ನಾಲ್ಕು ಹೊಸ ಇಎಸ್‍ಐ ಆಸ್ಪತ್ರೆ ನಿರ್ಮಾಣ

ದಾವಣಗೆರೆ:

      ರಾಜ್ಯದಲ್ಲಿ ಹೊಸದಾಗಿ ನಾಲ್ಕು ಇಎಸ್‍ಐ ಆಸ್ಪತ್ರೆ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ತಿಳಿಸಿದರು.ನಗರದ ಇಎಸ್‍ಐ ಆಸ್ಪತ್ರೆಯ ಆವರಣದಲ್ಲಿ ಬುಧವಾರ ಪ್ರಸ್ತುತ ಇರುವ 50 ಹಾಸಿಗೆಯಿಂದ 100 ಹಾಸಿಗೆಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆರಿರುವ ಇಎಸ್‍ಐ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದ ಬಳ್ಳಾರಿ, ಕೋಲಾರ ಹಾಗೂ ರಾಮನಗರ ಸೇರಿದಂತೆ ರಾಜ್ಯದ ನಾಲ್ಕು ಕಡೆಗಳಲ್ಲಿ ಹೊಸ ಇಎಸ್‍ಐ ಆಸ್ಪತ್ರೆ ನಿರ್ಮಾಣ ಮಾಡಲುದ್ದೇಶಿಸಲಾಗಿದೆ ಎಂದು ಹೇಳಿದರು.

20 ಲಕ್ಷ ಕಾರ್ಮಿಕರ ನೋಂದಣಿ:

      ಕಾರ್ಮಿಕ ಇಲಾಖೆಯಲ್ಲಿ ಒಂದು ವರ್ಷದ ಹಿಂದೆ ರಾಜ್ಯಾದ್ಯಂತ 13 ಲಕ್ಷ ಕಾರ್ಮಿಕರು ನೋಂದಣಿ ಮಾಡಿಸಿದ್ದರು. ಆದರೆ, ನಾವು ಅಧಿಕಾರಕ್ಕೆ ಬಂದ ಮೇಲೆ ಏಳು ಲಕ್ಷ ಕಾರ್ಮಿಕರು ಹೊಸದಾಗಿ ನೋಂದಣಿಯಾಗಿದ್ದು, ಪ್ರಸ್ತುತ ಕಾರ್ಮಿಕ ಇಲಾಖೆಯಲ್ಲಿ 20 ಲಕ್ಷ ಕಾರ್ಮಿಕರು ನೋಂದಣಿಯಾಗಿದ್ದಾರೆಂದು ಹೇಳಿದರು.

ಒಂದೇ ವರ್ಷಕ್ಕೆ ಸೌಲಭ್ಯ:

      ಕಾರ್ಮಿಕ ಇಲಾಖೆಗೆ ಕಾರ್ಮಿಕರು ನೋಂದಾಯಿಸಿಕೊಂಡು ಮೂರು ವರ್ಷಗಳ ನಂತರ ಇಎಸ್‍ಐ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯ ಪಡೆಯಬೇಕೆಂಬ ನಿಯಮವಿತ್ತು. ಹೀಗಾಗಿ ಕಾರ್ಮಿಕರಿಗೆ ಸಾಕಷ್ಟು ತೊಂದರೆಯಾಗುತಿತ್ತು. ಆದ್ದರಿಂದ ನಿಯಮವನ್ನು ಸಡಿಲಗೊಳಿಸಿ, ನೋಂದಾಯಿಸಿದ ಒಂದೇ ವರ್ಷದಲ್ಲಿ ಸರ್ಕಾರದ ಸೌಲಭ್ಯ ಪಡೆಯುವಂತೆ ಕಾನೂನು ಜಾರಿಗೆ ತರಲಾಗಿದೆ ಎಂದರು.

ಮಕ್ಕಳಿಗೆ ಶಿಷ್ಯ ವೇತನ:

       ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ 1ನೇ ತರಗತಿಯಿಂದ ಪಿಹೆಚ್‍ಡಿಯ ವರೆಗೂ ಶಿಷ್ಯ ವೇತನ ನೀಡಲಾಗುತ್ತಿದೆ. ಕಾರ್ಮಿಕರಿಗೆ ಅಪಘಾತವಾದಲ್ಲಿ 1ರಿಂದ 2 ಲಕ್ಷ ರೂ. ವರೆಗೆ ಪರಿಹಾರ ನೀಡಲಾಗುತ್ತಿದೆ. ಅಕಸ್ಮಾತ್ ಮೃತಪಟ್ಟರೆ ಕಾರ್ಮಿಕರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ವಿತರಿಸಲಾಗುತ್ತಿದೆ ಎಂದು ಹೇಳಿದರು.

