ಹಗರಿಬೊಮ್ಮನಹಳ್ಳಿ:
ರೈತನು ತಾನು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ತಾನೇ ಬೆಲೆ ನಿಗದಿಮಾಡುವ ಕಾಲಬರುವವರೆಗೂ ರೈತನ ಶ್ರೇಯಾಭಿವೃದ್ಧಿ ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಗಂ.ಭೀ.ಸ.ಪ.ಪೂ.ಕಾಲೇಜ್ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಎರಡು ದಿನಗಳಕಾಲ ಹಮ್ಮಿಕೊಂಡಿದ್ದ ಜಿಲ್ಲಾ ಕೃಷಿ ಉತ್ಸವದ ಭಾನುವಾರ ಸಂಜೆ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸ್ವಾಮಿನಾಥನ್ ವರದಿಜಾರಿಗಾಬೇಕು ಎನ್ನುವುದು ರೈತರ ಒತ್ತಾಯ. ಆದರೆ, ಇಂದಿಗೂ ಅದು ಸಾಧ್ಯವಾಗುತ್ತಿಲ್ಲ. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ 340ಕಡೆ ಭಾಷಣಮಾಡಿದ್ದಾರೆ. ತಾವು ರೈತರ ಬಗ್ಗೆ ಮಾತನಾಡುವಾಗ ಸ್ವಾಮಿನಾಥನ್ ವರದಿ ಜಾರಿಮಾಡುವುದಾಗಿ ಭರವಸೆ ನೀಡುತ್ತಾರೆ ಅದು ಬರೀ ಸುಳ್ಳು ಮತ್ತು ಪೊಳ್ಳು ಭಾಷಣವಾಗಿದೆ ಎಂದು ಆರೋಪಿಸಿದರು.
ಇಂದು ರೈತರನ್ನು ಎಲ್ಲಾ ಕಡೆ ಶೋಷಣೆಗೊಳಪಡಿಸುವವರೇ ಸಮಾಜದಲ್ಲಿದ್ದಾರೆ. ಎಪಿಎಂಸಿಗಳು ದಲ್ಲಾಳಿಗಳ ಹಿಡಿತದಲ್ಲಿವೆ. ಇದರಿಂದ ರೈತರು ಹೊರಬರಬೇಕು, ದೇಶ ರೈತರ ಸಾಲಮನ್ನಾ ಮಾಡಬೇಕು, ಕೃಷಿ ಪುನಃಶ್ಚೇತನಗೊಳ್ಳಬೇಕು, ಬೆಳೆದ ಬೆಳೆಗೆ ಬೆಲೆ ರೈತನೇ ನಿಗದಿಮಾಡಬೇಕು ಇದು ನಮ್ಮೆಲ್ಲರ ಒತ್ತಾಯ ಆಗಿದೆ ಎಂದರು.
ಬಳ್ಳಾರಿ ಜಿ.ಪಂ.ಉಪಾಧ್ಯಕ್ಷೆ ದೀನಾ ಮಂಜುನಾಥ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಪೂರ್ಣ ಸಮಾಜ ಸೇವೆಯಲ್ಲಿ ತೊಡಗಿದೆ. ಮಹಿಳೆಯರು ಈ ಸಂಘಟನೆಯ ಮೂಲಕ ಸಮಾಜದಲ್ಲಿ ಸ್ವಾವಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿದೆ, ಕೃಷಿಗೆ ಹೆಚ್ಚು ಒತ್ತು ನೀಡುತ್ತಿರುವ ಇವರು ಒಂದು ಕ್ರಾಂತಿಯನ್ನೇ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಒಕ್ಕೂಟದ ರಾ.ಕೊ.ಬದ ಅಧ್ಯಕ್ಷರಾದ ಗುರುಸಿದ್ದನಗೌಡ, ಜಿಲ್ಲಾ ಉಪಾಧ್ಯಕ್ಷ ಡಿ.ಕೊಟ್ರೇಶ್, ಪುರಸಭೆ ಸದಸ್ಯರಾದ ಡಾ.ಸುರೇಶ್ ಕುಮಾರ್, ಡಿಶ್ ಮಂಜುನಾಥ, ಮುಖಂಡರಾದ ಜಿ.ಲಕ್ಷ್ಮೀಪತಿ, ಬನ್ನಿಕಲ್ಲು ಸಿದ್ದನಗೌಡ, ಹೊನ್ನೂರಪ್ಪ, ಎಸ್.ಎಸ್.ಎತ್ತಿನಮನಿ, ನಟರಾಜ್ ಬದಾಮಿ, ಬ್ರಹ್ಮಾನಂದ ಕಾಲೇಜ್ ಪ್ರಾಂಶುಪಾಲರಾದ ರಾಮಕೃಷ್ಣ, ತಹಸೀಲ್ದಾರ್ ವಿಜಯಕುಮಾರ್, ತಾ.ಪಂ.ಇಒ ಮಲ್ಲಾನಾಯ್ಕ, ಸಿಪಿಐ ರಾಮಪ್ಪ ಸಾವಳಿಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
