322 ಗ್ರಾಮಗಳಿಗೆಲ್ಲಾ ಒಂದೇ ಒಂದು ಜೀವರಕ್ಷಕ

ಮಧುಗಿರಿ

       ಪಟ್ಟಣದ ನಾಲ್ಕೂ ದಿಕ್ಕುಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಹಿನ್ನೆಲೆಯಲ್ಲಿ ಅಪಘಾತಗಳು ಹೆಚ್ಚು ಸಂಭವಿಸುತ್ತಿವೆ. ಗ್ರಾಮೀಣ ಭಾಗದಲ್ಲಿ ಹೆರಿಗೆ, ಹಾವು ಕಡಿತ ಮತ್ತಿತರ ತುರ್ತು ಸಂದರ್ಭದಲ್ಲಿ ಆರೋಗ್ಯ ಕವಚ ಯೋಜನೆಯಡಿಯಲ್ಲಿ ಐದು ಹೋಬಳಿಗೂ ಸೇರಿ ಒಂದೇ ಒಂದು ಆಂಬ್ಯುಲೆನ್ಸ್ ಆಮೆಗತಿಯಲ್ಲಿ ತುರ್ತುಸೇವೆ ಒದಗಿಸುತ್ತಿರುವ ವಾತಾವರಣವನ್ನು ತಾಲ್ಲೂಕಿನಲ್ಲಿ ಕಾಣಬಹುದು.

       5 ಹೋಬಳಿಗಳಲ್ಲಿ ಒಂದು ಪಟ್ಟಣ ಹಾಗೂ 322 ಗ್ರಾಮಗಳನ್ನು ಒಳಗೊಂಡು, 1131 ಚ.ಕಿ.ಮೀ ವ್ಯಾಪ್ತಿಯನ್ನು ತಾಲ್ಲೂಕು ಹೊಂದಿದೆ. 2011 ರ ಜನಗಣತಿಯಂತೆ 63,924 ಕುಟುಂಬಗಳಿಂದ ಒಟ್ಟಾರೆಯಾಗಿ 2,67,866 ಜನರಿದ್ದು, ಇವರಲ್ಲಿ ಪಟ್ಟಣವಾಸಿಗಳು 29,159 ಹಾಗೂ ಗ್ರಾಮೀಣ ಪ್ರದೇಶದವರು 2,38,707 ಜನತೆ ತಾಲ್ಲೂಕಿನಲ್ಲಿದ್ದಾರೆ. ಹೆಚ್ಚಾಗಿ 108 ರ ವಾಹನಕ್ಕೆ ಗ್ರಾಮೀಣ ಪ್ರದೇಶದ ಜನರೆ ಅವಲಂಬಿತರಾಗಿದ್ದಾರೆ. ಆದರೆ ಈ ಎರಡು ವರ್ಗದ ಜನರಿಗೆ ಈಗ ತುರ್ತು ಸೇವೆ ಒದಗಿಸುತ್ತಿರುವುದು ಮಾತ್ರ ಒಂದೇ ಒಂದು 108 ವಾಹನ.

