು ಉಪಸ್ಥಿತರಿದ್ದರು.