ಬೆಂಗಳೂರು:
ಕಮಲ ಕೋಟೆಯಲ್ಲಿ ವಿ.ಎಸ್.ಉಗ್ರಪ್ಪ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಳ್ಳಾರಿಯ ಗಣಿಯ ಬಂಡೆಯನ್ನ, ಕನಕಪುರದ ಬಂಡೆ ಹೊಡೆತಕ್ಕೆ ಬಿಜೆಪಿ ಕೋಟೆ ಛಿದ್ರವಾಗಿದೆ.
ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಶಾಂತವಾಗಿಯೇ ಸೋಲೊಪ್ಪಿಕೊಂಡಿದ್ದು, ಗಣಿ ಅಖಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಂ ವೀರಂ ಎಂದು ಗೆಲುವಿನ ಕೇಕೆ ಹಾಕಿದ್ದಾರೆ. ನಿಜಕ್ಕೂ ಬಳ್ಳಾರಿಯ ರಿಸಲ್ಟ್ ರಾಜ್ಯದ ಜನರಿಗೆ ಸರ್ಪ್ರೈಸ್, ಬಿಜೆಪಿಗೆ ದೊಡ್ಡ ಆಘಾತ. ಸದ್ಯ ತನ್ನ ಸ್ಥಾನ ಉಳಿಸಿಕೊಳ್ಳಲು ಬಿಜೆಪಿ ವಿಫಲವಾಗಿರುವುದು ಹೇಗೆ ಅನ್ನೋ ಚರ್ಚೆ ಶುರುವಾಗಿದೆ.
ಬಿಜೆಪಿಯ ಒಂದೊಂದೇ ಅಸ್ತ್ರಗಳನ್ನ ಕಾಂಗ್ರೆಸ್ ನಿಷ್ಕ್ರಿಯಗೊಳಿಸಿದ್ದು ಹೇಗೆ ಅನ್ನೋದು ರಾಜಕೀಯ ಪಡಸಾಲೆಯಲ್ಲಿ ಚರ್ಚಾ ವಿಷಯವಾಗಿದೆ. ಹಾಗಾದ್ರೆ, 18 ವರ್ಷಗಳ ನಂತರ ಬಿಜೆಪಿಯ ಕೋಟೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿದ್ದು ಹೇಗೆ? ಚುನಾವಣೆಗೂ ಮುನ್ನ ಕಾಂಗ್ರೆಸ್ ಮಾಡಿದ ಸ್ಟ್ರಾಟಜಿ ಹೇಗಿತ್ತು? ವಿ.ಎಸ್.ಉಗ್ರಪ್ಪ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲು ಕಾರಣಗಳೇನು?
ಗಣಿನಾಡಲ್ಲಿ ಕಾಂಗ್ರೆಸ್ನ ಗೆಲುವಿನ ಗಣಿತ!
ಕಾಂಗ್ರೆಸ್ನ ಎಲ್ಲಾ ನಾಯಕರು ಬಳ್ಳಾರಿಯ ಅಖಾಡಕ್ಕೆ ಧುಮುಕಿ, ತಂತ್ರ-ಪ್ರತಿತಂತ್ರ ಹೆಣೆದಿದ್ದು. ಕಾಂಗ್ರೆಸ್ ನಾಯಕರ ಗ್ರೌಂಡ್ ವರ್ಕ್ ಗೆಲುವಿಗೆ ಸಹಾಯಕಾರಿ. ಬಳ್ಳಾರಿಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 6 ಕಾಂಗ್ರೆಸ್ ಶಾಸಕರು ಇರುವುದು ಹಾಗೂ ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲಿಯೂ ಎಡವದೇ ಪರಿಸ್ಥಿತಿ ನಿಭಾಯಿಸಿದ್ದು.
ಶ್ರೀರಾಮುಲುಗೆ ನೇರವಾಗಿ ಟಾಂಗ್ ಕೊಡಲು ವಾಲ್ಮೀಕಿ ಸಮುದಾಯದ ವಿ.ಎಸ್.ಉಗ್ರಪ್ಪರನ್ನ ಕೊನೆಯ ಕ್ಷಣದಲ್ಲಿ ಅಭ್ಯರ್ಥಿಯಾಗಿಸಿದ್ದು ಬಿಜೆಪಿಯ ಲೆಕ್ಕಾಚಾರಗಳನ್ನ ಉಲ್ಟಾಪಲ್ಟಾ ಆಗಿಸಿತು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಒಬ್ಬೊಬ್ಬ ಸಚಿವರನ್ನ ನಿಯೋಜಿಸಿದ್ದ ಕಾಂಗ್ರೆಸ್ ನಾಯಕರು ಹೋಬಳಿ ಮಟ್ಟದ ನೇತೃತ್ವವನ್ನ ಶಾಸಕರಿಗೆ ನೀಡಿದ್ದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕಾರ್ಯಕರ್ತರನ್ನ ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದ್ದು.
