ದಾವಣಗೆರೆ:
ವಿಧಾನಸಭೆ ಚುನಾವಣೆಯಲ್ಲಿ ನಾಲ್ಕು ಬಾರಿ ಜನರಿಂದ ತಿರಸ್ಕರಿಸಲ್ಪಟ್ಟಿರುವ ಬಿಜೆಪಿಯ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ರಿಜೆಕ್ಟೆಡ್ ಗೂಡ್ಸ್ ಆಗಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ಯಶವಂತರಾವ್ ಜಾಧವ್ರವರು ಶಾಮನೂರು ಶಿವಶಂಕರಪ್ಪನವರು ರಿಜೆಕ್ಟ್ ಗೂಡ್ಸ್ ಎಂಬುದಾಗಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಿಂದ ನಾಲ್ಕು ಬಾರಿ ತಿರಸ್ಕøತಗೊಂಡಿರುವ ರಿಜೆಕ್ಟೆಡ್ ಗೂಡ್ಸ್ ಆಗಿರುವ ಯಶವಂತರಾವ್ ಜಾಧವ್ ಶಾಮನೂರು ಶಿವಶಂಕರಪ್ಪನವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಮನೂರು ಶಿವಶಂಕರಪ್ಪನವರನ್ನು ವೈಕ್ತಿಕವಾಗಿ ನಿಂದಿಸಿಯೇ ಬಿಜೆಪಿಯಲ್ಲಿ ಸ್ಥಾನಮಾನ ಪಡೆದಿರುವ ಯಶವಂತರಾವ್ ಜಾಧವ್ ಅವರಿಗೆ ಬಿಜೆಪಿಯಲ್ಲಿ ಯಾವುದೇ ಮಾರ್ಯದೆ ಇಲ್ಲ. ಜಾಧವ್ ಹಿಂದೆ ನಗರಸಭೆ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ಅಭಿವೃದ್ಧಿಯಾಗಿರದ ನೂರಾರು ಎಕರೆ ಜಮೀನಿಗೆ ಹಣ ಪಡೆದು ಮನಸೋಇಚ್ಛೆ ಡೋರ್ ನಂಬರ್ ನೀಡಿ, ಲೋಕಾಯುಕ್ತ ತನಿಖೆ ಎದುರಿಸಿದ್ದಾರೆ.
ಅಲ್ಲದೆ, ಡೂಡಾ ಅಧ್ಯಕ್ಷರಾಗಿದ್ದ ಸಂದರ್ಭದಲ್ಲೂ ಹಣ ಕೊಟ್ಟವರಿಗೆಲ್ಲಾ ನಿವೇಶನ ಹಂಚಿಕೆ ಮಾಡಿದ್ದಾರೆ. ರಾಜಕೀಯವನ್ನು ದುಡ್ಡು ಮಾಡುವ ದಂಧೆ ಮಾಡಿಕೊಂಡಿರುವ ಯಶವಂತ್ರಾವ್ ಜಾಧವ್ ಅವರಿಗೆ ಶಾಮನೂರು ಶಿವಶಂಕರಪ್ಪನವರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಹೇಳಿದರು.
ಯಶವಂತರಾವ್ ರಾಜಕೀಯದಲ್ಲಿ ಇರುವುದೇ ಹಣ ಮಾಡಲಿಕ್ಕಾಗಿ ನನಗಿರುವ ಮಾಹಿತಿಯ ಪ್ರಕಾರ ಬಿಜೆಪಿ ನೀಡಿದ್ದ 10 ಕೋಟಿ ಎಲೆಕ್ಷನ್ ಫಂಡ್ನಲ್ಲಿ 5 ಕೋಟಿ ಉಳಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಸೋತವರು ಸುಣ್ಣ ಆಗುತ್ತಾರೆ. ಆದರೆ, ಇವರು ಎಷ್ಟೂ ಸತಿ ಸೋತರೂ ಸುಣ್ಣವಾಗಲ್ಲ. ಬದಲಿಗೆ ಮನೆ ಕಟ್ಟಿಸುತ್ತಾರೆ ಎಂದು ಆರೋಪಿಸಿದ ಅವರು, ಶಾಮನೂರು ಶಿವಶಂಕರಪ್ಪನವರಿಗೆ ದುಡ್ಡು ಮಾಡುವ ಅವಶ್ಯಕತೆ ಇಲ್ಲ.
