ಗುಬ್ಬಿ
ಹಿಂದುಳಿದ ಸಮುದಾಯಗಳು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಮಾಜಿಕ ಸಮಾನತೆ ಪಡೆದುಕೊಳ್ಳಲು ಸಾಧ್ಯ ಎಂದು ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಶ್ರೀಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಮತ್ತು ರಾಜಕೀಯ ಸಮಾನತೆ ಕಲ್ಪಿಸುವಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರಾಮಾಣಿಕ ಪ್ರಯತ್ನ ಮಾಡಿದ್ದರು ಎಂದು ತಿಳಿಸಿದರು.
ಎಸ್.ಟಿ.ಸಮುದಾಯಕ್ಕೆ 7.5 ಮೀಸಲಾತಿ ಸೌಲಭ್ಯ ಕಲ್ಪಿಸುವ ಶಿಫಾರಸ್ಸನ್ನು ಮಾಡಿದ್ದಾರೆ. ಈ ಬಗ್ಗೆ ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಲಾಗುವುದೆಂದು ಎಸ್.ಸಿ ಮತ್ತು ಎಸ್.ಟಿ. ಸಮುದಾಯದ ನೌಕರರ ಮುಂಬಡ್ತಿ ಬಗ್ಗೆ ಕ್ಯಾಬಿನೆಟ್ನಲ್ಲಿ ಚರ್ಚೆಯಾಗಿದೆ. ಸುಪ್ರೀಂಕೋರ್ಟ್ನಲ್ಲಿ ನಡೆಯುತ್ತಿರುವ ಪವಿತ್ರರವರ ಪ್ರಕರಣದ ತೀರ್ಪಿನ ನಂತರ ಸರಕಾರ ಈ ಮುಂಬಡ್ತಿಯನ್ನು ಇಂಪ್ಲಿಮೆಂಟ್ ಮಾಡಲಿದೆ ಎಂದು ತಿಳಿಸಿದ ಅವರು, ಪ್ರಸ್ತುತ ಸಮಾಜಕ್ಕೆ ಅನುಗುಣವಾಗಿ ವಾಲ್ಮೀಕಿಯವರು ರಚಿಸಿರುವ ರಾಮಾಯಣ ವಿಶ್ವಮೆಚ್ಚಿದ ಕೃತಿಯಾಗಿದೆ.
ವೈಜ್ಞಾನಿಕತೆ ವೇಗವಾಗಿ ಬೆಳದಂತೆ ಮನುಷ್ಯನ ಸ್ವಾರ್ಥಭಾವನೆ ಹೆಚ್ಚಾಗುತ್ತಿದೆ. ಅದರಿಂದ ಪ್ರತಿಯೊಬ್ಬರು ವಿಶಾಲ ಮನೋಭಾವವನ್ನು ಅಳವಡಿಸಿಕೊಂಡಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಿಸಲು ಸಾಧ್ಯ. ಅದರಿಂದ ಯುವಜನರು ವಿದ್ಯಾರ್ಥಿ ಜೀವನದಲ್ಲೇ ಅಧ್ಯಯನಶೀಲ ಮನೋಭಾವನ್ನು ಬೆಳಸಿಕೊಳ್ಳಬೇಕು ಎಂದರು
ರಾಜನಹಳ್ಳಿ ಮಠದ ಶ್ರೀ ಪ್ರಸನ್ನನಾಂದಸ್ವಾಮೀಜಿ ಮಾತನಾಡಿ ಜಯಂತಿಗಳ ಹೆಸರಲ್ಲಿ ಎಲ್ಲ ಸಮುದಾಯಗಳು ಸಂಘಟಿತರಾಗುತ್ತಿವೆ. ಅದೇ ರೀತಿ ನಾಯಕ ಸಮುದಾಯವು ಸಂಘಟಿತವಾಗಿ ಸಂವಿಧಾನ ಬದ್ದ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ರಾಜಕೀಯ ಮೀಸಲಾತಿಯನ್ನು ಈಗಾಗಲೇ ನೀಡಲಾಗಿದೆ. ಉದ್ಯೋಗ ಮತ್ತು ಶಿಕ್ಷಣದಲ್ಲಿ ನಾಯಕ ಸಮುದಾಯಕ್ಕೆ ಸರಕಾರ ಶೇ.7.5 ರಷ್ಟು ಮೀಸಲಾತಿಯನ್ನು ನೀಡಬೇಕು. ದೇಶ ಹಾಗೂ ರಾಜ್ಯದಲ್ಲೂ ಅಧಿಕ ಸಂಖ್ಯೆಯಲ್ಲಿರುವ ನಾಯಕ ಸಮುದಾಯಕ್ಕೆ ಅನುಕೂಲವಾಗುವಂತೆ ಸುಪ್ರೀಂಕೋರ್ಟ್ ನಿರ್ದೇಶನದಂತೆ ಎಸ್.ಸಿ. ಎಸ್.ಟಿ. ಮುಂಬಡ್ತಿ ಆ ರಾಜ್ಯಗಳಿಗೆ ಬಿಟ್ಟಿದ್ದು ಎಂದು ಹೇಳಿದೆ ಅದರಂತೆ ಸರಕಾರ ಕ್ರಮಕೈಗೊಳ್ಳಬೇಕು.