        ಈ ಮೊದಲು ತಾಲ್ಲೂಕಿನಲ್ಲಿ ಐ.ಡಿ.ಹಳ್ಳಿ, ಮಧುಗಿರಿಯಲ್ಲಿ ಮಾತ್ರ 108 ವಾಹನದ ಸೌಲಭ್ಯವಿತ್ತು. ಆದರೆ ಈಗ ಆ ಸೌಲಭ್ಯವು ಕೂಡ ಮರೀಚಿಕೆಯಾಗುತ್ತಾ ಸಾಗುತ್ತಿದೆ. ಐಡಿಹಳ್ಳಿ, ಕೊಡಿಗೇನಹಳ್ಳಿ, ದೊಡ್ಡೇರಿ, ಬಡವನಹಳ್ಳಿ, ಮಿಡಿಗೇಶಿ, ಹೊಸಕೆರೆ, ಬ್ಯಾಲ್ಯದಲ್ಲಿ 24 ಗಂಟೆ ಆರೋಗ್ಯ ಸೇವೆಯನ್ನು ಒದಗಿಸುವ ಆಸ್ಪತ್ರೆಗಳಿವೆ. ಆದರೆ ನೇರಳೆಕೆರೆ, ಕವಣದಾಲ, ಮುದ್ದೇನಹಳ್ಳಿ, ಕೋಡಗದಾಲ, ಪುರವರ ಆಸ್ಪತ್ರೆಗಳಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯ ಬಹುದಾಗಿದೆ. ಇವೆಲ್ಲಾ ಆಸ್ಪತ್ರೆಗಳಿಗೆ ಈಗ ಕೇವಲ ಒಂದೇ ಒಂದು 108 ವಾಹನವಿದ್ದು, ಸಿಬ್ಬಂದಿ ಹಗಳಿರುಳೆನ್ನದೆ ತುರ್ತು ಸೌಲಭ್ಯವನ್ನು ಒದಗಿಸುತ್ತಿದ್ದಾರೆ.

       ನೆರೆಯ ಸಿರಾ ತಾಲ್ಲೂಕಿನಲ್ಲಿ 5, ಪಾವಗಡ 5, ಜಿಲ್ಲೆಯ ಅತ್ಯಂತ ಚಿಕ್ಕ ತಾಲ್ಲೂಕು ಆದ ಕೊರಟಗೆರೆಯಲ್ಲಿ 5 108 ವಾಹನಗಳು ಸಾರ್ವಜನಿಕರಿಗೆ ಸೇವೆ ಒದಗಿಸುತ್ತಿವೆ. ಆದರೆ ಇಲ್ಲಿ ಮೂರು ಶಿಫ್ಟ್‍ಗಳಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಮೂರೂ ಶಿಫ್ಟ್‍ಗೆ ಒಂದೇ ವಾಹನ ಕಾರ್ಯ ನಿರ್ವಹಿಸುವಂತಾಗಿದೆ.

       ಕೆಲ ದಿನಗಳ ಹಿಂದೆಯಷ್ಟೆ 20 ಜನ ಅಡುಗೆ ಸಹಾಯಕರನ್ನು ಒತ್ತು ಸಾಗುತ್ತಿದ್ದ ವಾಹನದ ದುರಂತಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನಲ್ಲಿ ಇದ್ದಂತಹ ಒಂದೇ ಒಂದು ಆಂಬ್ಯುಲೆನ್ಸ್ ಸುಮಾರು ಆರು ಟ್ರಿಪ್ ದುರಂತ ನಡೆದ ಸ್ಥಳದಿಂದ ಮಧುಗಿರಿಗೆ ಗಾಯಾಳುಗಳನ್ನು ಒತ್ತು ಸಾಗಿದ್ದು, ತುಮಕೂರಿನವರೆವಿಗೂ ತನ್ನ ಸೌಲಭ್ಯವನ್ನು ಒದಗಿಸಿತ್ತು. ಇಂತಹ ಸಂದರ್ಭಗಳಲ್ಲಿ ಬೇರೆ ಏನಾದರೂ ಸಂಭವಿಸಬಾರದಂತಹ ಸರಣಿ ಗಂಭಿರ ಘಟನೆಗಳೇನಾದರೂ ನಡೆದರೆ ಸಂತ್ರಸ್ತರ ಸ್ಥಿತಿ ಏನಾಗಬಹುದು..?

