ಬೆಂಗಳೂರು
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೋ ನಿರ್ಮಿತ ಜಿಸ್ಯಾಟ್-7ಎ ಉಪಗ್ರಹದ ಉಡಾವಣೆ ಪೂರ್ವ ನಿಗದಿಯಂತೆ ಈ ಸಂಜೆ 4 ಗಂಟೆ 10 ನಿಮಿಷಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನಡೆಯಿತು.
ಉಪಗ್ರಹವನ್ನು ಹೊತ್ತ ಜಿಎಸ್ಎಲ್ವಿ ಎಫ್-11 ರಾಕೆಟ್, ಉಡ್ಡಯನ ವೇದಿಕೆಯಿಂದ ಆಕಾಶಕ್ಕೆ ಚಿಮ್ಮುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ವಿಜ್ಞಾನಿಗಳ ಸಮೂಹ ಹರ್ಷೋದ್ಗಾರ ಮಾಡಿತು.
4ನೇ ಪೀಳಿಗೆಯ ಈ ರಾಕೆಟ್ ಜಿಸ್ಯಾಟ್-7ಎ ಉಪಗ್ರಹವನ್ನು ನಿಗದಿತ ಭೂಸ್ಥಿರ ಕಕ್ಷೆಗೆ ತಲುಪಿಸಿದೆ. ಕ್ಯು ಬ್ಯಾಂಡ್ನಲ್ಲಿ ಭಾರತದ ಸಂವಹನ ಕ್ಷೇತ್ರದ ಸಾಮಥ್ರ್ಯವನ್ನು ಹೆಚ್ಚಿಸಲಿರುವ ಈ ಉಪಗ್ರಹ 8ವರ್ಷಗಳ ಕಾಲ ಕಾರ್ಯನಿರ್ವಹಿಸಲಿದ್ದು, ಭಾರತೀಯ ವಾಯುಪಡೆಯ ಕಾರ್ಯಾಚರಣೆಗಳಿಗೆ ಹೆಚ್ಚು ನೆರವಾಗಲಿದೆ.ಕಳೆದ 35 ದಿನಗಳಲ್ಲಿ ಇದೀಗ ಇಸ್ರೋ 3ನೇ ಸಂಪರ್ಕ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಿಕೊಟ್ಟಿದೆ.
ನವೆಂಬರ್ 14 ಮತ್ತು 29ರಂದು ಎರಡು ಕಾರ್ಯಾಚರಣೆಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದವು. 2018ರಲ್ಲಿ ಇಸ್ರೋ ಪೂರೈಸಿದ ಕೊನೆಯ ಯೋಜನೆ ಇದಾಗಿದ್ದು, ಹೊಸ ವರ್ಷದಲ್ಲಿ ಸಂಸ್ಥೆ ಮತ್ತಷ್ಟು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಇಸ್ರೋ ಅಧ್ಯಕ್ಷರಾದ ಕೆ.ಸಿವನ್ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜಿಎಸ್ಎಲ್ವಿ ಉಪಗ್ರಹ ವಾಹಕಕ್ಕೆ ಕೆಲವೊಂದು ಅತ್ಯಾಧುನಿಕ ಬದಲಾವಣೆಗಳನ್ನು ತರುವ ಮೂಲಕ ಜಿಎಸ್ಎಲ್ವಿ ಎಫ್-11 ವಾಹಕವನ್ನು ನಿರ್ಮಿಸಲಾಗಿದೆ. ಕಳೆದವಾರ ಬಂಗಾಳಕೊಲ್ಲಿಯಲ್ಲಿ ಎದ್ದಿದ್ದ ಫೆಥಾಯಿ ಚಂಡಮಾರುತದಿಂದಾಗಿ ಈ ಕಾರ್ಯಾಚರಣೆಗೆ ಆತಂಕ ಎದುರಾಗಿತ್ತು. ಆದರೆ, ಹವಾಮಾನ ಇಲಾಖೆಯ ಸ್ಪಷ್ಟ ಮುನ್ಸೂಚನೆಯಿಂದ ಅಗತ್ಯ ವ್ಯವಸ್ಥೆಗಳೊಂದಿಗೆ ಇಂದು ಯಶಸ್ವಿಯಾಗಿ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಸಿವನ್ ಹೇಳಿದರು.
ಜಿಸ್ಯಾಟ್-7ಎ ಉಪಗ್ರಹ ದೇಶದ ರಕ್ಷಣಾ ಸಾಮಥ್ರ್ಯವನ್ನು ಹೆಚ್ಚಿಸಲಿದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








