ಮಧುಗಿರಿ
ಬಡವರಿಗೆ ಸರ್ಕಾರದಿಂದ ಮಂಜೂರಾದ ಮನೆ ನಿರ್ಮಿಸಲು ಮರಳು ನೀಡುತ್ತಿಲ್ಲ ಎಂದು, ರಸ್ತೆಗೆ ಅಡ್ಡಲಾಗಿ ಮಣ್ಣು ಸುರಿದು ಪ್ರತಿಭಟಿಸಿದ್ದನ್ನು ಸ್ಥಳೀಯ ಜೆಡಿಎಸ್ ಮುಖಂಡರೊಬ್ಬರು ಮರಳು ದಂಧೆಗೆ ಅವಕಾಶ ನೀಡದಿದ್ದರಿಂದ ರಸ್ತೆಗೆ ಮಣ್ಣು ಸುರಿದಿದ್ದಾರೆಂದು ಸುಳ್ಳು ಸುದ್ದಿ ಹಬ್ಬಿಸಿರುವುದು ನಾಚಿಕೆಗೇಡಿನ ಸಂಗತಿಯೆಂದು ಚಿಕ್ಕಮಾಲೂರು ಗ್ರಾಮಸ್ಥರು ಆಪಾದಿಸಿದ್ದಾರೆ.
ಕಳೆದ ಆರೇಳು ತಿಂಗಳಿನಿಂದ ಮನೆ ನಿರ್ಮಿಸಲು ಮರಳನ್ನು ನೀಡದೆ ನದಿ ಅಕ್ಕ-ಪಕ್ಕದ ಗ್ರಾಮಗಳಾದ ವೀರಾಪುರ, ವೀರನಾಗೇನಹಳ್ಳಿ, ಕಾಳೇನಹಳ್ಳಿ ಗ್ರಾಮಸ್ಥರು ತಮ್ಮ ತಮ್ಮ ಗ್ರಾಮಗಳಲ್ಲಿ ಮಂಜೂರಾದ ಮನೆಗಳ ಜೊತೆಗೆ ತಮ್ಮ ಕೆಲಸಗಳಿಗೆ ಮರಳನ್ನು ಉಪಯೋಗಿಸುತ್ತಿದ್ದಾರೆ. ಆದರೆ ಮರಳನ್ನು ಲಾರಿಗೆ ತುಂಬಿ ಹೊರ ಸ್ಥಳಗಳಿಗೆ ಹಾಗೂ ಎಲ್ಲಿಯೂ ಮಾರಾಟ ಮಾಡುತ್ತಿಲ್ಲ. ಆದರೆ ನಮ್ಮ ಗ್ರಾಮದ ಬಡವರ ಮನೆಗಳ ನಿರ್ಮಾಣಕ್ಕೆ ಮರಳನ್ನು ತರಲು ಹೋದರೆ ಪದೆ ಪದೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ.
ಈ ಬಗ್ಗೆ ಹಲವು ಬಾರಿ ಪಂಚಾಯಿತಿ ನಡೆಸಿ ಮನವೊಲಿಸಿದ್ದರೂ, ಕೆಲವು ಕಿಡಿಗೇಡಿಗಳು ನದಿಗೆ ಹೋಗದಂತೆ ಜೆ.ಸಿ.ಬಿ ಯಿಂದ ಟ್ರಂಚ್ ತೆಗೆದು ತಡೆಯೊಡ್ಡುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ತಿಳಿ ಹೇಳಿದ್ದರೂ ಅದಕ್ಕೆ ಸ್ಪಂದಿಸದೆ ಬಡವರಿಗೆ ವಿನಾ ಕಾರಣ ತೊಂದರೆ ಕೊಡುತ್ತಿದ್ದಾರೆ. ಇದರಿಂದ ಬೇಸತ್ತು ಕಳೆದ ಭಾನುವಾರ ರಸ್ತೆಗೆ ಅಡ್ಡಲಾಗಿ ಮಣ್ಣು ಸುರಿದು ಪ್ರತಿಭಟಿಸಬೇಕಾಯಿತು. ಆದರೆ ಇದನ್ನೆ ಸ್ಥಳೀಯ ಜೆಡಿಎಸ್ ಮುಖಂಡ ರಾಜಕುಮಾರ್ ಎಂಬಾತ ಮರಳು ದಂಧೆಗೆ ಅವಕಾಶ ನೀಡದ್ದರಿಂದ ಪ್ರತಿಭಟಿಸಿದ್ದಾರೆಂದು ಉದ್ದೇಶ ಪೂರ್ವಕವಾಗಿ ಸುದ್ದಿ ಹಬ್ಬಿಸಿದ್ದಾರೆ. ನಾವುಗಳು ಮರಳು ದಂಧೆ ನಡೆಸಿರುವುದನ್ನು ಆತ ಸಾಬೀತುಪಡಿಸಿದರೆ ನಾವುಗಳು ಯಾವುದೇ ಶಿಕ್ಷೆ ವಿಧಿಸಿದರೂ ಸಿದ್ದರಿದ್ದೇವೆ. ತಪ್ಪಿದ್ದಲ್ಲಿ ವೃಥಾ ಆರೋಪ ಮಾಡಿರುವ ಆತ ಸಾರ್ವಜನಿಕವಾಗಿ ಕ್ಷಮೆ ಕೋರಬೇಕೆಂದು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
