ಬೆಂಗಳೂರು
ಸ್ಕೂಟರ್ನಲ್ಲಿ ಹೋಗುತ್ತಿದ್ದ ಪರೋಟಾ ವ್ಯಾಪಾರಿಯೊಬ್ಬ ರಸ್ತೆಗೆ ಅಡ್ಡ ಬಂದ ಗೂಳಿಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದು ಮೃತಪಟ್ಟಿರುವ ದುರ್ಘಟನೆ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸುಬ್ರಮಣ್ಯಪುರದ ಬಳಿ ಶನಿವಾರ ಬೆಳಿಗ್ಗೆ ನಡೆದಿದೆ.
ಉತ್ತರಹಳ್ಳಿಯ ವೈಷ್ಣವಿ ಲೇಔಟ್ನ ರವಿಕುಮಾರ್ (27)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ.ಮನೆಯಲ್ಲಿ ಪರೋಟಾ ತಯಾರಿಸಿ ಹೋಟೆಲ್ಗಳಿಗೆ ಪೂರೈಕೆ ಮಾಡುತ್ತಿದ್ದ ರವಿಕುಮಾರ್ ಅವರು ಬೆಳಿಗ್ಗೆ 6ರ ವೇಳೆ ಸ್ಕೂಟರ್ನಲ್ಲಿ ಪರೋಟಾ ತೆಗೆದುಕೊಂಡು ಹೋಗುತ್ತಿದ್ದರು.
ಮಾರ್ಗಮಧ್ಯೆ ಸುಬ್ರಮಣ್ಯಪುರದ ಅಂಚೆ ಕಚೇರಿ ಬಳಿ ರಸ್ತೆಗೆ ಅಡ್ಡ ಬಂದ ಗೂಳಿಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬೈಕ್ ಸವಾರ ಗಾಯ
ರಸ್ತೆಯಲ್ಲಿ ಯು ತಿರುವು ಪಡೆದುಕೊಳ್ಳುತ್ತಿರುವಾಗ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಕಳೆದ ಡಿ. 15 ರಂದು ಕುಮಾರಸ್ವಾಮಿ ಲೇಔಟ್ನ ಸಾರಕ್ಕಿ ಸಿಗ್ನಲ್ನ ಮಾರುಕಟ್ಟೆ ಬಳಿ ನಡೆದಿದೆ
ಗಾಯಗೊಂಡಿರುವ ಸವಾರ ಮಲ್ಲೇಶ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸುಮಾರು 20 ಅಡಿ ದೂರ ಹಾರಿ ಬಿದ್ದಿದ್ದು, ಅಪಘಾತವೆಸಗಿ ಪರಾರಿಯಾಗಿರುವ ಕಾರು ಚಾಲಕನಿಗಾಗಿ ತೀವ್ರ ಶೋಧ ನಡೆಸಲಾಗಿದೆ ಇವರೆಡು
ಪ್ರಕರಣಗಳನ್ನು ದಾಖಲಿಸಿರುವ ಕುಮಾರಸ್ವಾಮಿ ಲೇಔಟ್ ಸಂಚಾರ ಪೆಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಸಾರಾ ಫಾತೀಮಾ ತಿಳಿಸಿದ್ದಾರೆ.
ಕಾರು ಚಾಲಕ ಸಾವು
ಕಾಂಪೌಂಡ್ ಗೋಡೆಗೆ ಕಾರು ಡಿಕ್ಕಿ ಹೊಡೆದು ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ಶುಕ್ರವಾರ ಮಧ್ಯರಾತ್ರಿ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾರಣ್ಯ ನಗರದ ಬಳಿ ನಡೆದಿದೆ.
ವಿದ್ಯಾನಗರದ ವಸಂತ ವಿಹಾರದ ವಾಸಿಯಾಗಿದ್ದ ಬಿಹಾರ ಮೂಲದ ಮುಕೇಶ್ ಕುಮಾರ್ ಜಾ (35)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ. ಖಾಸಗಿ ಮ್ಯಾಗ್ನಲಿಕಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕುಮಾರ್ ಜಾ ಅವರು ರಾತ್ರಿ 2ರ ವೇಳೆ ಕಾರಿನಲ್ಲಿ ಹೋಗುತ್ತಿದ್ದಾಗ ವಿದ್ಯಾನಗರದ ವೃತ್ತಿ ತರಬೇತಿ ಕೇಂದ್ರದ ಕಾಂಪೌಂಡ್ ಗೇಟ್ಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.
ಚಿಕ್ಕಜಾಲ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಸಾ.ರಾ ಫಾತೀಮಾ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








