ಚಳ್ಳಕೆರೆ
ಜಿಲ್ಲಾ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಚಿತ್ರದುರ್ಗದಲ್ಲಿ ನಡೆದಿದ್ದು, ಇಲ್ಲಿನ ಮಾಕಂಸ್ ರೋಟರಿ ಪ್ರೌಢಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉತ್ತಮ ಆಟ ಪ್ರದರ್ಶಿಸಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಸಂಸ್ಥೆಯ ಅಧ್ಯಕ್ಷ ಡಾ.ಕೆ.ಎಂ.ಜಯಕುಮಾರ್ ಜಯಸಾಧಿಸಿದ ಎಲ್ಲಾ ಆಟಗಾರರನ್ನು ಅಭಿನಂದಿಸಿದ್ಧಾರೆ.
ಮಂಗಳವಾರ ಶಾಲೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕ್ರೀಡಾಕೂಟದಲ್ಲಿ ಉತ್ತಮ ಆಟದ ಮೂಲಕ ಗೆಲುವು ಸಾಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಕೆ.ಎಂ.ಜಯಕುಮಾರ್ , ಮಾಕಂಸ್ ರೋಟರಿ ಪ್ರೌಢಶಾಲೆ ಕೇವಲ ಫಲಿತಾಂಶದಲ್ಲಿ ಅಷ್ಟೇಯಲ್ಲ, ಇಂತಹ ಕ್ರೀಡೆಗಳಲ್ಲೂ ಸಹ ಮುನ್ನಡೆ ಸಾಧಿಸಿರುವುದು ಸಂತಸ ತಂದಿದೆ ಎಂದರು.
ಮುಖ್ಯೋಪಾಧ್ಯಾಯ ಯೋಗೇಶ್ವರ್ ಮಾತನಾಡಿ, ನಮ್ಮ ಶಾಲೆಯ ವಿದ್ಯಾರ್ಥಿಗಳು ಬಾಲಕರ ಖೋ-ಖೋ ವಿಭಾಗದಲ್ಲಿ ಪ್ರಥಮ ಸ್ಥಾನ, ಬ್ಯಾಸೆಕೆಟ್ ಬಾಲ್ನಲ್ಲಿ ಬಾಲಕಿಯರು ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ವಿದ್ಯಾರ್ಥಿಗಳಲ್ಲಿ ಉತ್ತಮ ಕ್ರೀಡಾ ಸ್ಪೂರ್ತಿಯನ್ನು ತುಂಬಲು ಈ ಶಾಲೆಯ ದೈಹಿಕ ಶಿಕ್ಷಕ ಎಂ.ವಿ.ಶ್ರೀನಿವಾಸ್ರವರ ಪರಿಶ್ರಮ ಕಾರಣ. ವಿಜೇತ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಯಾಸೀನ್, ಸಿದ್ದೇಶ್, ಅಶೋಕ್, ಉಮಾ, ಶಿವಕುಮಾರಿ, ರೇಖಾ, ಪ್ರಭು, ತೇಜಸ್ವಿನಿ, ಸರ್ಬೀನ್ ತಾಜ್ ಮುಂತಾದವರು ಭಾಗವಹಿಸಿದ್ದರು.








