ಚಿತ್ರದುರ್ಗ:
ಶಿಷ್ಟಾಚಾರ ಹಾಗೂ ಪಕ್ಷ ಸಂಘಟನೆ ವಿಚಾರದಲ್ಲಿ ನಿರ್ಲಕ್ಷೆ ಮಾಡಿದರೆ ಮುಲಾಜಿಲ್ಲದೆ ಶಿಸ್ತು ಕ್ರಮ ಕೈಗೊಂಡು ಪಕ್ಷದಿಂದ ಅಮಾನತ್ತುಗೊಳಿಸುವುದಾಗಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ಹಾಗೂ ಜಿಲ್ಲಾ ಉಸ್ತುವಾರಿ ಸುಮಯ್ಯ ತಬ್ರೇಜ್ ಯುವ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾ ಉಸ್ತುವಾರಿ ಜವಾಬ್ದಾರಿ ವಹಿಸಿಕೊಂಡ ಮೇಲೆ ಪ್ರಥಮ ಬಾರಿಗೆ ಚಿತ್ರದುರ್ಗಕ್ಕೆ ಆಗಮಿಸಿದ ಅವರು ಶನಿವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಯುವ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದರು.
ನಿಷ್ಟೆಯಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದರೆ ಒಂದಲ್ಲ ಒಂದು ದಿನ ಅಧಿಕಾರ ಹುಡುಕಿಕೊಂಡು ಬರುತ್ತದೆ. ನಾನು ಬೂತ್ ಮಟ್ಟದಿಂದ ಕೆಲಸ ಮಾಡಿಕೊಂಡು ಈ ಮಟ್ಟಕ್ಕೆ ಬೆಳೆದಿದ್ದೇನೆ. ಎಲ್ಲೆಲ್ಲಿ ನನ್ನನ್ನು ಜಿಲ್ಲಾ ಉಸ್ತುವಾರಿಯನ್ನಾಗಿ ವರಿಷ್ಟರು ನೇಮಿಸಿದ್ದಾರೋ ಅಲ್ಲೆಲ್ಲ ಪ್ರಾಮಾಣಿಕವಾಗಿ ಪಕ್ಷ ಸಂಘಟನೆಯಲ್ಲಿ ತೊಡಿಕೊಂಡಿದ್ದೆ. ಪಕ್ಷದ ವಿಚಾರ ಬಂದಾಗ ಎಲ್ಲರೂ ಸಮಾನರೆ ಯಾವ ತಾರತಮ್ಯ ಮಾಡುವುದಿಲ್ಲ. ನನ್ನ ಮೇಲೆ ಭರವಸೆಯಿಟ್ಟು ನಾಯಕರುಗಳು ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಕೊಟ್ಟಿದ್ದಾರೆ, ಜೊತೆಗೆ ತೆಲಂಗಾಣದ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ. ಎರಡು ಕಡೆ ನನ್ನ ಕರ್ತವ್ಯವನ್ನು ನಿಭಾಯಿಸುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷದ ಎಂದರೆ ದೇಶದಲ್ಲಿ ಶಕ್ತಿಶಾಲಿಯಾಗಿರಬೇಕು ಎಂಬುದು ಎಲ್ಲರ ಆಸೆ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಣ್ಣಪುಟ್ಟ ತಪ್ಪುಗಳಿಂದ ಪಕ್ಷ ಬಹುಮತವಿಲ್ಲದೆ ಜೆಡಿಎಸ್.ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಯಿತು. ಮುಂದೆ ಪಾರ್ಲಿಮೆಂಟ್ ಚುನಾವಣೆ ಎದುರಾಗಲಿರುವುದರಿಂದ ಅಸೆಂಬ್ಲಿಯಿಂದ ಹಿಡಿದು ಬೂತ್ಮಟ್ಟದವರೆಗೆ ಸಭೆಗಳನ್ನು ನಡೆಸಬೇಕು. ಒಂದು ಇಲ್ಲ ಎರಡು ಸಭೆಗಳಿಗೆ ಹಾಜರಾಗದವರಿಗೆ ಅಂತಿಮವಾಗಿ ನೋಟಿಸ್ ನೀಡಬೇಕು. ಆಗಲೂ ಅಸಡ್ಡೆ ತೋರುವವರನ್ನು ಪಕ್ಷದಿಂದ ಉಚ್ಚಾಟಿಸಲಾಗುವುದು.
ಯುವ ಕಾರ್ಯಕರ್ತರು ಪಕ್ಷ ಸಂಘಟನೆಗಾಗಿ ಏನು ಮಾಡುತ್ತಿದ್ದಾರೆ ಎನ್ನುವುದು ಯುವ ನೇತಾರ ರಾಹುಲ್ಗಾಂಧಿಗೆ ಗೊತ್ತಾಗಬೇಕು. ಹಾಗಾಗಿ ಯುವ ಕಾಯಕರ್ತರು ಭಿನ್ನಾಭಿಪ್ರಾಯಗಳನ್ನು ಬಿಟ್ಟು ಪಕ್ಷ ಸಂಘಟನೆಗೆ ಒಂದಾಗಬೇಕು. ನಿಮ್ಮ ಜೊತೆ ಸದಾ ನಾನು ಇರುತ್ತೇನೆ. ಪಕ್ಷ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿರುವವರಿಗೆ ಮಾತ್ರ ಪಕ್ಷದಲ್ಲಿ ಸ್ಥಾನ. ಸೋಮಾರಿಗಳಿಗೆ ಜಾಗವಿಲ್ಲ ಎಂದು ಖಡಕ್ಕಾಗಿ ನುಡಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಧುಪಾಲೇಗೌಡ ಮಾತನಾಡಿ ಮಹಿಳೆಯರಿಗೆ ಅವಕಾಶ ಸಿಗುವುದು ಕಾಂಗ್ರೆಸ್ನಲ್ಲಿ ಮಾತ್ರ. ಬೇರೆ ಯಾವ ಪಕ್ಷದಲ್ಲಿಯೂ ಮಹಿಳೆಗೆ ಅಧಿಕಾರ ಸಿಗುವುದು ಕಷ್ಟ. ದೇಶದ ರೈತರಿಗೆ, ನಿರುದ್ಯೋಗಿಗಳಿಗೆ, ಬಡವರಿಗೆ ಪ್ರಧಾನಿ ನರೇಂದ್ರಮೋದಿ ಅನ್ಯಾಯ ಮಾಡಿದ್ದಾರೆ. ಸುಮಯ್ಯ ತಬ್ರೇಜ್ರವರು ಜಿಲ್ಲಾ ಉಸ್ತುವಾರಿಗಳಾಗಿರುವುದು ಪಕ್ಷಕ್ಕೆ ಬಲ ಬಂದಂತಾಗಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್ ಮಾತನಾಡುತ್ತ 1976 ರಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿರುವುದನ್ನು ಗುರುತಿಸಿ ವರಿಷ್ಟರು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ನನಗೆ ನೀಡಿದ್ದಾರೆ. ನಿಷ್ಟಾವಂತರಾಗಿ ಕೆಲಸ ಮಾಡಿದರೆ ಅಧಿಕಾರ ಮನೆ ಬಾಗಿಲಿಗೆ ಬರುತ್ತದೆ ಎಂಬುದಕ್ಕ್ನೆ ಇದೊಂದು ಸಾಕ್ಷಿ ಎಂದರು
ಸೇವಾದಳದಲ್ಲಿ ಚಿತ್ರದುರ್ಗ ಜಿಲ್ಲೆ ರಾಜ್ಯದಲ್ಲಿಯೇ ನಂ.1 ನೇ ಸ್ಥಾನದಲ್ಲಿದೆ. ಅದೇ ರೀತಿ ಯೂತ್ ಕಾಂಗ್ರೆಸ್ನವರು ಒಳ್ಳೊಳ್ಳೆ ಕೆಲಸಗಳನ್ನು ಮಾಡಿರುವುದು ರಾಜ್ಯದ ಗಮನಕ್ಕೆ ಹೋಗಿದೆ. ಶಕ್ತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ರಾಹುಲ್ಗಾಂಧಿ ಕನಸು ನನಸಾಗಿಸಿ. ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ಗೆಲುವು ಸಿಗುವುದರಲ್ಲಿ ಅನುಮಾನವಿಲ್ಲ ಎಂದು ಭವಿಷ್ಯ ನುಡಿದರು.
ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಕಾರೇಹಳ್ಳಿ ಉಲ್ಲಾಸ್ ಮಾತನಾಡಿ ಮುಂಬರುವ ಲೋಕಸಭೆ ಚುನಾವಣೆ ವೇಳೆಗಾಗಲೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕಿದೆ. ಸುಮಯ್ಯ ತಬ್ರೇಜ್ರವರು ಜಿಲ್ಲಾ ಉಸ್ತುವಾರಿಗಳಾಗಿ ಬಂದಿರುವುದು ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿದಂತಾಗಿದೆ. ಜಿಲ್ಲೆಯಿಂದ ಎಲ್ಲಾ ರೀತಿಯ ಸಹಕಾರ ಕೊಟ್ಟು ಪಕ್ಷದ ಗೆಲುವಿಗೆ ನಿಮ್ಮ ಜೊತೆ ಕೈಜೋಡಿಸುತ್ತೇವೆಂದು ಭರವಸೆ ನೀಡಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಹಸನ್ತಾಹೀರ್, ಕರಿಯಪ್ಪ ಇವರುಗಳು ಮಾತನಾಡಿದರು.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಕಾರ್ಯದರ್ಶಿ ಸುನಿಲ್ಬಿದ್ರಿ ಚಿತ್ರದುರ್ಗ ಯುವ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಅಶೋಕ್ನಾಯ್ಡು, ಮಹಮದ್ರಫಿ ವೇದಿಕೆಯಲ್ಲಿದ್ದರು.ಜಿಲ್ಲಾ ಯುವ ಕಾಂಗ್ರೆಸ್ ವಿವಿಧ ತಾಲೂಕಿನ ಅಧ್ಯಕ್ಷರುಗಳು ಪ್ರಧಾನ ಕಾರ್ಯದರ್ಶಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
