ಬಳ್ಳಾರಿ:
ಸಚಿವ ಡಿ.ಕೆ. ಶಿವಕುಮಾರ್ ಎಷ್ಟೇ ರಣತಂತ್ರ ಹೆಣೆದರೂ ಬಳ್ಳಾರಿಯ ಉಪ-ಚುನಾವಣೆಯಲ್ಲಿ ಗೆಲುವು ನಮ್ಮದೇ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ.
ಬಳ್ಳಾರಿ ಲೋಕಸಭೆ ಉಪಚುನಾವಣೆ ನಿಮಿತ್ತ ಶನಿವಾರ ಇಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಶಿವಕುಮಾರ್ ಮೈತುಂಬ ಭ್ರಷ್ಟಾಚಾರದ ಪ್ರಕರಣಗಳು ಮೆತ್ತಿಕೊಂಡಿವೆ. ಹೀಗಿರುವಾಗ ಬಳ್ಳಾರಿ ಜಿಲ್ಲೆಯ ಭವಿಷ್ಯ ಬದಲಾಯಿಸುವ ಮಾತುಗಳನ್ನು ಆಡುತ್ತಿದ್ದಾರೆ. ಅವರ ಭವಿಷ್ಯವೇ ಅವರಿಗೆ ಗೊತ್ತಿಲ್ಲ ಎಂದರು.
ಸಚಿವ ಶಿವಕುಕುಮಾರ್ ಅವರೇ ನೀವು ಯಾವ ಸಂಧರ್ಭದಲ್ಲಿ ಜೈಲಿಗೆ ಹೋಗ್ತೀರಿ ಅಂತ ಗೊತ್ತಿಲ್ಲ. ಲೂಟಿ ಮಾಡಿದ ಬಡವರ ಹಣ ತಂದು ಬಳ್ಳಾರಿ ಜಿಲ್ಲೆಯಲ್ಲಿ ಸುರಿದು ಗೆಲ್ಲಬೇಕೆಂಬ ಪ್ರಯತ್ನ ಮಾಡ್ತೀರಾ..? ಸಮ್ಮಿಶ್ರ ಸರ್ಕಾರ ಹಾಗೂ ಕಾಂಗ್ರೆಸ್ ಸರ್ಕಾರದಲ್ಲಿ ಲೂಟಿ ಹೊಡೆದಂತ ಹಣ ತಂದು ರಾಜಕಾರಣ ಮಾಡುತ್ತಿದ್ದೀರಿ. ಬಡವರ ಕೂಗಿನ, ಶೋಷಿತರ ಕರುಳಿನ ನೋವಿನ ಹಣದಲ್ಲಿ ನೀವು ರಾಜಕಾರಣ ಮಾಡ್ತಾ ಇದ್ದೀರಿ ಎಂದು ಆರೋಪಿಸಿದರು.
ಬಳ್ಳಾರಿಯ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯನವರು ಕರೆದ ಸಭೆಗೆ ಹೋಗುತ್ತಾರೆ. ಆದರೆ, ಶಿವಕುಮಾರ್ ಅವರು ಕರೆದ ಸಭೆಗೆ ಹೋಗಿರಲಿಲ್ಲ. ಇದರಿಂದ ಅವರ ವರ್ಚಸ್ಸು ಗೊತ್ತಾಗುತ್ತದೆ. ಇಲ್ಲಿಯವರೆಗೆ ಅವರಿಗೆ ಅಭ್ಯರ್ಥಿಗಳನ್ನು ಘೋಷಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