      ಕೆಲ ವರ್ಷಗಳ ಹಿಂದೆ ಸ್ಕೂಟರ್‍ನಲ್ಲಿ ಶವ ಸಾಗಾಟ ಮಾಡಿದ ಹಿನ್ನೆಲೆಯಲ್ಲಿ, ಅಂದಿನ ಶಾಸಕ ಕೆ.ಎನ್.ರಾಜಣ್ಣ ಕೊಡಿಗೇನಹಳ್ಳಿಗೆ ನಗು ಮಗುವಿನ ಯೋಜನೆಯಡಿಯ ಆಂಬ್ಯುಲೆನ್ಸ್‍ನ್ನು ಅಧಿಕಾರಿಗಳ ಸಹಕಾರದಿಂದ ತಕ್ಷಣವೆ ಹೋಬಳಿ ಭಾಗದ ಜನರಿಗೆ ಅನುಕೂಲ ಮಾಡಿಕೊಟ್ಟರು. ಅಲ್ಲದೆ ತಾಲ್ಲೂಕಿಗೆ ಮತ್ತಷ್ಟು ಆಂಬ್ಯುಲೆನ್ಸ್‍ಗಳ ಸೇವೆ ಒದಗಿಸುವಂತೆ ಸರಕಾರದೊಂದಿಗೆ ಪತ್ರ ವ್ಯವಹಾರ ಮಾಡಿದ್ದರು. ಆದರೂ ಸಹ ಇದೂವರೆವಿಗೂ ಅನುಷ್ಠಾನವಾಗಲೆ ಇಲ್ಲ.

       ಕೊಡಿಗೇನಹಳ್ಳಿಯ ಆಂಬ್ಯುಲೆನ್ಸ್ ವಾಹನವು ಈಗ ಸ್ಥಳೀಯ ವೈದ್ಯರು ಸೂಚಿಸುವ ರೋಗಿಗಳಿಗೆ ಮಾತ್ರ ಲಭ್ಯವಾಗುತ್ತಿದ್ದು, ಈ ವಾಹನವು ಸಹ ಆಗಾಗ ಚಾಲಕನ ಕೊರತೆ ಎದುರಿಸುತ್ತಿದೆ.ಪ್ರತಿ ನಿತ್ಯ ಸುಮಾರು 12 ಪ್ರಕರಣಗಳು ದಾಖಲಾಗುತ್ತಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಗತ್ಯ ಸೇವೆಗಳಿದ್ದರೂ ಸಹ ಕೆಲ ವೈದ್ಯರು ಸುಖಾ ಸುಮ್ಮನೆ ರೋಗಿಗಳನ್ನು ತುಮಕೂರಿಗೆ ರವಾನಿಸುತ್ತಿದ್ದಾರೆ. ಈ ವರ್ತನೆಯಿಂದಾಗಿ ತೊಂದರೆಯಾಗುತ್ತಿದ್ದು, ತುರ್ತು ಸಂದರ್ಭದಲ್ಲಿ ಸಂತ್ರಸ್ತರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಅಲ್ಲದೆ ಉಚಿತ ಸೇವೆ ಎಂದು ಜನರು ಸಣ್ಣ ಪುಟ್ಟ ಸಂದರ್ಭಗಳಿಗೂ 108 ವಾಹನ ಬಳಸಿಕೊಳ್ಳುತ್ತಿರುವುದು ವಿಷಾದನೀಯ ಸಂಗತಿಯಾಗಿದೆ.

        ಕಳೆದ ಎರಡು ದಿನಗಳ ಹಿಂದೆ ನಡೆದ ತಾಪಂನ ಸಾಮಾನ್ಯ ಸಭೆಯಲ್ಲಿ ಸದಸ್ಯರು ತಮ್ಮ ಕ್ಷೇತ್ರದ ಕಾಮಗಾರಿಗಳು ಬೇರೆಯವರ ಪಾಲಾಗುತ್ತಿವೆ, ತಮಗೆ ಅಧಿಕಾರವಿಲ್ಲವೇ ಎಂದು ಬೊಬ್ಬೆ ಇಟ್ಟಿದ್ದರು. ಆದರೆ ಇಡೀ ತಾಲ್ಲೂಕಿನ ಸಮಸ್ಯೆಯಾಗಿರುವ ಆಂಬುಲೆನ್ಸ್ ವಿಚಾರವಾಗಿ ಯಾರೊಬ್ಬರು ಮಾತನಾಡದಿರುವುದು, ಅಧ್ಯಕ್ಷರ ಹಾಗೂ ಅಧಿಕಾರಿಗಳ ಗಮನಕ್ಕೆ ತರದಿರುವುದು ಜನಪ್ರತಿನಿಧಿಗಳೆನಿಸಿಕೊಂಡವರ ಜನ ಸೇವೆಗೆ ಸಾಕ್ಷಿಯಾಗಿದೆ.

