ಹರಿಹರ:
ನಗರ ಹೊರವಲಯದ ನೂತನ ನೇಕಾರ ಬಡಾವಣೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ನೇಕಾರ ಸಮಿತಿಯಿಂದ ಗುರುವಾರ ಪೌರಾಯುಕ್ತೆ ಎಸ್.ಲಕ್ಷ್ಮಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ನೇಕಾರ ಸಮಿತಿ ಅಧ್ಯಕ್ಷ ಹೆಚ್.ಕೆ.ಕೊಟ್ರಪ್ಪ, ಬಡಾವಣೆಯಲ್ಲಿ ಸರ್ಕಾರದ ಅನುದಾನದಂತೆ ಅಲ್ಪಸ್ವಲ್ಪ ಮನೆಗಳ ನಿರ್ಮಾಣವಾಗಿವೆ. ಬಹುತೇಕ ಮನೆಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಮನೆ ನಿರ್ಮಿಸಲೆಂದು ಸಂಗ್ರಹಿಸಿರುವ ಕಬ್ಬಿಣ, ಸಿಮೆಂಟ್, ಇಟ್ಟಿಗೆ ಮತ್ತಿತರೆ ಸಮಾಗ್ರಿಗಳು ಆಗಾಗ ಕಳ್ಳತನವಾಗುತ್ತಿವೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದರು.
ಬಡಾವಣೆಯಲ್ಲಿ ರಾತ್ರಿ ವೇಳೆ ಪದೆ ಪದೆ ಕಳ್ಳತನ ನಡೆಯುತ್ತಿರಲು ಈ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಇಲ್ಲದಿರುವುದೆ ಕಾರಣವಾಗಿದೆ. ಆದ್ದರಿಂದ ಬಡಾವಣೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಬೇಕು, ಆಗ ಕಳವು ಪ್ರಕರಣಗಳಿಗೆ ಕಡಿವಾಣವಾಗುತ್ತದೆ ಎಂದು ತಿಳಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪೌರಾಯುಕ್ತೆ ಎಸ್.ಲಕ್ಷ್ಮಿ, ಬಡಾವಣೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಈಗಾಗಲೆ ಯೋಜನೆ ರೂಪಿಸಲಾಗಿದೆ. ಆದರೆ ಅದಕ್ಕೆ ಸಾಕಷ್ಟು ಹಣ ಅಗತ್ಯವಾಗಿರುವುದರಿಂದ ಇನ್ನೂ ಕಾರ್ಯರಂಭ ಮಾಡಿಲ್ಲ. ಆದರೂ ಈಗ ತಾತ್ಕಾಲಿಕವಾಗಿ ಬಡಾವಣೆಯ ಆಯಕಟ್ಟಿನ ಸ್ಥಳಗಳಲ್ಲಿ ನಾಲ್ಕು ವಿದ್ಯುತ್ ಕಂಬ ನೆಟ್ಟು ಬೀದಿ ದೀಪ ಅಳವಡಿಲಾಗುವುದು ಎಂದರು.
ಇದಲ್ಲದೆ ಬಡಾವಣೆಯಲ್ಲಿ ರಸ್ತೆ, ಚರಂಡಿ ನಿರ್ಮಿಸಲು ಸಹ ಯೋಜನೆ ರೂಪಿಸಲಾಗಿದ್ದು, ಶೀಘ್ರದಲ್ಲೆ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ನಿವಾಸಿಗಳಾದ ಎನ್.ದುಗ್ಗಪ್ಪ, ತಿಪ್ಪೇಶ್ ಎಲ್., ವನಜಾಕ್ಷಮ್ಮ, ನೀಲಮ್ಮ, ಗೀತಾ, ಕಾಳಮ್ಮ, ಲಕ್ಷ್ಮವ್ವ, ಶೋಭಾ, ರಾಧಮ್ಮ, ವೀರಪ್ಪ, ಮಲ್ಲಮ್ಮ, ಲಕ್ಷ್ಮಮ್ಮ, ನಾಗರತ್ನಮ್ಮ, ಸೋಮನಾಥ್ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