ಶಾಮನೂರು ಶಿವಶಂಕರಪ್ಪನವರು ಹಲವರಿಗೆ ದಾನ ಮಾಡಿದ್ದಾರೆ. ಕಲ್ಯಾಣ ಮಂಟಪ ಕಟ್ಟಿಸಿದ್ದಾರೆ. ಹಲವು ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಆದರೆ, ಯಶವಂಥರಾವ್ ಜಾಧವ್ ಯಾರಿಗೆ ಸಹಾಯ ಮಾಡಿದ್ದಾರೆ?,, ಎಷ್ಟು ಜನರಿಗೆ ಕೆಲಸ ಕೊಟ್ಟಿದ್ದಾರೆ? ಎಷ್ಟು ಧರ್ಮಛತ್ರ ಕಟ್ಟಿಸಿದ್ದಾರೆಂದು ಪ್ರಶ್ನಿಸಿದರು.
ಕಾಂಗ್ರೆಸ್ ವಕ್ತಾರ ಇಮ್ತಿಯಾಜ್ ಹುಸೇನ್ ಮಾತನಾಡಿ, ಗುಜುರಿಗೆ ಹೋಗಿರುವವರು ಚಾಲ್ತಿಯಲ್ಲಿರುವವರ ಬಗ್ಗೆಯೇ ಹೆಚ್ಚು ಮಾತನಾಡುತ್ತಾರೆ. ಚುನಾವಣೆಯಲ್ಲಿ ನಿಂತುಕೊಳ್ಳುವುದನ್ನೇ ಒಂದು ದಂಧೆ ಮಾಡಿಕೊಂಡಿದ್ದಾರೆ. ಅಂಥವರು ಶಾಮನೂರು ಶಿವಶಂಕರಪ್ಪನವರಂಥವರ ಬಗ್ಗೆ ಮಾತನಾಡುವುದನ್ನು ನೋಡಿದರೆ, ನಗಬೇಕೋ, ಅಳಬೇಕೋ ಅಂತಾ ಗೊತ್ತಾಗುತ್ತಿಲ್ಲ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಮುಖಂಡ ಕೆ.ಜಿ.ಶಿವಕುಮಾರ್ ಮಾತನಾಡಿ, ಕೊಡಗೈದಾನಿಯಾಗಿರುವ ಶಾಮನೂರು ಶಿವಶಂಕರಪ್ಪನವರು ಜಾತ್ಯಾತೀತವಾಗಿ ಸುಮಾರು 33 ಸಮುದಾಯಗಳಿಗೆ ಡೂಡಾದಿಂದ ರಿಯಾಯಿತಿ ದರದಲ್ಲಿ ನಿವೇಶನ ಕೊಡಿಸಿದ್ದಾರೆ. ಶಾಮನೂರು ಎಲ್ಲ ವರ್ಗದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರ ವಯಸ್ಸಿಗೆ, ಸ್ಥಾನಮಾನಕ್ಕಾದರೂ ಗೌರವ ಕೊಡಬೇಕಾಗಿದೆ. ದಾವಣಗೆರೆ ಹೆಸರು ಜಗತ್ತಿನ ಭೂಪಟದಲ್ಲಿ ಗುರುತಿಸುವಂತೆ ಮಾಡಿರುವುದರಲ್ಲಿ ಶಾಮನೂರು ಕುಟುಂಬದವರ ಪಾಲು ಸಹ ಇದೆ. ಆದ್ದರಿಂದ ಈ ಇವರ ಬಗ್ಗೆ ಮಾತನಾಡಬೇಕಾದರೆ, ಬಾಯಿ ಬಿಗಿ ಹಿಡಿದು ಮಾತನಾಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಎಂ.ಹಾಲೇಶ್, ಕಾಂಗ್ರೆಸ್ ಮುಖಂಡರುಗಳಾದ ಎ.ನಾಗರಾಜ್, ಬಸವರಾಜ್, ವಿಜಯಕುಮಾರ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