ಕಾರ್ಮಿಕರ ತಂಗುದಾಣ:

       ಕಟ್ಟಡ ಕಾರ್ಮಿಕರು ನಿವೇಶನ ಹೊಂದಿದ್ದರೆ, ಅವರಿಗೆ ಮನೆ ಕಟ್ಟಿಸಿಕೊಳ್ಳಲು 5 ಲಕ್ಷ ರೂ. ಸಹಾಯಧನವನ್ನು ಸರ್ಕಾರ ನೀಡುತ್ತಿದೆ. ಅಲ್ಲದೆ, ಹೊರ ರಾಜ್ಯಗಳಿಂದ ಬಂದು ಇಲ್ಲಿ ಕಾರ್ಮಿಕರಾಗಿ ದುಡಿದು, ಸ್ಲಂ, ಬೀದಿ ಬದಿಗಳಲ್ಲಿ ಮಲಗುತ್ತಿರುವ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಪೀಣ್ಯದ ಬಾಗಲಕುಂಟೆಯಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಕಾರ್ಮಿಕರ ತಂಗುದಾಣ ನಿರ್ಮಿಸಲುದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಗೊಂದು ಕಾರ್ಮಿಕರ ಭವನ:

      ಕಾರ್ಮಿಕರು ಮತ್ತು ಅವರ ಮಕ್ಕಳ ಮದುವೆ, ನಾಮಕರಣ ಸೇರಿದಂತೆ ಇತರೆ ಶುಭ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವಂತೆ ಬೆಂಗಳೂರಿನಲ್ಲಿ ಕಾರ್ಮಿಕರ ಭವನ ನಿರ್ಮಾಣ ಮಾಡಲಾಗುತ್ತಿದ್ದು, ಇದನ್ನು ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲು ಚಿಂತನೆ ನಡೆಸಲಾಗಿದೆ. ಅಲ್ಲದೆ, ಹಳ್ಳಿಗಾಡಿನ ಕಾರ್ಮಿಕರು ಸೌಲಭ್ಯ ಪಡೆಯಲು ಜಿಲ್ಲಾ ಕೇಂದ್ರಗಳಿಗೆ ಬಂದು ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಪ್ರತಿ ತಾಲೂಕು ಕೇಂದ್ರಗಳಿಗೂ ಕಾರ್ಮಿಕ ಇಲಾಖೆಯಿಂದ ಅಧಿಕಾರಿಯನ್ನು ನೇಮಿಸಿ, ಕಚೇರಿ ಸ್ಥಾಪಿಸಿ ಸೌಲಭ್ಯ ಕಲ್ಪಿಸಲಾಗುವುದು ಎಂದರು.

     ಈ ಆಸ್ಪತ್ರೆಯು 50 ಹಾಸಿಗೆಯಿಂದ 100 ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಲು ಸಂಸದ ಜಿ.ಎಂ.ಸಿದ್ದೇಶ್ವರ ಅವರ ಶ್ರಮ ಸಾಕಷ್ಟಿದ್ದು, ಎರಡೇ ತಿಂಗಳಲ್ಲಿ ನೂರು ಹಾಸಿಗೆಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಿರುವ ಕೀರ್ತಿ ಅವರಿಗೆ ಸಲ್ಲುತ್ತದೆ. ಆದರೆ, ಇದು ಶಂಕುಸ್ಥಾಪನೆಗೆ ನಿಲ್ಲಬಾರದು ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಅಗತ್ಯ ಅನುದಾನ ಬಿಡುಗಡೆ ಮಾಡಿಸಿ, ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಸಲಹೆ ನೀಡಿದರು.

ಆಧುನಿಕ ಸೌಲಭ್ಯ:

     ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಕೇಂದ್ರ ಕಾರ್ಮಿಕ ಸಚಿವ ಸಂತೋಷಕುಮಾರ್ ಗಂಗ್ವಾರ್ ಅವರನ್ನು ಹಲವು ಬಾರಿ ಭೇಟಿ ಮಾಡಿ, ನಿರಂತರವಾಗಿ ಪ್ರಯತ್ನಿಸಿದ ಪರಿಣಾಮ ದಾವಣಗೆರೆ ಇಎಸ್‍ಐ ಆಸ್ಪತ್ರೆಯನ್ನು 100 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸುವುದು ಸಾಧ್ಯವಾಗಿದೆ. 25-30 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆಯನ್ನು ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಶೀಘ್ರವೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಆಸ್ಪತ್ರೆಗೆ ಅತ್ಯಾಧುನಿಕ ಕಟ್ಟಡ, ಲೇಸರ್ ಆಪರೇಷನ್ ಸೇರಿದಂತೆ ಆಧುನಿಕ ಚಿಕಿತ್ಸಾ ಸೌಲಭ್ಯಗಳೂ ಸಿಗಲಿವೆ ಎಂದರು.

        ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಊರುಗಳಲ್ಲಿ ಕೆಲಸ ಮಾಡುತ್ತಿರುವ ವಿಮಾದಾರ ಕಾರ್ಮಿಕರು ಇಲ್ಲಿರುವ ತಂದೆ-ತಾಯಿಗಳ ಹೆಸರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ನೋಂದಾಯಿಸಿದರೆ ಮಾತ್ರ ಸೌಲಭ್ಯ ಪಡೆಯಬಹುದು. ಆದ್ದರಿಂದ ನೋಂದಾಯಿಸಿ ಸೌಲಭ್ಯ ಪಡೆಯಲು ಎಲ್ಲರೂ ಮುಂದಾಗಬೇಕೆಂದ ಅವರು, ದಾವಣಗೆರೆ ಇಎಸ್‍ಐ ಆಸ್ಪತ್ರೆ ಸಿಬ್ಬಂದಿಗೆ ವಸತಿ ಕಲ್ಪಿಸುವಂತೆ ಬೇಡಿಕೆ ಇದ್ದು, ರಾಜ್ಯ ಸರ್ಕಾರ ಕೂಡಲೇ ಅದನ್ನು ಮಂಜೂರು ಮಾಡಬೇಕು. ಸಿಬ್ಬಂದಿ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಅಗತ್ಯ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು. ಸಿಬ್ಬಂದಿಗಳು ಸಹ ಯಾವುದೇ ದೂರು ಬಾರದ ರೀತಿಯಲ್ಲಿ ಕೆಲಸ ಮಾಡಬೇಕು. ವೈದ್ಯರು ದೇವರೆಂಬ ಜನರ ನಂಬಿಕೆ ಉಳಿಸಿಕೊಂಡು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುವ ಮೂಲಕ ಆಸ್ಪತ್ರೆಗೆ ಒಳ್ಳೆಯ ಹೆಸರು ತರಬೇಕು ಎಂದು ಅವರು ಸೂಚಿಸಿದರು.

         ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಶ್ರಮೇವ್ ಜಯತೆ ಯೋಜನೆಯಡಿ ಕಾರ್ಮಿಕರ ಕನಿಷ್ಟ ವೇತನವನ್ನು 10 ಸಾವಿರದಿಂದ 20 ಸಾವಿರಕ್ಕೆ ಏರಿಸಿದೆ. ಬೋನಸ್ ಮೊತ್ತವನ್ನು 3ರಿಂದ 7 ಸಾವಿರಕ್ಕೆ ಹೆಚ್ಚಿಸಿದೆ. ಇಎಸ್‍ಐಗೆ ಒಳಪಡುವ ವೇತನ ಮಿತಿಯನ್ನು 15 ಸಾವಿರದಿಂದ 25 ಸಾವಿರಕ್ಕೆ ಏರಿಸಿದೆ. 55 ಲಕ್ಷ ಕಾರ್ಮಿಕರಿಗೆ ಇಪಿಎಫ್ ಸೌಲಭ್ಯವನ್ನು ಶೇ.42ರಷ್ಟು ಏರಿಕೆ ಮಾಡಿದೆ. ಗ್ರಾಚ್ಯುಟಿ ಮಿತಿಯನ್ನು 10-20 ಲಕ್ಷಕ್ಕೆ ಹೆಚ್ಚಿಸಿದೆ ಎಂದು ಹೇಳಿದರು.

        ಶಾಸಕ ಎಸ್.ಎ.ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಸಕ ಎಸ್.ವಿ.ರಾಮಚಂದ್ರಪ್ಪ, ಎಐಟಿಯುಸಿ ಮುಖಂಡ ಹೆಚ್.ಕೆ.ರಾಮಚಂದ್ರಪ್ಪ, ಉದ್ಯಮಿ ಬಿ.ಸಿ.ಉಮಾಪತಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಬಿಜೆಪಿ ಮುಖಂಡ ಕೊಂಡಜ್ಜಿ ಜಯಪ್ರಕಾಶ್, ಎಐಟಿಯುಸಿ ಮುಖಂಡ ಆವರಗೆರೆ ಚಂದ್ರು, ರಾಜ್ಯ ಕಾರ್ಮಿಕ ವಿಮಾ ನಿಗಮದ ಪ್ರಭಾರ ಪ್ರಾದೇಶಿಕ ನಿರ್ದೇಶಕ ಟಿ.ರೇಣುಕಾ ಪ್ರಸಾದ್, ನಿರ್ದೇಶಕ ಡಾ.ಡಿ.ಎಸ್.ಕುಮಾರ್, ಉಪ ನಿರ್ದೇಶಕ ಗುರುವಿಂದರ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link