ಬೆಂಗಳೂರು:

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಮರಳೇನಹಳ್ಳಿ ನಿವಾಸಿ,ಸಾವಯವ ಕೃಷಿಕ, ನಾಡೋಜ ಎಲ್ ನಾರಾಯಣ ರೆಡ್ಡಿ(80) ಅವರು ನಿಧನರಾಗಿದ್ದಾರೆ.
6 ತಿಂಗಳಿನಿಂದ ಕಫ ಮತ್ತು ಕೆಮ್ಮು ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಸೋಮವಾರ ಬೆಂಗಳೂರಿನ ತಜ್ಞ ವೈದ್ಯರಿಗೆ ತೋರಿಸಲು ನಿರ್ಧರಿಸಿದ್ದರು. ಆದರೆ ಭಾನುವಾರ ರಾತ್ರಿ ಮಲಗಿದ ಅವರು ಮೇಲೆ ಏಲಲೇ ಇಲ್ಲ ಎಂದು ಕುಟುಂಬವರ್ಗ ತಿಳಿಸಿದೆ.
ಕೃಷಿ ಕ್ಷೇತ್ರದ ಸಾಧನೆಗಾಗಿ ಹಂಪಿ ಕನ್ನಡ ವಿವಿಯಿಂದ ನಾಡೋಜ ಪ್ರಶಸ್ತಿ ಪುರಸ್ಕೃತರಾಗಿದ್ದ ನಾರಾಯಣರೆಡ್ಡಿ ಅವರು ಸಾವಯವ ಮತ್ತು ಶೂನ್ಯ ಕೃಷಿ ಕುರಿತು ಪ್ರತಿಪಾದಿಸುತ್ತಿದ್ದ ವಿಚಾರಗಳಿಗೆ ಜಾಗತಿಕ ಮನ್ನಣೆ ಇತ್ತು.
ಸಾವಯವ ಕೃಷಿಗೆ ಸಂಬಂಧಿಸಿದಂತೆ ಅಪಾರ ಜ್ಞಾನವನ್ನು ಹೊಂದಿದ್ದ ನಾರಾಯಣ ರೆಡ್ಡಿ ಅವರು ಜಪಾನ್ನ ವಿಶ್ವವಿಖ್ಯಾತ ರೈತ ಫುಕುವೋಕಾ ಅವರ ವಿಚಾರಗಳಿಂದ ಪ್ರೇರಿತರಾಗಿ, ರಾಸಾಯನಿಕ ರಹಿತವಾಗಿ ಸಂಪೂರ್ಣವಾಗಿ ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡು ಅದರಲ್ಲಿ ಯಶಸ್ಸು ಕಂಡಿದ್ದರು.
ಜಪಾನಿನ ಮಸನವೋ ಫುಕುವೋಕಾ ಅವರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಯಶಸ್ವಿಯಾಗಿದ್ದ ನಾರಾಯಣ ರೆಡ್ಡಿ ಅವರು ನಾಡಿನ ರೈತರಿಗೆ ಮಾರ್ಗದರ್ಶಿಯಾಗಿದ್ದರು.
ಬದುಕಿನುದ್ದಕ್ಕೂ ಸಾವಯವ ಕೃಷಿಯಲ್ಲಿ ತೊಡಗಿಕೊಂಡು, ನಿಸರ್ಗಕ್ಕೆ ಹತ್ತಿರವಾಗಿ ಬದುಕುವ ಪಾಠ ಹೇಳಿಕೊಟ್ಟ ನಾರಾಯಣ ರೆಡ್ಡಿ ಇನ್ನು ನೆನಪು ಮಾತ್ರ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








