ವಾರಕ್ಕೆ 2 ಬಾರಿ ನೀರು ಪೂರೈಕೆಗೆ ಸಮಸ್ಯೆ ಇಲ್ಲ

ದಾವಣಗೆರೆ:

         ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜೂನ್ ತಿಂಗಳ ವರೆಗೆ ವಾರಕ್ಕೆ 2 ದಿನ ಕುಡಿಯುವ ನೀರು ಪೂರೈಸಲು ಯಾವುದೇ ಸಮಸ್ಯೆ ಇಲ್ಲ ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ತಿಳಿಸಿದ್ದಾರೆ.

          ನಗರದ ಜಿಲ್ಲಾ ವರದಿಗಾರರ ಕೂಟದಿಂದ ಬುಧವಾರ ಏರ್ಪಡಿಸಿದ್ದ ಮುಖಾಮುಖಿ ಕಾರ್ಯಕ್ರಮದಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಮುಂಚೆ ನೀರಿನ ಸಂಗ್ರಹದ ಸಮ್ಯೆ ಇದ್ದ ಕಾರಣಕ್ಕೆ ವಾರಕ್ಕೊಮ್ಮೆ, ಹತ್ತು ದಿನಗಳಿಗೊಮ್ಮೆ ನೀರು ಪೂರೈಸಲಾಗುತಿತ್ತು. ಆದರೆ, ಈಗ ನಗರಕ್ಕೆ ನೀರು ಪೂರೈಸುವ ಕುಂದುವಾಡ ಕೆರೆ ಹಾಗೂ ಟಿವಿ ಸ್ಟೇಷನ್ ಕೆರೆಯಲ್ಲಿ ಅಗತ್ಯ ಪ್ರಮಾಣದಲ್ಲಿ ನೀರಿನ ಸಂಗ್ರಹಣೆ ಇದ್ದು, ಪ್ರಸ್ತುತ ವಾರಕ್ಕೆ 2 ಬಾರಿ ನೀರು ಪೂರೈಸಲಾಗುತ್ತಿದ್ದು, ಹೀಗೆ ಜೂನ್ ವರೆಗೆ ನೀರು ಕೊಡಲು ಯಾವುದೇ ಸಮಸ್ಯೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಜಲಸಿರಿಗೆಬೇಕು 3 ವರ್ಷ:

         ದಿನದ 24 ಗಂಟೆ ನೀರು ಪೂರೈಸುವ ಜಲಸಿರಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಕಾಮಗಾರಿ ಮುಕ್ತಾಯಗೊಳ್ಳಲು ಇನ್ನೂ ಮೂರು ವರ್ಷ ಕಾಲಾವಕಾಶ ಬೇಕಾಗಿದೆ. ಈ ಯೋಜನೆಯಡಿಯಲ್ಲಿ ಹೊಸ ಪೈಪ್‍ಲೈನ್, ಓವರ್ ಹೆಡ್ ಟ್ಯಾಂಕ್, ತುಂಗಭದ್ರ ನದಿಯಲ್ಲಿ 90 ಕೋಟಿ ರೂ. ವೆಚ್ಚದಲ್ಲಿ ಬ್ಯಾರೇಜ್ ನಿರ್ಮಾಣವಾಗುತ್ತಿದೆ. ಈ ಯೋಜನೆ ಅನುಷ್ಠಾನಗೊಂಡ ಬಳಿಕ ಸ್ಮಾರ್ಟ್ ಮೀಟರ್ ಅಳವಡಿಕೆಯಾಗುವುದರಿಂದ ನೀರಿನ ಬಳಿಕೆಯ ಆಧಾರದ ಮೇಲೆ ತಿಂಗಳಿಗೊಮ್ಮೆ ನೀರಿನ ಬಿಲ್ ಪಾವತಿಸಬೇಕಾಗುತ್ತದೆ ಎಂದರು,

ತಡ ರಾತ್ರಿ ನೀರಿಲ್ಲ:

       ರಾತ್ರಿ 11 ಗಂಟೆಯ ನಂತರ ಹಾಗೂ ಬೆಳಗಿನ ಜಾವ 5 ಗಂಟೆಯ ಒಳಗೆ ಕುಡಿಯುವ ನೀರು ಬಿಡದಂತೆ ವಾಲ್‍ಮೆನ್‍ಗಳಿಗೆ ಸೂಚನೆ ನೀಡಲಾಗುವುದು. ಅಲ್ಲದೆ, ಸಾರ್ವಜನಿಕರು ನೀರನ್ನು ಪೋಲು ಮಾಡದಂತೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ಇಲ್ಲದ ಯುಜಿಡಿ ಇಂಟರ್‍ಲಿಂಕ್:

         ಒಳ ಚರಂಡಿಗಳನ್ನು ವೈಜ್ಞಾನಿಕವಾಗಿ ಇಂಟರ್‍ಲಿಂಕ್ ಮಾಡದ ಕಾರಣ ಮಳೆ ನೀರು ಹರಿದು ಹೋಗುವ ಚರಂಡಿಗಳಲ್ಲಿ ಯುಜಿಡಿ ನೀರು ಹರಿದು ಹೋಗುತ್ತಿದೆ. ಹೀಗಾಗಿ ಸ್ವಲ್ಪ ಮಳೆ ಬಂದರೂ ಮಳೆ ನೀರು ಸರಾಗವಾಗಿ ಹರಿಯದೇ ರಸ್ತೆಗಳಲ್ಲಿ ನಿಂತು ಬಿಡುತ್ತದೆ. ಇಂತಹ 60 ಜಾಗಗಳನ್ನು ಗುರುತಿಸಿದ್ದೇವೆ. ಅಲ್ಲದೆ, ಕಾಲುವೆ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿರುವುದು ಇದಕ್ಕೆ ಕಾರಣವಾಗಿದೆ. ಹೀಗಾಗಿ ನಗರದಲ್ಲಿ 8 ಕಡೆ ಮಳೆ ನೀರು ಚರಂಡಿ ಅತಿಕ್ರಮಣವಾಗಿರುವುದನ್ನು ಗುರುತಿಸಿದ್ದು, ಅವುಗಳನ್ನು ಶೀಘ್ರವೇ ತೆರವುಗೊಳಿಸಲಾಗುವುದು ಎಂದರು.

ಹಂದಿ ಹಿಡಿಯೋದು ನಿಲ್ಲಲ್ಲ:

          ನಗರದಲ್ಲಿ ಹಂದಿ ನಿರ್ಮೂಲನೆಯಾಗುವ ವರೆಗೂ ಹಂದಿಗಳ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ. ಹಂದಿ ಹಿಡಿಯಲು ಇದುವರೆಗೂ ಪಾಲಿಕೆಯಿಂದ 1 ರೂ.ಖರ್ಚು ಮಾಡಿಲ್ಲ. ಪೊಲೀಸ್ ಬೆಂಗಾವಲಿನಲ್ಲಿ ದಾವಣಗೆರೆಯಿಂದ ತಮಿಳುನಾಡಿನ ಕಡೆಗೆ ಹಿಡಿದ ಹಂದಿಗಳನ್ನು ಸ್ಥಳಾಂತರಿಸಲಾಗುತ್ತಿದ್ದು, ಸುಮಾರು 10 ಸಾವಿರ ಹಂದಿಗಳಿರಬಹುದು ಎಂಬುದಾಗಿ ಅಂದಾಜಿಸಲಾಗಿತ್ತು. ಈ ಪೈಕಿ ಈಗಾಗಲೇ 4 ಸಾವಿರ ಹಂದಿಗಳನ್ನು ನಗರದಿಂದ ಸ್ಥಳಾಂತರ ಮಾಡಲಾಗಿದ್ದು, ಇನ್ನೂ ಆರು ಸಾವಿರ ಹಂದಿಗಳು ನಗರದಲ್ಲಿರ ಬಹುದು ಎಂದು ಅಂದಾಜಿಸಿದರು.

ರಚನೆಯಾಗದ ಆಶ್ರಯ ಸಮಿತಿ:

           ಇನ್ನೂ ಆಶ್ರಯ ಸಮಿತಿ ರಚನೆ ಆಗದ ಹಿನ್ನೆಲೆಯಲ್ಲಿ ಹಕ್ಕುಪತ್ರ ವಿತರಿಸಲಾಗುತ್ತಿಲ್ಲ. ಆಶ್ರಯ ಸಮಿತಿಗೆ ನಾಲ್ವರ ನಾಮ ನಿರ್ದೇಶನವಾದ ಬಳಿಕ ಶಾಸಕರ ನೇತೃತ್ವದಲ್ಲಿ ಆಶ್ರಯ ಸಮಿತಿ ರಚನೆಯಾಗಲಿದೆ. ನಂತರ ಹಕ್ಕುಪತ್ರಗಳನ್ನು ತಯಾರಿಸಿ, ರಾಜೀವ್‍ಗಾಂಧಿ ಹೌಸಿಂಗ್ ಕಾಪೋರೇಷನ್‍ಗೆ ಹಕ್ಕುಪತ್ರಗಳನ್ನು ಕಳುಹಿಸಿ, ಅನುಮತಿ ಪಡೆದ ಬಳಿಕ ಹಕ್ಕುಪತ್ರ ವಿತರಿಸಲಾಗುವುದು ಎಂದರು.

200 ಕಿ.ಮೀ. ಕಚ್ಚಾ ರಸ್ತೆ:

           ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1,227 ಕಿ.ಮೀ. ರಸ್ತೆಗಳಿದ್ದು, ಈ ಪೈಕಿ 800 ಕಿ.ಮಿ. ರಸ್ತೆಗಳು ಟಾರ್ ರೋಡ್‍ಗಳಾಗಿದ್ದು, 118 ಕಿ.ಮೀ. ರಸ್ತೆಗಳು ಸಿಸಿ ರಸ್ತೆಗಳಾಗಿ ನಿರ್ಮಾಣವಾಗಿವೆ. ಇನ್ನುಳಿದಂತೆ 200 ಕಿ.ಮೀ. ರಸ್ತೆಗಳು ಕಚ್ಚಾರಸ್ತೆಗಳಿದ್ದು. ಇವುಗಳ ಅಭಿವೃದ್ಧಿಯಾಗಬೇಕಿದೆ ಎಂದರು.

           ಕಟ್ಟಡ ನಿರ್ಮಾಣ ಪರವಾನಿಗೆ ಪಡೆಯುವಾಗ ನೀಡಿರುವ ವಿನ್ಯಾಸದಂತೆ ಬಹುತೇಕರು ಬಹುಮಹಡಿ ಕಟ್ಟಡಗಳನ್ನು ನಿರ್ಮಿಸದೇ, ಮನಸೋ ಇಚ್ಛೆಯಂತೆ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಇದನ್ನು ಪರಿಶೀಲಿಸಬೇಕಾದ ಸಿವಿಲ್ ಇಂಜೀನಿಯರ್‍ಗಳು ಸಹ ಸರಿಯಾಗಿ ಪರಿಶೀಲಿಸದೇ, ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡುತ್ತಿರುವುದೇ ಇದೆಲ್ಲದಕ್ಕೂ ಕಾರಣವಾಗಿದೆ. ಆದ್ದರಿಂದ ಸಿವಿಲ್ ಇಂಜೀನಿಯರ್‍ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಕ್ರಮಕ್ಕಾಗಿ ಪ್ರಸ್ತಾವನೆ:

           ಪಾಲಿಕೆ ವ್ಯಾಪ್ತಿಯಲ್ಲಿರುವ ಕಟ್ಟಡಗಳನ್ನು ಅಧಿಕೃತ, ಅನಧಿಕೃತ ಹಾಗೂ ಅಕ್ರಮ ಕಟ್ಟಡಗಳೆಂಬುದಾಗಿ ಎಂದು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಅಧಿಕೃತ ಕಟ್ಟಡಗಳಿಗೆ ಡೋರ್ ನಂಬರ್ ಇವೆ, ಅನಧಿಕೃತ ಕಟ್ಟಡಗಳಿಗೆ ಡೋರ್ ನಂಬರ್ ನೀಡಲು ಪಾಲಿಕೆಯಲ್ಲಿ ಅವಕಾಶವಿದೆ. ಆದರೆ, ಅಕ್ರಮ ಕಟ್ಟಡಗಳನ್ನು ಸಕ್ರಮ ಮಾಡಿಕೊಡಲು ಅವಕಾಶವಿಲ್ಲ. ಆದ್ದರಿಂದ ಇನ್ನೊಂದು ಬಾರಿ ಅಕ್ರಮ ಕಟ್ಟಡಗಳನ್ನು ಸಕ್ರಮ ಮಾಡಲು ಅವಕಾಶ ನೀಡಬೇಕೆಂದು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

          ಮುಖಾಮುಖಿ ಕಾರ್ಯಕ್ರಮದಲ್ಲಿ ಮೇಯರ್ ಶೋಭಾ ಪಲ್ಲಾಗಟ್ಟೆ, ಕೂಟದ ಅಧ್ಯಕ್ಷ ಬಿ.ಎನ್.ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ನಾಗರಾಜ್ ಬಡದಾಳ್, ಖಜಾಂಚಿ ತಾರಾನಾಥ್, ಉಪಾಧ್ಯಕ್ಷ ಎನ್.ಆರ್. ನಟರಾಜ್, ಪಾಲಿಕೆ ಆರೋಗ್ಯಧಿಕಾರಿ ಚಂದ್ರಶೇಖರ್ ಸುಂಕದ್, ಎಂಜಿನಿಯರ್ ಮಂಜುನಾಥ್ ಹಾಜರಿದ್ದರು. ದೇವಿಕ ಸುನೀಲ್ ಸ್ವಾಗತಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link