ಲೋಕಸಭೆ ಚುನಾವಣೆಗೆ ಸ್ಪರ್ದೆ:ಮಾನಪ್ಪ ವಜ್ಜಲ್

ಚಿತ್ರದುರ್ಗ:

      ಎರಡು ಬಾರಿ ಶಾಸಕನಾಗಿ ಜನಸೇವೆ ಮಾಡಿರುವ ರಾಜಕೀಯ ಅನುಭವವಿರುವುದರಿಂದ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿರುವುದಾಗಿ ಲಿಂಗಸೂರು ಮಾಜಿ ಶಾಸಕ ಮಾನಪ್ಪ ವಜ್ಜಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

      ಮೊಳಕಾಲ್ಮುರು ತಾಲೂಕು ರಾಂಪುರದ ವೀರಭದ್ರಸ್ವಾಮಿ, ಈಶ್ವರಸ್ವಾಮಿ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದ ನಂತರ ಶಿವಾಜಿ ಮಹಾರಾಜರ 392 ನೇ ಜಯಂತಿ ಪ್ರಯುಕ್ತ ನಗರದ ಕೆಳಗೋಟೆಯಲ್ಲಿರುವ ಅಂಭ ಭವಾನಿ ದೇವಸ್ಥಾನ ಹಾಗೂ ಚಿತ್ರದುರ್ಗ ಕಬೀರಾನಂದಾಶ್ರಮಕ್ಕೆ ಭೇಟಿ ಕೊಟ್ಟ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾನಪ್ಪ ಡಿ. ವಜ್ಜಲ್ ಚಿತ್ರದುರ್ಗ ಲೋಕಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿರುವುದರಿಂದ ಕಳೆದ ಐದಾರು ತಿಂಗಳಿನಿಂದ ಈ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದೇನೆ. ಎಲ್ಲೆಡೆ ಮತದಾರರ ಉತ್ತಮ ಒಲವು ಕಂಡು ಬರುತ್ತಿದೆ.

       ಭೋವಿ ಜನಾಂಗದ ಒಂದುವರೆ ಲಕ್ಷ ಮತಗಳಿವೆ. ಜೊತೆಗೆ ಬೇರೆ ಜಾತಿಯವರು ನನಗೆ ಮತಗಳನ್ನು ನೀಡಿ ಆಶೀರ್ವದಿಸಲಿದ್ದಾರೆಂಬ ನಂಬಿಕೆಯಿದೆ. ರಾಜ್ಯ ಹಾಗೂ ಜಿಲ್ಲಾ ನಾಯಕರುಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಪ್ರತಿ ಕಾರ್ಯಕರ್ತನ ಸಂಪರ್ಕದಲ್ಲಿರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಟಿಕೇಟ್ ನೀಡಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆಂದು ಭರವಸೆ ನೀಡಿದರು.

        ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ.ಯಿಂದ ಹದಿನೆಂಟು ಮಂದಿ ಆಕಾಂಕ್ಷಿಗಳಿದ್ದಾರೆ. ನಾನೂ ಕೂಡ ಒಬ್ಬ ಸ್ಪರ್ಧಾಕಾಂಕ್ಷಿಯಾಗಿದ್ದೇನೆ. ಮಧ್ಯಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆ ಬರಪೀಡಿತ ಪ್ರದೇಶವಾಗಿರುವುದರಿಂದ ಕುಡಿಯುವ ನೀರು, ನೀರಾವರಿ, ಶಿಕ್ಷಣ ಹಾಗೂ ಮೂಲಭೂತ ಸೌಲಭ್ಯಕ್ಕೆ ಒತ್ತು ನೀಡುತ್ತೇನೆ. ಬಿಜೆಪಿ. ವರಿಷ್ಟರು ಚುನಾವಣೆಯಲ್ಲಿ ನನಗೆ ಟಿಕೇಟ್ ನೀಡುತ್ತಾರೆಂಬ ಭರವಸೆಯಿದೆ ಎಂದು ಹೇಳಿದರು.ಮರಾಠ ಸಮಾಜದ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ಗೋಪಾಲರಾವ್ ಜಾದವ್, ಮಹಿಳಾ ಘಟಕದ ಅಧ್ಯಕ್ಷೆ ಉಷಬಾಯಿ ಜಾದವ್, ಹರೀಶ್, ಮಂಜುನಾಥ್, ಗೋಪಾಲ್, ನಾಗರಾಜ್‍ಬೇದ್ರೆ, ದಗ್ಗೆಶಿವಪ್ರಕಾಶ್ ಈ ಸಂದರ್ಭದಲ್ಲಿ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link