       ಏನೇ ಆಗಲಿ ಸುಮಾರು 64 ಸಾವಿರ ಕುಟುಂಬಗಳಿಗೆ ಒಂದೇ ಒಂದು ಆಂಬ್ಯುಲೆನ್ಸ್ ಇದ್ದರೂ ಸಹ ಸರಕಾರದ ನಿಯಮಾವಳಿಗಳನ್ನು ಆರೋಗ್ಯಧಿಕಾರಿಗಳೆ ಗಾಳಿ ತೂರುತ್ತಿದ್ದಾರೆಯೆ? ಅಥವಾ 108 ಸೌಲಭ್ಯ ಒದಗಿಸುವ ಖಾಸಗಿ ಸಂಸ್ಥೆಯವರು ಸುಮ್ಮನೆ ಕಿ.ಲೋ. ಮೀಟರ್‍ಗಳ ಲೆಕ್ಕ ತೋರಿಸಿ ಹಣ ದೋಚುತ್ತಿದ್ದಾರೆಯೆ ಎಂಬ ಯಕ್ಷ ಪ್ರಶ್ನೆ ಕಾಡತೊಡಗಿದೆ.

         ಐಡಿಹಳ್ಳಿಯಲ್ಲಿದ್ದಂತಹ 108 ವಾಹನವು ಅಪಘಾತಗೊಂಡಿರುವ ಮಾಹಿತಿ ಇದೆ. ಆಂಬ್ಯುಲೆನ್ಸ್ ಸೇವೆಯ ಬಗ್ಗೆ ಕೆ.ಡಿ.ಪಿ ಸಭೆ ಹಾಗೂ ಮಧುಗಿರಿ ಶಾಸಕರ ಬಳಿ ಚರ್ಚಿಸಲಾಗಿದೆ ಮತ್ತು ಇನ್ನೂ 3 ತಿಂಗಳಲ್ಲಿ ಹಂತ ಹಂvವಾಗಿ ವಾಹನಗಳ ಸೇವೆ ಒದಗುವ ಭರವಸೆ ನನಗೂ ಇದೆ.

         ಹಿಂದಿನ ತಾಪಂ ಸಭೆಯಲ್ಲಿಯೇ ಚರ್ಚಿಸಲಾಗಿದೆ. ನಾಳೆಯೆ ಡಿಹೆಚ್‍ಓರವರನ್ನು ಖುದ್ದು ಭೇಟಿ ಮಾಡುತ್ತೇನೆ. ಜೊತೆಗೆ ಸಮಸ್ಯೆಯ ಬಗ್ಗೆ ನಮ್ಮ ಉಪ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೇನೆ. ತಾಲ್ಲೂಕಿನ ಎಲ್ಲಾ ಹೋಬಳಿಗಳಿಗೂ 108 ಸೇವೆ ಒದಗಿಸುವಂತೆ ಚರ್ಚಿಸಲಾಗುವುದು.

ಪ್ರಜಾ ಪ್ರಗತಿ ಫಲ ಶೃತಿ:ಜನರ ಕರೆಗೆ ಸ್ಪಂದಿಸಿದ ಆರೋಗ್ಯಾಧಿಕಾರಿಗಳು

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link