ಶಿಡ್ಲಕೋಣ ಮಠದ ಸಂಜಯಕುಮಾರ ಸ್ವಾಮೀಜಿ ಮಾತನಾಡಿ ವಾಲ್ಮೀಕಿಯವರು ಒಂದೇ ಸಮುದಾಯಕ್ಕಾಗಿ ರಾಮಾಯಣದಂತಹ ಗ್ರಂಥವನ್ನು ಬರೆದಿಲ್ಲ ಪ್ರತಿಯೊಬ್ಬ ವ್ಯಕ್ತಿಯು ಸಹ ಮಾನವೀಯ ಮೌಲ್ಯಗಳನ್ನು ಇಟ್ಟುಕೊಂಡು ಬದುಕಬೇಕು ಎಂಬ ಸಂದೇಶವನ್ನು ಇಟ್ಟುಕೊಂಡು ಬರೆದಿದ್ದು ಎಲ್ಲ ಜನರ ದಾರಿದೀಪವೇ ರಾಮಾಯಣ ಗ್ರಂಥ ಎಂದು ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ಎನ್.ನಾಗರಾಜು ಕಾವ್ಯಗಳ ಮೂಲಕ ಜಗತ್ತಿಗೆ ಬದುಕಿನ ಸಾರ ತಿಳಿಸಿದ ಮಹರ್ಷಿ ವಾಲ್ಮೀಕಿ ಮಹಾ ಮಾನವತಾವಾದಿ ಎನಿಸಿದ್ದರು. ನಮ್ಮ ಸಂಸ್ಕøತಿ ಮತ್ತು ಪರಂಪರೆಯನ್ನು ಪವಿತ್ರ ಗ್ರಂಥದಲ್ಲಿ ತೋರಿರುವ ಶ್ರೀವಾಲ್ಮೀಕಿಯವರು ರಾಮಾಯಣ ಗ್ರಂಥ ಇಂದಿಗೂ ಜೀವನ ಕೌಶಲ್ಯ ಬಿಂಬಿಸುವ ಹೊತ್ತಿಗೆಯಾಗಿದೆ. ರಾಮ ಮತ್ತು ರಾವಣ ಪಾತ್ರವನ್ನು ಸೃಷ್ಟಿಸಿ ಬದುಕಿನ ಸತ್ಯಾಸತ್ಯತೆ ಬಗ್ಗೆ ಕಾವ್ಯದ ಮೂಲಕ ವಿವರಿಸಿದ್ದಾರೆ. ಇಂತಹ ತತ್ವಗಳನ್ನು ಯುವಜನರು ಅಳವಡಿಸಿಕೊಂಡಾಗ ಸುಸಂಸ್ಕøತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ ವಾಲ್ಮೀಕಿ ಭಾವಚಿತ್ರವನ್ನು ವಿವಿಧ ಸಾಂಸ್ಕøತಿಕ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಅನುಸೂಯ, ಉಪಾಧ್ಯಕ್ಷೆ ಕಲ್ಪನ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಿ.ರಾಮಾಂಜನಪ್ಪ, ಜಿ.ಹೆಚ್.ಜಗನ್ನಾಥ್, ಡಾ:ನವ್ಯ ಬಾಬು, ಕೆ.ಯಶೋಧಮ್ಮ, ಭಾರತಿ ಹಿತೇಶ್, ಎಂ.ಎಸ್.ಗಾಯತ್ರಿದೇವಿ, ಎಪಿಎಂಸಿ ಅಧ್ಯಕ್ಷ ಜಿ.ಟಿ.ರೇವಣ್ಣ, ತಹಸೀಲ್ದಾರ್ ಜಿ.ವಿ.ಮೋಹನ್ ಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಜಿ.ನಾಗಭೂಷಣ್, ರಾಜ್ಯ ಪರಿಷತ್ ಸದಸ್ಯ ಕೆ.ವಿ.ನಾರಾಯಣ್, ಎ.ಪಿ.ಎಂ.ಸಿ ಸದಸ್ಯ ಲಕ್ಷ್ಮೀರಂಗಯ್ಯ, ತಾ.ಪಂ. ಸದಸ್ಯರಾದ ಕರಿಯಮ್ಮ ರಮೇಶ್, ಕರೇತಿಮ್ಮಯ್ಯ, ಯೋಗೀಶ್, ಪ.ಪಂ.ಸದಸ್ಯರಾದ ಜಿ.ಎನ್.ಅಣ್ಣಪ್ಪಸ್ವಾಮಿ, ಜಿ.ಆರ್.ಶಿವಕುಮಾರ್, ಸಮಾಜ ಕಲ್ಯಾಣಾಧಿಕಾರಿ ರಾಮಣ್ಣ, ಸಮುದಾಯದ ಮುಖಂಡರಾದ ಯಜಮಾನ್ ಶಿವಣ್ಣ, ದೇವರಾಜು, ಮಂಜುರಾಜ್, ಹೆಚ್.ಡಿ.ಯಲ್ಲಪ್ಪ, ನರಸಿಂಹಮೂರ್ತಿ, ಕೃಷ್ಣಮೂರ್ತಿ, ಲಕ್ಷ್ಮಣ್, ಉಮೇಶ್ ಸೇರಿದಂತೆ ನಾಯಕ ಸಮಾಜದ ಹಿರಿಯ ಮುಖಂಡರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