ಶಿರಾ
ಇಂದಿನ ಯುವ ಜನರಲ್ಲಿ ಸಾಹಿತ್ಯ, ಸಾಂಸ್ಕತಿಕ ಆಸಕ್ತಿಯನ್ನು ಮೂಡಿಸಬೇಕಿದ್ದು, ಕನ್ನಡದ ಉಳಿವಿಗಾಗಿ ಹೋರಾಡುವಂತಹ ಪರಿಸ್ಥಿತಿ ನಮ್ಮದೇ ನಾಡಿನ ಜನರಿಗೆ ಬಂದಿರುವುದು ವಿಪರ್ಯಾಸದ ಸಂಗತಿ. ಕನ್ನಡಿಗರ ನಾಲಿಗೆಯ ಮೇಲೆ ಕನ್ನಡ ಸುಲಿತವಾಗಿ ನಲಿಯಬೇಕೆಂದರೆ ಮೊದಲು ಕನ್ನಡಿಗರ ಜೀವ ಉಳಿಯಬೇಕಿದೆ ಎಂದು ಸಾಹಿತಿ ಹಾಗೂ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಶಿರಾ ನಗರದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೈಗೊಳ್ಳಲಾಗಿದ್ದ ಕನ್ನಡ ಭವನದ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಕನ್ನಡ ಭವನಗಳು ನಿರ್ಮಾಣಗೊಳ್ಳುವಾಗ ಪಕ್ಷ, ಜಾತಿಗಳನ್ನು ಮೀರಿ ನಿರ್ಮಾಣಗೊಳ್ಳಬೇಕು. ಕನ್ನಡ ನಾಡನ್ನು ಎಲ್ಲಾ ಜಾತಿ ಜನರು ಸೇರಿ ಕಟ್ಟಿದ್ದಾರೆ. ಕಿಟಲ್, ರೈಸ್, ಶಿಶುನಾಳ ಶರೀಫ, ನಿಸಾರ್ ಅಹಮದ್ ಹೀಗೆ ನಾನಾ ಜಾತಿಗಳ ಮೇಧಾವಿಗಳ ಶ್ರಮದ ಪ್ರತಿಫಲವೇ ಕನ್ನಡ ಸಾಹಿತ್ಯದ ಬೆಳವಣಿಗೆಯೂ ಆಗಿದೆ. ಸಾಹಿತ್ಯ ಪರಿಷತ್ತು ಜನಿಸಲು ಮೂಲ ಕಾರಣಕರ್ತರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಬಯಕೆಯಂತೆ ಪರಿಷತ್ತಿನ ಕಾರ್ಯ ಚಟುವಟಿಕೆಗಳು ಮುನ್ನಡೆಯಬೇಕಿದೆ. ಇಂದು ಅನೇಕ ಕನ್ನಡ ಭವನಗಳು ಭಜನಾ ಭವನಗಳಾಗಿವೆ ಎಂದು ವಿಷಾದಿಸಿದರು.
ಕನ್ನಡ ಭವನಗಳನ್ನು ನಿರ್ಮಾಣ ಮಾಡುವುದು ಸುಲಭ. ಆದರೆ ಈ ಭವನಗಳಲ್ಲಿ ನಡೆಯುವ ಕಾರ್ಯ ಚಟುವಟಿಕೆಗಳು ಕ್ರೀಯಾಶೀಲತೆಯನ್ನು ಪಡೆಯಬೇಕು. ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ನಿರಂತರವಾಗಿ ನಡೆಯುವಂತಾಗಬೇಕು.
ನಾಮಫಲಕದಲ್ಲಷ್ಟೇ ಕನ್ನಡ ಭಾಷಾಭಿಮಾನ ಇರಬಾರದು. ಕನ್ನಡದ ಅಭಿಮಾನ ಅನ್ನುವುದು ಮೆದುಳಿಗೆ ಹಾಗೂ ಮನಸ್ಸಿಗೆ ಬರುವಂತಾಗಬೇಕು. ಸಾಂಸ್ಕತಿಕ ಸಂಸ್ಥೆಗಳು ಜಾತಿ ವಿನಾಶವನ್ನು ಮಾಡಬೇಕೆ ಹೊರತು ಜಾತಿಯ ವಿಷಬೀಜ ಬಿತ್ತಬಾರದು ಎಂದರು.
ಸಂವಿಧಾನದ ಕತ್ತು ಹಿಸುಕಿದವರು ರಾಜಕೀಯಯವಾಗಿ ಮೇಲಾಟ ನಡಸಿಕೊಂಡು ಓಡಾಡುತ್ತಿದ್ದಾರೆ. ಸಾಹಿತಿಗಳು, ಜಾತ್ಯತೀತವಾದಿಗಳ ಮೇಲೆ ಹಲ್ಲೆ, ಹತ್ಯೆಯಂತಹ ಘಟನೆಗಳು ನಡೆದರೂ ಕನ್ನಡಿಗರು ಮೌನವಾಗಿ ಕೂರುವಂತಹ ಪರಿಸ್ಥಿತಿ ಬಂದಿರುವುದು ನಮ್ಮ ದೌರ್ಭಾಗ್ಯವೇ ಸರಿ. 21 ನೆಯ ಶತಮಾನ ಸಂಭ್ರಮದ, ಸುಖದ ಶತಮಾನವಲ್ಲ. 20 ನೇ ಶತಮಾನದಲ್ಲಿದ್ದ ಕನ್ನಡ ಜೀವಶಕ್ತಿ ಇಂದು ಇಲ್ಲದಂತಾಗಿದೆ. ಐಟಿ, ಬಿಟಿ ಕಲಿತವರೂ ಕನ್ನಡ ಕಲಿಯುಂತಾಗಿದ್ದರೂ ತಾಯಿತನವಿಲ್ಲದ ಸಮಾಜವನ್ನು ನಾವು ಕಾಣುವಂತಾಗಿದೆ ಎಂದು ಬರಗೂರು ರಾಮಚಂದ್ರಪ್ಪ ವಿಷಾದಿಸಿದರು.
