ತುಮಕೂರು:
ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಶತಾಯುಷಿ ಶ್ರೀ ಸಿದ್ದಗಂಗಾ ಶ್ರೀಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವ ಕಾರಣದಿಂದ ಇಂದು ಶ್ರೀಗಳನ್ನು ಚೆನ್ನೈಗೆ ಕರೆದೊಯ್ಯಲಾಗುತ್ತಿದೆ.
ಮಠದಿಂದ ಬೆಳಿಗ್ಗೆ 10.30 ಕ್ಕೆ ಸ್ವಾಮೀಜಿ ಹೊರಟಿದ್ದು, ಶ್ರೀಗಳನ್ನು ತುಮಕೂರಿನ ಸಿದ್ದಗಂಗಾ ಮಠದಿಂದ ರಸ್ತೆಮಾರ್ಗವಾಗಿ ಬೆಂಗಳೂರಿನ ಹೆಚ್ಎ ಎಲ್ ವಿಮಾನ ನಿಲ್ದಾಣಕ್ಕೆ ಕರೆತರಲಾಗುತ್ತಿದೆ. ಬೆಂಗಳೂರಿನಿಂದ ಐ ಕ್ಯಾಟ್ ಏರ್ ಅಂಬುಲೆನ್ಸ್ನಲ್ಲಿ ಮಧ್ಯಾಹ್ನ 12.30ಕ್ಕೆ ತೆರಳಲಿದ್ದಾರೆ.
ಸ್ವಾಮೀಜಿ ಅವರೊಂದಿಗೆ ಸಿದ್ಧಗಂಗಾ ಆಸ್ಪತ್ರೆಯ ಡಾ. ಪರಮೇಶ್, ಸ್ವಾಮೀಜಿ ಆರೈಕೆದಾರ ಮಲ್ಲಾರಾಧ್ಯ ಅವರು ಏರ್ ಅಂಬುಲೆನ್ಸ್ನಲ್ಲಿ ತೆರಳಲಿದ್ದಾರೆ.
ಶ್ರೀಗಳನ್ನು ಚೆನ್ನೈ ನ ರೆಲಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಗೆ ಕರೆದುಕೊಂಡು ಹೊಗಲು ನಿರ್ಧಾರ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಶ್ರೀಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು, ನಿನ್ನೆಯೇ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ. ಹಲವಾರು ತಜ್ಞ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಮುಖ್ಯ ಕಾರ್ಯದರ್ಶಿ, ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








