ದಾವಣಗೆರೆ:
ನಿವೇಶನದ ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಕರ್ನಾಟಕ ಏಕತಾ ವೇದಿಕೆ ನೇತೃತ್ವದಲ್ಲಿ ತಾಲ್ಲೂಕಿನ ಹಳೇಬಾತಿ ಗುಡ್ಡದ ಕ್ಯಾಂಪ್ನ ನಿವಾಸಿಗಳು, ಹಳೇಬಾತಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಹಳೇಬಾತಿ ಗುಡ್ಡದ ಕ್ಯಾಂಪ್ನ 120ಕ್ಕೂ ಅಧಿಕ ನಿವೇಶನಗಳ ಫಲಾನುಭವಿಗಳು ತಮ್ಮ ನಿವೇಶನದ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ, ಗ್ರಾಮ ಪಂಚಾಯಿತಿಯ ಕಚೇರಿಗೆ ಸುಮಾರು 3 ಗಂಟೆಗೂ ಹೆಚ್ಚು ಕಾಲ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷ ಎನ್.ಹೆಚ್.ಹಾಲೇಶ್, 2012ರಿಂದಲೂ ಇಲ್ಲಿಯವರೆಗೂ ನಿವೇಶನದ ಹಕ್ಕುಪತ್ರ ಕೊಡುವುದಾಗಿ ಭರವಸೆ ನೀಡುತ್ತಾ ಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಸಹ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ ಎಂದು ಆರೋಪಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸುಮಾರು 2 ತಿಂಗಳ ಕಾಲವಕಾಶ ಕೇಳಿದ್ದಾರೆ. ಕಾಲಾವಕಾಶ ಮೀರಿದರೂ ಬೇಡಿಕೆ ಈಡೇರಿಸದೇ ಹೋದರೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕುವ ಮುಖಾಂತರ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘು ದೊಡ್ಮನಿ, ರಾಜ್ಯ ಕಾರ್ಯದರ್ಶಿ ಮಂಜುನಾಯ್ಕ, ಸಿ.ಪಿ. ಮಲ್ಲಿಕಾರ್ಜುನ, ಜಿ.ಹೆಚ್. ಹಾಲೇಶ್, ಬಿ.ಎನ್. ರಾಜು, ಬಿ. ಮಂಜಪ್ಪ, ಗಣೇಶ್, ವೈ. ಮರಿಯಪ್ಪ, ಬಿ.ಆರ್. ದೇವರಾಜ್, ಟಿ.ಆರ್. ರವಿಕುಮಾರ್, ಇ.ಎಂ. ಕರಿಯಪ್ಪ, ಸಂತೋಷ್, ಪ್ರಕಾಶ್, ಇಬ್ರಾಹಿಂ, ರೆಹಮಾನ್ ಸೇರಿದಂತೆ ಮಹಿಳೆಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
