ಪರಿಹಾರ-ಸೂರಿಗಾಗಿ ಮಕ್ಕಳೊಂದಿಗೆ ಧರಣಿ

ದಾವಣಗೆರೆ:

         ರೈಲಿನಿಂದ ಆಯಾ ತಪ್ಪಿ ಕೆಳಗೆ ಬಿದ್ದು ಕೈ ಕಳೆದುಕೊಂಡಿರುವ ವ್ಯಕ್ತಿಯೊಬ್ಬರು, ಪರಿಹಾರ ಮತ್ತು ಸೂರಿಗಾಗಿ ಆಗ್ರಹಿಸಿ ಇಬ್ಬರು ಮಕ್ಕಳೊಂದಿಗೆ ನಡು ರಸ್ತೆಯಲ್ಲಿ ಕೂತು ದಿಢೀರ್ ಪ್ರತಿಭಟನೆ ಮಾಡುತ್ತಿದ್ದ ದೃಶ್ಯ ನೆರೆದವರ ಮನ ಕಲುಕುವಂತಿತ್ತು.

        ಹೌದು… ಬಿರು ಬಿಸಿಲಿನಲ್ಲಿ ನಗರದ ಗಾಂಧಿ ವೃತ್ತದಲ್ಲಿ ಅಂಗಿ ಬಿಚ್ಚಿ ದಾವಣಗೆರೆ ತಾಲೂಕಿನ ಈಚಘಟ್ಟ ಗ್ರಾಮದ ನಿವಾಸಿ ತಿಮ್ಮೇಶ್ ತನ್ನ ಮಕ್ಕಳಾದ ದಿನೇಶ್ ಹಾಗೂ ದಿವ್ಯಾ ಅವರೊಂದಿಗೆ ಕೂತು ದಿಢೀರ್ ನಡೆಸಿ, ತಮ್ಮ ನೋವಿಗೆ ಸ್ಪಂದಿಸದ ಕ್ಷೇತ್ರದ ಶಾಸಕರು, ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇವರ ಆಕ್ರೋಶದ ನುಡಿಗಳಿಗೆ ಸ್ಥಳದಲ್ಲಿದ್ದವರು ಮರುಕ ವ್ಯಕ್ತಪಡಿಸಿ, ಸರ್ಕಾರಕ್ಕೆ ಹಿಡಿ ಶಾಪ ಹಾಕಿದರು.

