ಉತ್ತಮ ಹವ್ಯಾಸಗಳಿಂದ ಮಾನಸಿಕ ರೋಗ ನಿವಾರಣೆ ಸಾಧ್ಯ

ತುಮಕೂರು:

    ಪುಸ್ತಕಗಳನ್ನು ಓದುವುದು ಸೇರಿದಂತೆ ಉತ್ತಮ ಹವ್ಯಾಸಗಳತ್ತ ಹೆಚ್ಚು ಗಮನ ಹರಿಸಿದರೆ ಮಾನಸಿಕ ರೋಗಗಳಿಂದ ಮುಕ್ತಿ ಹೊಂದಲು ಸಾಧ್ಯವಿದೆ ಎಂದು ಸ್ನೇಹ ಮನೋವಿಕಾಸ ಕೇಂದ್ರದ ಮನೋವೈದ್ಯ ಡಾ.ಲೋಕೇಶ್ ಬಾಬು ತಿಳಿಸಿದರು.

   ಸಿದ್ಧಾರ್ಥ ಇನಿಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ಮ್ಯಾನೇಜ್‍ಮೆಂಟ್ ಸಹಯೋಗದಲ್ಲಿ ಆಯೋಜಿಸಿದ್ದ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಿದ್ದ ಅವರು, ಬಹಳಷ್ಟು ವ್ಯಕ್ತಿಗಳು ಉತ್ತಮ ಹವ್ಯಾಸಗಳಿಂದಾಗಿ ಮಾನಸಿಕವಾಗಿ ಬದಲಾಗಿರುವ ಉದಾಹರಣೆಗಳಿವೆ. ಅಂತಹ ಹವ್ಯಾಸಗಳತ್ತ ಹೆಚ್ಚು ಗಮನ ಹರಿಸುವುದು ಒಳ್ಳೆಯದು ಎಂದರು.

   ಈಗಿನ ಪರಿಸ್ಥಿತಿಗಳು ಹೀಗೆಯೇ ಮುಂದುವರೆದರೆ 2030ರ ವೇಳೆಗೆ ಪ್ರತಿ ಸೆಕೆಂಡಿಗೆ ಒಬ್ಬ ವ್ಯಕ್ತಿ ಮಾನಸಿಕ ರೋಗಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತಾಗುತ್ತದೆ. ಆದಕಾರಣ ಮಾನಸಿಕ ಕಾಯಿಲೆಯ ಬಗ್ಗೆ ಈಗಿನಿಂದಲೇ ಜಾಗೃತಿ ವಹಿಸಬೇಕು. 15 ರಿಂದ 40 ವರ್ಷಗಳ ವಯೋಮಾನದವರಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಇವರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಆತ್ಮಹತ್ಯೆಗೆ ಒಳಗಾಗಲು ಅನೇಕ ಕಾರಣಗಳು ಸಹಾಯ ಮಾಡುತ್ತವೆ. ಯುವ ಜನತೆಯಲ್ಲಿ ಪ್ರೇಮ ವೈಫಲ್ಯ, ಮಾದಕ ವಸ್ತುಗಳಿಗೆ ಒಳಗಾಗುವುದು ಹೆಚ್ಚಿನದಾಗಿ ಕಂಡುಬರುತ್ತಿದೆ. ಈ ಬಗ್ಗೆ ಎಚ್ಚರಿಕೆ ಅಗತ್ಯ ಎಂದರು.

    ಮಾನಸಿಕ ರೋಗಕ್ಕೆ ಒಳಗಾಗುವವರನ್ನು ಕಂಡು ಹಿಡಿಯಬಹುದು. ಆತನ ಚಿಹ್ನೆಗಳಲ್ಲಿ ಬದಲಾವಣೆ ಕಂಡುಬರುತ್ತದೆ. ಊಟ, ತಿಂಡಿಯಲ್ಲಿ ವ್ಯತ್ಯಾಸವಾಗುವುದು, ಎಲ್ಲದರಲ್ಲಿಯೂ ನಿರಾಸಕ್ತಿ ವಹಿಸುವುದು, ಆತ್ಮಹತ್ಯೆ ಮಾಡಿಕೊಂಡರೆ ಏನಾಗುತ್ತದೆ ಎಂದು ಪ್ರಶ್ನಿಸುವುದು ಸೇರಿದಂತೆ ಹಲವು ವಿಷಯಗಳು ಆತನ ತಲೆಯಲ್ಲಿ ಬಂದು ಹೋಗಿರುತ್ತವೆ. ಈ ನಡವಳಿಕೆಯ ಮೂಲಕವೇ ಒಬ್ಬ ವ್ಯಕ್ತಿಯ ಮಾನಸಿಕ ರೋಗವನ್ನು ಗುರುತಿಸಬಹುದು. ಆತ ಆತ್ಮಹತ್ಯೆ ಮಾಡಿಕೊಳ್ಳಲು ಹೋಗುವುದನ್ನು ತಡೆಯಬಹುದು ಎಂದರು.

    ಮಾನಸಿಕ ರೋಗಕ್ಕೆ ಒಳಗಾಗುವವರಿಗೆ ಕೌನ್ಸಿಲಿಂಗ್ ತುಂಬಾ ಅಗತ್ಯವಿರುತ್ತದೆ. ಇದು ಇಷ್ಟಕ್ಕೆ ಸಾಕಾಗುವುದಿಲ್ಲ. ವೈದ್ಯಕೀಯ ಸಹಕಾರವೂ ಬೇಕಾಗುತ್ತದೆ. ಬಹಳಷ್ಟು ಜನರು ತಾಯತ ಕಟ್ಟಿ ದೇವಸ್ಥಾನಗಳಿಗೆ ಹರಕೆ ಮಾಡಿಕೊಳ್ಳುತ್ತಾರೆ. ಮಾನಸಿಕ ರೋಗಗಳು ಇಂತಹ ಉಪಚಾರಗಳಿಂದ ಗುಣಪಡಿಸಲಾಗದು ಎಂದವರು ತಿಳಿಸಿದರು.ಮುಖ್ಯ ಅತಿಥಿಗಳಾಗಿ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಚೇತನ್, ಪ್ರಾಂಶುಪಾಲ ಡಾ.ಎನ್.ಎಸ್.ರವಿಕುಮಾರ್ ಮಾತನಾಡಿದರು.

                 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap