ಬೆಂಗಳೂರು
ತಂದೆ ನಾರಾಯಾಣ ಶಾಸ್ತ್ರಿ ತಾಯಿ ಗಿರಿಜಾ ಶಾಸ್ತ್ರಿ ಅವರು ಕಾನ್ಸರ್ನಿಂದ ಮೃತಪಟ್ಟಿದ್ದು ಅದೇ ಹಾದಿ ಹಿಡಿದಿರುವ ಕೇಂದ್ರ ಸಚಿವ ಅನಂತ್ಕುಮಾರ್ ಕಾನ್ಸರ್ ಚಿಕಿತ್ಸೆಗಾಗಿನಗರದ ಶಂಕರಪುರಂನಲ್ಲಿ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯದ ಶ್ರೀಶಂಕರ್ ಕ್ಯಾನ್ಸರ್ ಆಸ್ಪತ್ರೆ ಆರಂಭಗೊಳ್ಳಲು ಸಾಕಷ್ಟು ಪರಿಶ್ರಮಪಟ್ಟಿದ್ದರು ವಿಪರ್ಯಾಸವೆಂದರೆ ಅದೇ ಆಸ್ಪತ್ರೆಯಲ್ಲಿ ಅವರು ಇಹಲೋಕ ತ್ಯಜಿಸಿದ್ದಾರೆ.!
ಅನಂತ್ಕುಮಾರ್ ಅವರ ಶ್ರಮಕ್ಕೆ ತಕ್ಕಂತೆ ಡಾ.ಶ್ರೀನಾಥ್, ಡಾ.ಎಚ್.ಎಸ್.ನಾಗರಾಜ್, ಡಾ.ಸೆಬಾಸ್ಟಿಯನ್, ಅಭಿನವ್ ರಮಾನಂದ ಮತ್ತು ಡಾ.ಕೆ.ಎನ್.ಶಂಕರ್ ಅವರು ಕೈಜೋಡಿಸಿ `ಶ್ರೀ ಶಂಕರ ಕ್ಯಾನ್ಸರ್ ಫೌಂಡೇಷನ್ ಮತ್ತು ಸಂಶೋಧನಾ ಕೇಂದ್ರ’ 2012ರಲ್ಲಿ ಪ್ರಾರಂಭಿಸಿದರು ಅದರ ಫಲವೇ ಶಂಕರಪುರಂನಲ್ಲಿ ಆರು ಅಂತಸ್ತಿನ ವಿಶಾಲ ಕಟ್ಟಡದಲ್ಲಿ ಪ್ರಾರಂಭವಾಗಿರುವ ಶ್ರೀಶಂಕರ್ ಕ್ಯಾನ್ಸರ್ ಆಸ್ಪತ್ರೆ.
ಶಂಕರಮಠದ ಆವರಣದಲ್ಲಿರುವ ರಂಗದೊರೈ ಆಸ್ಪತ್ರೆಯಲ್ಲಿ 2007ರಲ್ಲಿ ಫೌಂಡೇಶನ್ ಚಟುವಟಿಕೆ ಸಣ್ಣಮಟ್ಟದಲ್ಲಿ ಶುರುವಾಗಿತ್ತು. ಡಾ, ಶ್ರೀನಾಥ ಕನಸು ನನಸಾಗಲು ಸಂಸದ ಅನಂತಕುಮಾರ್ ಅವರ ಸಹಕಾರ ಭಾರಿ ಮಹತ್ವದ್ದಾಗಿತ್ತು. ಅವಿರತ ಶ್ರಮದ ನಂತರ 2012ರಲ್ಲಿ ಸಂಸ್ಥೆ ಕಾರ್ಯಾರಂಭ ಮಾಡಿತ್ತು. ಈವರೆಗೂ ಸಾವಿರಾರು ರೋಗಿಗಳು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ರೇಡಿಯೊಥೆರಪಿ, ಕಿಮೊಥೆರಪಿ, ಶಸ್ತ್ರಚಿಕಿತ್ಸೆ, ನೋವು ಶಮನ ಘಟಕ, ಫಿಸಿಯೋಥೆರಪಿ, ರೇಡಿಯೊ ತಪಾಸಣೆ, ಪ್ರಯೋಗಾಲಯ, ರಕ್ತನಿಧಿ, ನ್ಯೂಕ್ಲಿಯರ್ ಮೆಡಿಸಿನ್, ಹೊರರೋಗಿ ವಿಭಾಗಗಳು ಶ್ರೀ ಶಂಕರ ಆಸ್ಪತ್ರೆಯಲ್ಲಿವೆ.
ಬಡವರಿಗಾಗಿ ಹಾಗೂ ಭೀಕರ ರೋಗದಿಂದ ಬಳಲುತ್ತಿರುವವರಿಗಾಗಿ ಆರಂಭವಾಗಿದ್ದ ಆಸ್ಪತ್ರೆಗೆ ಅನಂತಕುಮಾರ್ ಅವರ ಕೊಡುಗೆ ಅಪಾರವಾಗಿದೆ. ಆಸ್ಪತ್ರೆ ಬಡವರಿಗೆ, ಮಧ್ಯಮ ವರ್ಗಕ್ಕೆ ಅನುಕೂಲವಾಗಲಿ ಎನ್ನುವುದು ಸಂಸದರ ಕನಸಾಗಿತ್ತು. ಆದರೆ, ದುರ್ದೈವ ಎಂದರೆ, ಅನಂತಕುಮಾರ್ಇದೇ ಮಹಾಮಾರಿಗೆ ತಾವು ಆಸ್ಥೆಯಿಂದ ಆರಂಭಿಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ನ್ಯೂಯಾರ್ಕ್, ಲಂಡನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅನಂತಕುಮಾರ್, ತಾವೇ ಆಸ್ಥೆಯಿಂದ ನಿರ್ಮಾಣ ಮಾಡಲು ಸಹಾಯ ಮಾಡಿದ್ದ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಆ ದೇವರು ಅವರಿಗೆ ಇನ್ನಷ್ಟು ದಿನ ಇರಲು ಬಿಡಲಿಲ್ಲ.
ಕ್ಯಾನ್ಸರ್ ಔಷಧಗಳು ನಮ್ಮ ದೇಶದಲ್ಲಿ ತಯಾರಾಗಲ್ಲ. ಹೀಗಾಗಿ ಅವುಗಳ ಬೆಲೆ ದುಬಾರಿ. ಒಂದು ವೇಳೆ ಔಷಧಗಳು ಇಲ್ಲಿಯೇ ತಯಾರಾದರೆ ಕಿಮೋಥೆರಪಿಯನ್ನು ಕಡಿಮೆ ವೆಚ್ಚದಲ್ಲಿ ನಿರ್ವಹಿಸಲು ಸಾಧ್ಯ. ಬ್ಲಡ್ ಕ್ಯಾನ್ಸರ್ಗೆ ಅಗತ್ಯವಾದ ಚುಚ್ಚುಮದ್ದಿನ ಬೆಲೆ 1.18 ಲಕ್ಷ ರೂ. ಇದು ನಮ್ಮ ದೇಶದಲ್ಲಿಯೇ ತಯಾರಾದರೆ 50 ಸಾವಿರಕ್ಕೆ ಕೊಡಬಹುದು. ಒಬ್ಬ ರೋಗಿಯ ಚಿಕಿತ್ಸೆಗೆ ಸುಮಾರು 18 ಇಂಜೆಕ್ಷನ್ ಬೇಕಾಗುತ್ತದೆ.ಹೀಗಾಗಿಯೇ ಸಚಿವ ಅನಂತಕುಮಾರ್ ಶ್ರೀ ಶಂಕರ ಆಸ್ಪತ್ರೆ ಕಟ್ಟಲು ಡಾ. ಶ್ರೀನಾಥ್ ಅವರಿಗೆ ಸಹಕಾರ ಕೊಟ್ಟಿದ್ದರು.ಅಲ್ಲದೇ ಹುಬ್ಬಳ್ಳಿಯಲ್ಲಿಯೂ ಶ್ರೀಶಂಕರ್ ಕ್ಯಾನ್ಸರ್ ಆಸ್ಪತ್ರೆ ಮಾದರಿಯಲ್ಲಿಯೇ ಮತ್ತೊಂದು ಆಸ್ಪತ್ರೆ ನಿರ್ಮಾಣ ಮಾಡಲು ಮುಂದಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