      ಈ ಸಂದರ್ಭದಲ್ಲಿ ಮಾತನಾಡಿದ ತಿಮ್ಮೇಶ್, 2013ರಲ್ಲಿ ತಮ್ಮ ಪತ್ನಿ ತಿಮ್ಮಕ್ಕ ರೈಲ್ವೆ ಗೇಟ್ ದಾಟುತ್ತಿದ್ದ ಸಂದರ್ಭದಲ್ಲಿ ಮೃತ ಪಟ್ಟಿದ್ದಾರೆ. ಅಲ್ಲದೆ, ತಾವು 2016ರ ನವೆಂಬರ್ 30 ರಂದು ಉಡುಪಿಯಿಂದ ಕೆಲಸ ಮುಗಿಸಿಕೊಂಡು ಹರಿಹರದಿಂದ ಪ್ಯಾಸೆಂಜರ್ ರೈಲಿನಲ್ಲಿ ಬಂದು ಕೊಡಗನೂರು ರೈಲು ನಿಲ್ದಾಣದ ಎರಡನೇ ಪ್ಲಾಟ್ ಫಾರಂನಲ್ಲಿ ಇಳಿಯುವಾಗ ನೂಕಾಟವಾಗಿ ರೈಲಿನಿಂದ ಕೆಳಗೆ ಬಿದ್ದು ಕೈ ಕಳೆದುಕೊಂಡಿದ್ದೇನೆ. ಹೀಗಾಗಿ ತಮಗೆ ಪರಿಹಾರ ಕೊಡುವಂತೆ ಆಗ್ರಹಿಸಿ ಕೇಂದ್ರ ರೈಲ್ವೆ ಮಂತ್ರಿಗಳಿಗೆ, ರಾಜ್ಯದ ಮುಖ್ಯಮಂತ್ರಿಗಳಿಗೆ, ರಾಜ್ಯ ಪಾಲರಿಗೆ ಹಲವು ಬಾರಿ ಪತ್ರ ಬರೆದು, ಏಕಾಂಗಿ ಹೋರಾಟ ನಡೆಸಿ ಮನವಿ ಸಲ್ಲಿಸಿದ್ದೇನೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ಆಶ್ರಯ ಯೋಜನೆ ಅಡಿಯಲ್ಲಿ ನನಗೊಂದು ಮನೆ ಮಂಜೂರು ಮಾಡಲಾಗಿತ್ತು. ಆರಂಭದಲ್ಲಿ ಸಾಲ ಮಾಡಿ ಬೇಸ್‍ಮೆಂಟ್ ಹಾಕಿದ್ದೆ. ಹೀಗಾಗಿ ಒಂದು ಸಹ ಪಡೆದಿದ್ದೇನೆ. ಆ ಬಿಲ್ ಬಂದಾಕ್ಷಣ ದುಡ್ಡು ಕೊಟ್ಟವರು ಸಾಲ ವಾಪಾಸ್ ಪಡೆದರು. ಆದ್ದರಿಂದ ಮತ್ತೆ ಬರಿಗೈ ಆಯಿತು ಮುಂದೆ ಮನೆ ಕಟ್ಟಿಕೊಳ್ಳುವ ಪರಿಸ್ಥಿತಿ ಇಲ್ಲ. ಕೈ ಚೆನ್ನಾಗಿ ಇದ್ದಾಗ ಕೂಲಿ-ನಾಲಿ ಮಾಡಿ ಮಕ್ಕಳನ್ನು ಸಾಕುತ್ತಿದ್ದೆ. ಆದರೆ. ಅಪಘಾತದಲ್ಲಿ ಕೈ ಕಳೆದುಕೊಂಡಿರುವುದರಿಂದ ಯಾರೂ ಕೆಲಸ ಕೊಡಲ್ಲ. ಹೀಗಾಗಿ ಮಕ್ಕಳು ಕೆಲವು ದಿನ ಅರೆ ಹೊಟ್ಟೆಯಲ್ಲಿ ಮಲುಗುತ್ತಾರೆ. ವಾಸ್ತವ ಪರಿಸ್ಥಿತಿ ಹೀಗಿದ್ದಾಗ ತಾನು ಹೇಗೆ ಬಂಡವಾಳ ಹಾಕಿ ಮನೆ ಕಟ್ಟಿಸಿಕೊಳ್ಳಲು ಸಾಧ್ಯ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

      ತನ್ನ ಮತ್ತು ಮಕ್ಕಳ ಹೊಟ್ಟೆಬಟ್ಟೆ ನೋಡುಕೊಳ್ಳುವುದೇ ನನ್ನ ಕೈಯಿಂದ ಸಾಧ್ಯವಾಗುತ್ತಿಲ್ಲ. ಅಂಥದರಲ್ಲಲಿ ಮೊದಲು ಹಣ ಹಾಕಿ ಮನೆ ಕಟ್ಟಿಕೊಳ್ಳುವುದಂತು ಅಸಾಧ್ಯದ ಮಾತು. ಆದ್ದರಿಂದ ಸರ್ಕಾರವೇ ತನಗೆ ಮನೆ ಕಟ್ಟಿಸಿಕೊಡಬೇಕು. ತನ್ನ ಪತ್ನಿಯ ಸಾವಿಗೆ ಹಾಗೂ ನನ್ನ ಕೈ ಊನಾ ಆಗಲು ರೈಲೇ ಮುಖ್ಯ ಕಾರಣ ಹೀಗಾಗಿ ರೈಲ್ವೆ ಇಲಾಖೆ ತಮಗೆ ಸೂಕ್ತ ಪರಿಹಾರ ನೀಡಬೇಕು. ಜೀವನ ಸಾಗಿಸಲು ಹೈನುಗಾರಿಕೆ ನಡೆಸಲು ಯಾವುದಾದರೂ ಯೋಜನೆ ಅಡಿಯಲ್ಲಿ ಹಸು ಇಲ್ಲವೇ ಕುರಿ ಕೊಡಿಸಬೇಕೆಂದು ಆಗ್ರಹಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link