ದಾವಣಗೆರೆ:
ಪಶ್ಚಿಮಘಟ್ಟದ ಪರಿಸರಕ್ಕೆ ಹಾನಿ ಮಾಡುವ ಅಭಿವೃದ್ಧಿ ಯೋಜನೆಗಳನ್ನು ತಕ್ಷಣವೇ ಕೈಬಿಡಬೇಕೆಂದು ಕರುಣಾ ಜೀವ ಕಲ್ಯಾಣ ಟ್ರಸ್ಟ್ನ ಅಧ್ಯಕ್ಷ ಶಿವನಕೆರೆ ಬಸವಲಿಂಗಪ್ಪ ಆಗ್ರಹಿಸಿದರು.
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ವರದಿಗಳ ಪ್ರಕಾರ ರಾಜ್ಯದ ವಿವಿಧ ಭಾಗಗಳಲ್ಲಿ ಕೈಗೊಳ್ಳುತ್ತಿರುವ ಅಭಿವೃದ್ಧಿ ಯೋಜನೆಗಳಿಂದಾಗಿ ಸುಮಾರು 15 ಲಕ್ಷಕ್ಕೂ ಹೆಚ್ಚು ಮರಗಳಿಗೆ ಕೊಡಲಿ ಪೆಟ್ಟು ಬೀಳುವ ಸಾಧ್ಯತೆ ಇದೆ ಎಂಬುದಾಗಿ ಅಂದಾಜಿಸಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಒಟ್ಟು 35 ಬೃಹತ್ ಯೋಜನೆಗಳ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಸಾವಿರಾರು ಮರಗಳ ಹನನವಾಗಿದೆ. ಅದರಲ್ಲೂ ಪಶ್ಚಿಮ ಘಟ್ಟವು ಸೂಕ್ಷ್ಮ ಜೀವ ಪ್ರದೇಶವಾಗಿದ್ದು, ಅದಕ್ಕೆ ಧಕ್ಕೆಯಾದಲ್ಲಿ ಪರಿಸರಕ್ಕೆ ತುಂಬಲಾರದ ನಷ್ಟ ಉಂಟಾಗಲಿದೆ. ಹೀಗಾಗಿ ಪರಿಸರಕ್ಕೆ ಮಾರಕವಾದ ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ತಕ್ಷಣವೇ ಕೈಬಿಡಬೇಕೆಂದು ಒತ್ತಾಯಿಸಿದರು.
ಬೆಂಗಳೂರು-ಮಂಗಳೂರು ಕೈಗಾರಿಕಾ ಕಾರಿಡಾರ್ಗಾಗಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಸುಮಾರು 50 ಸಾವಿರ ಮರಗಳನ್ನು ಕಡಿಯಲಾಗಿದೆ. ಆಗುಂಬೆ-ತೀರ್ಥಹಳ್ಳಿ ಮಾರ್ಗವನ್ನು ಚತುಷ್ಪಥವಾಗಿಸುವ ಕಾಮಗಾರಿ ಸಾಗಿದ್ದು, ಇದರಿಂದ ಸೋಮೇಶ್ವರ ಅಭಯಾರಣ್ಯ ಪ್ರದೇಶಕ್ಕೆ ಧಕ್ಕೆಯಾಗಲಿದೆ. ಮಡಿಕೇರಿಯಲ್ಲಿಯೂ ಬೇಕಾಬಿಟ್ಟಿ ಗುಡ್ಡ ಅಗೆದ ಕಾರಣ ಭಾರೀ ಪ್ರಮಾಣದ ಭೂಕುಸಿತ ನೋಡಬೇಕಾಯಿತು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕನಿಷ್ಟ ಶೇ.18ರಷ್ಟು ಅರಣ್ಯವಿರುವಂತೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು. ನಗರ, ಪಟ್ಟಣ ಪ್ರದೇಶಗಳಲ್ಲಿ ಪ್ರತಿ ಮನೆಗೆ 2 ಗಿಡ ಬೆಳೆಸುವಂತೆ ಸ್ಥಳೀಯ ಸಂಸ್ಥೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಕರುನಾಡ ಕನ್ನಡ ಸೇನೆಯ ಕೆ.ಟಿ.ಗೋಪಾಲಗೌಡ್ರು, ಕರುಣಾ ಜೀವ ಕಲ್ಯಾಣ ಟ್ರಸ್ಟಿನ ವೀಣಾ ಕುಮಾರ್, ಶಶಿಕಲಾ, ಲಿಂಗರಾಜ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