ಧರ್ಮ, ಜಾತಿ ಭಾಷೆಗಳ ಹೆಸರಲ್ಲಿ ಯುವ ಜನತೆಯನ್ನು ಒಡೆದು ಆಳುವಂತಹ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿದ್ದು, ನಾಡಿನ ಯುವ ಶಕ್ತಿಗೆ ಚೈತನ್ಯ ತುಂಬುವ ಕೆಲಸವನ್ನು ಸಾಹಿತ್ಯ ಪರಿಷತ್ತು ಹಾಗೂ ಕನ್ನಡಪರ ಸಂಘಟನೆಗಳು ಮಾಡುವುದು ಅತ್ಯಗತ್ಯವಾಗಿದೆ ಎಂದು ಬರಗೂರು ರಾಮಚಂದ್ರಪ್ಪ ಹೇಳಿದರು.
ಶಾಸಕ ಹಾಗೂ ಮಾಜಿ ಸಚಿವ ಬಿ.ಸತ್ಯನಾರಾಯಣ್ ಮಾತನಾಡಿ, ಈ ಹಿಂದೆ ಮೈರಾಡ ಅನ್ನುವ ಖಾಸಗಿ ಸಂಸ್ಥೆಯೊಂದರ ಹಿಡಿತದಲ್ಲಿದ್ದ ಭೂಮಿಯನ್ನು ನಾನು ಸಚಿವನಾಗಿದ್ದ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗಿತ್ತು. ನಂತರ ಆ ಖಾಸಗಿ ಸಂಸ್ಥೆಯಿಂದಲೇ ಸದರಿ ಜಮೀನನ್ನು ದಾನದ ರೂಪದಲ್ಲಿ ಪಡೆಯಲಾಯಿತು.
ಅದೇ ಭೂಮಿಯಿಂದ ಇಂದು ನೂತನ ಸರ್ಕಾರಿ ಪ್ರ.ದ. ಕಾಲೇಜಿನ ಕಟ್ಟಡದ ಜೊತೆಗೆ, ಕನ್ನಡ ಭವನದ ನಿವೇಶನಕ್ಕೂ ಅವಕಾಶವಾಯಿತು. ಭವನದಲ್ಲಿ ಕನ್ನಡಪರ ಚಟುವಟಿಕೆಗಳು ನಿರಂತರವಾಗಿ ನಡೆಯಲಿ ಅನ್ನುವುದೇ ನನ್ನ ಆಶಯ ಎಂದು ತಿಳಿಸಿದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಶಿರಾದಲ್ಲಿನ ಕನ್ನಡ ಭವನಕ್ಕೆ ನಾನು ಸಚಿವನಾದಾಗ ಶಂಕುಸ್ಥಾಪನೆ ಮಾಡಿದ್ದೆನು. ಹಂತ ಹಂತವಾಗಿ ನಿರ್ಮಾಣಗೊಂಡ ಕನ್ನಡ ಭವನಕ್ಕೆ ಅನೇಕ ಮಂದಿ ಕೈಜೋಡಿಸಿದ್ದಾರೆ.
ಸದರಿ ಭವನದಲ್ಲಿ ಪುಸ್ತಕ ಭಂಡಾರ ನಿರ್ಮಾಣಗೊಳ್ಳಬೇಕು. ಸಾಹಿತಿಗಳು, ಬರಹಗಾರರು ಈ ಪುಸ್ತಕ ಭಂಡಾರಕ್ಕೆ ಪುಸ್ತಕಗಳನ್ನು ನೀಡುವ ಮೂಲಕ ಸಾಹಿತ್ಯದ ಬೆಳವಣಿಗೆಗೆ ಸಹಕರಿಸಬೇಕು ಎಂದರು.
ಹಿರಿಯ ಭೂವಿಜ್ಞಾನಿ ಟಿ.ಆರ್.ಅನಂತರಾಮು, ಗ್ರಾಮೀಣಾಭಿವೃದ್ಧಿ ಇಲಾಖೆಯ ನಿರ್ದೇಶಕ ಬೂವನಹಳ್ಳಿ ನಾಗರಾಜು, ಜಿಲ್ಲಾ ಕ.ಸಾ.ಪ. ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಪ್ರೊ.ಕೆ.ಹನುಮಂತರಾಯಪ್ಪ, ಜಿ.ಎಲ್.ರಾಮಣ್ಣ, ಚಿ.ಸೂ.ಕೃಷ್ಣಮೂರ್ತಿ, ಆರ್.ರಾಮು, ಹಿಮಂತರಾಜು, ಜೆ.ಎನ್.ರಾಜಸಿಂಹ, ಲಕ್ಷ್ಮೀಶ್, ಎಸ್.ಎನ್.ಕೃಷ್ಣಯ್ಯ, ವಕೀಲ ಗುರುಮೂರ್ತಿ, ಎ.ಪಿ.ಎಂ.ಸಿ. ಅಧ್ಯಕ್ಷ ಸತ್ಯನಾರಾಯಣ್, ರಂಗಾರೆಡ್ಡಿ ಕೋಡಿರಾಂಪುರ, ತಾ.ಕಸಾಪ ಅಧ್ಯಕ್ಷ ಡಾ.ನಂದೀಶ್ವರ್, ಕಾರ್ಯದರ್ಶಿ ಚಿದಾನಂದ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
