ತುಮಕೂರು:
ಡಾಬಸ್ಪೇಟೆ ಬಳಿಯ ಹಳೇ ನಿಜಗಲ್ ಕೆರೆಯ ದಡದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸೋಮವಾರ ಮೂವರು ಎನ್.ಎಸ್.ಎಸ್.ವಿದ್ಯಾರ್ಥಿಗಳು ನೀರು ಪಾಲಾಗಿದ್ದು, ಈ ಸಂಬಂಧ ತುಮಕೂರು ತಾಲ್ಲೂಕು ಯಲ್ಲಾಪುರದ ಪೂರ್ಣಚಂದ್ರ (18) ನ ಪೋಷಕರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಶವ ಇಟ್ಟು ಕೆಲಕಾಲ ಪ್ರತಿಭಟನೆ ನಡೆಸಿದರು.
ತುಮಕೂರಿನ ಸಿದ್ಧಗಂಗಾ ಕಾಲೇಜಿನ 51 ವಿದ್ಯಾರ್ಥಿಗಳು ಅ.10 ರಂದು ಡಾಬಸ್ಪೇಟೆ ವ್ಯಾಪ್ತಿಗೆ ಬರುವ ದೇವರ ಹೊಸಹಳ್ಳಿಗೆ ಎನ್.ಎಸ್.ಎಸ್.ಶಿಬಿರಕ್ಕೆ ತೆರಳಿದ್ದರು. 51 ವಿದ್ಯಾರ್ಥಿಗಳ ಪೈಕಿ ತುಮಕೂರು ಹೊರವಲಯದ ಯಲ್ಲಾಪುರದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪೂರ್ಣಚಂದ್ರ, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ತುರುವೇಕೆರೆ ಮೂಲದ ಮಹಮ್ಮದ್ ಮರ್ತಜಾ (17) ಹಾಗೂ ಕ್ಯಾತ್ಸಂದ್ರ ಸುಭಾಶ್ ನಗರದ ಶಶಾಂಕ್ (17) ಅವರುಗಳು ಪಕ್ಕದಲ್ಲೇ ಇರುವ ಹಳೆನಿಜಗಲ್ ಕೆರೆಯತ್ತ ತೆರಳಿದ್ದಾರೆ. ಕೆರೆಯ ದಂಡೆಯ ಮೇಲೆ ಈ ಮೂವರು ವಿದ್ಯಾರ್ಥಿಗಳು ಸೆಲ್ಫಿ ತೆಗೆದುಕೊಳ್ಳಲು ಮುಂದಾದರೆಂದು ಹೇಳಲಾಗುತ್ತಿದೆ.
ಸೋಮವಾರ ಎನ್ಎಸ್ಎಸ್ ವಿದ್ಯಾರ್ಥಿಗಳು ನಿಜಗಲ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದರು. ಚಾರಣ ಮುಗಿಸಿ ವಾಪಸ್ಸಾಗುವಾಗ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಮೂವರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಪೂರ್ಣಚಂದ್ರ ನೀರಿಗೆ ಜಾರಿ ಬಿದ್ದು ಹೂಳಿನಲ್ಲಿ ಸಿಲುಕಿದ್ದಾನೆ. ಜೊತೆಯಲ್ಲಿದ್ದ ಮುರ್ತಜಾ ಹಾಗೂ ಶಶಾಂಕ್ ಇಬ್ಬರು ಪೂರ್ಣಚಂದ್ರನನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಮಣ್ಣಿನೊಳಗೆ ಅವರೂ ಸಿಲುಕಿಕೊಂಡಿದ್ದಾರೆ. ಎನ್ಎಸ್ಎಸ್ ಶಿಬಿರಾಧಿಕಾರಿ ವಿದ್ಯಾರ್ಥಿಗಳನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದರಿಂದ ವಿದ್ಯಾರ್ಥಿಗಳ ಶವ ಹೊರ ತೆಗೆಯಲು ಹರಸಾಹಸ ಪಡಬೇಕಾಯಿತು. ತುಮಕೂರಿನ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಮೂರು ಗಂಟೆಗಳಿಗೂ ಹೆಚ್ಚು ಕಾಲ ಶೋಧ ನಡೆಸಿ ಮಧ್ಯಾಹ್ನ 3 ಗಂಟೆಯ ವೇಳೆಗೆ ಮೃತರ ದೇಹಗಳನ್ನು ಹೊರ ತೆಗೆಯಲಾಗಿತ್ತು. ಡಾಬಸ್ಪೇಟೆ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.
ಪ್ರತಿಭಟನೆ: ಅಂತರಸನಹಳ್ಳಿಯ ಯೋಗೀಶ್ ಎಂಬುವರ ಪುತ್ರ ಪೂರ್ಣಚಂದ್ರ ಅವರ ಪೋಷಕರು ಮಂಗಳವಾರ ಮಧ್ಯಾಹ್ನ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಆಗಮಿಸಿ ಪೂರ್ಣಚಂದ್ರನ ಶವವನ್ನು ಇಟ್ಟು ಪ್ರತಿಭಟನೆ ನಡೆಸಿದರು. ಪೂರ್ಣಚಂದ್ರ ಸಿದ್ಧಗಂಗಾ ಪಿಯು ಕಾಲೇಜಿನಲ್ಲಿ ದ್ವಿತೀಯ ವರ್ಷದಲ್ಲಿ ಓದುತ್ತಿದ್ದು, ನೆಲಮಂಗಲ ತಾಲ್ಲೂಕಿನ ದೇವರ ಹೊಸಹಳ್ಳಿಯಲ್ಲಿ ನಡೆಯುತ್ತಿದ್ದ ಎನ್ಎಸ್ಎಸ್ ಶಿಬಿರಕ್ಕೆ ಪಾಲ್ಗೊಂಡಿದ್ದ.
ಅ.15 ರಂದು ಬೆಳಗ್ಗೆ 11 ಗಂಟೆ ಸಮಯದಲ್ಲಿ ನಿಜಗಲ್ ಕೆರೆಯಲ್ಲಿ ಮರಣ ಹೊಂದಿರುತ್ತಾನೆ. ಆದರೆ ಕಾಲೇಜಿನ ಆಡಳಿತ ಮಂಡಳಿಯವರು ನಮಗೆ ಈ ವಿಷಯವನ್ನು ತಿಳಿಸಿಲ್ಲ ಎಂದು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಅಂತರಸನಹಳ್ಳಿಯ ನಿವಾಸಿಗಳೊಂದಿಗೆ ಮೃತ ವಿದ್ಯಾರ್ಥಿಯ ತಾಯಿ ಮಂಜುಳ ಅವರಿಂದ ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರು ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆಯುವ ಭರವಸೆ ನೀಡಿದರು. ಮಧ್ಯಾಹ್ನ 1.40 ರ ವೇಳೆಗೆ ಮೃತದೇಹದೊಂದಿಗೆ ಪೋಷಕರು ಹಾಗೂ ಸ್ಥಳೀಯರೊಂದಿಗೆ ವಾಪಸ್ ಆದರು.
ಮೃತಪಟ್ಟಿರುವ ಮತ್ತೊಬ್ಬ ವಿದ್ಯಾರ್ಥಿ ಮಹಮ್ಮದ್ ಮುರ್ತಜಾ ಅವರ ತಂದೆ ದಾದಾಪೀರ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯ ಉದ್ಯೋಗಿ. ತಾಯಿ ಫಾತಿಮಾ ಹಾಗೂ ಸಹೋದರನಿಗೆ ಮಾತು ಬರುವುದಿಲ್ಲ ಎಂದು ತಿಳಿದು ಬಂದಿದೆ. ಶಶಾಂಕನಿಗೆ ತಂದೆ ಇಲ್ಲ. ತಾಯಿ ನಿರ್ಮಲ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಪೂರ್ಣಚಂದ್ರ ಒಬ್ಬನೇ ಮಗನಾಗಿದ್ದು, ತಂದೆ ಮನೆ ಬಿಟ್ಟು ಹೋಗಿರುವುದಾಗಿ ಕೆಲವರು ಹೇಳುತ್ತಾರೆ. ತಾಯಿ ಮಂಜುಳ ಅವರೇ ಪೂರ್ಣ ಚಂದ್ರನ ಜವಾಬ್ದಾರಿ ಹೊತ್ತುಕೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
