ಹೊನ್ನಾಳಿ:
ಬೆಳಗುತ್ತಿ ಸಮೀಪದ ಶ್ರೀ ತೀರ್ಥರಾಮೇಶ್ವರ ಪುಣ್ಯಕ್ಷೇತ್ರದಲ್ಲಿ ಜ. 10ರಿಂದ 12ರವರೆಗೆ ಇಲ್ಲಿನ ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಲೋಕ ಕಲ್ಯಾಣಾರ್ಥವಾಗಿ ಮೌನ ಇಷ್ಟಲಿಂಗ ಪೂಜಾ ಅನುಷ್ಠಾನ ಕಾರ್ಯಕ್ರಮ ನಡೆಸಲಿದ್ದಾರೆ .
ಪ್ರತಿ ದಿನ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೂ ಎಲ್ಲಾ ಭಕ್ತಾದಿಗಳಿಗೆ ಶ್ರೀ ತೀರ್ಥರಾಮೇಶ್ವರ ಪುಣ್ಯಕ್ಷೇತ್ರದಲ್ಲಿ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ.
ಮೂರೂ ದಿನಗಳ ಕಾಲ ಪ್ರತಿ ದಿನ ಸಂಜೆ 6ರಿಂದ ರಾತ್ರಿ 10ರವರೆಗೆ ಬೆಳಗುತ್ತಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಧರ್ಮಸಭೆ ನಡೆಯಲಿದೆ.
ಹಿರೇಕಲ್ಮಠದ ಹಿಂದಿನ ಶ್ರೀಗಳಾದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನಾಡಿನ ವಿವಿಧೆಡೆ ಲೋಕ ಕಲ್ಯಾಣಾರ್ಥವಾಗಿ ಮೌನ ಇಷ್ಟಲಿಂಗ ಪೂಜಾ ಅನುಷ್ಠಾನ ಕಾರ್ಯಕ್ರಮ ನಡೆಸುತ್ತಿದ್ದರು. ಹೂವಿನ ಹಡಗಲಿ ತಾಲೂಕಿನ ಸೋವೇನಹಳ್ಳಿ, ಶಿಕಾರಿಪುರ ತಾಲೂಕಿನ ಗೊಗ್ಗ, ನ್ಯಾಮತಿ ತಾಲೂಕಿನ ಚೀಲೂರು, ತೀರ್ಥರಾಮೇಶ್ವರ, ಚಿನ್ನಿಕಟ್ಟೆ, ಸೋಗಿಲು, ಹೊನ್ನಾಳಿ ತಾಲೂಕಿನ ಮಲ್ಲೇದೇವರಕಟ್ಟೆ(ಅರಬಗಟ್ಟೆ), ಹನಗವಾಡಿ ಹಾಗೂ ಹಿರೇಮಠ ಗ್ರಾಮಗಳಲ್ಲಿ ಈ ಕಾರ್ಯಕ್ರಮ ನಡೆಸಲಾಗಿದೆ. ಅವರ ಮಾರ್ಗದರ್ಶನದಲ್ಲಿ ಇದೀಗ, ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಬೆಳಗುತ್ತಿ ಸಮೀಪದ ಶ್ರೀ ತೀರ್ಥರಾಮೇಶ್ವರ ಪುಣ್ಯಕ್ಷೇತ್ರದಲ್ಲಿ ಮೌನ ಇಷ್ಟಲಿಂಗ ಪೂಜಾ ಅನುಷ್ಠಾನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರುಕೃಪೆಗೆ ಪಾತ್ರರಾಗಬೇಕು ಎಂದು ಸಮಸ್ತ ಬೆಳಗುತ್ತಿ ಗ್ರಾಮಸ್ಥರು ವಿನಂತಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
