ಹರಪನಹಳ್ಳಿ:
ಶಿವಮೊಗ್ಗ. ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡ ಹಾಲು ಒಕ್ಕೂಟದ ಬದಲಾಗಿ ದಾವಣಗೆರೆ ಹಾಗೂ ಚಿತ್ರದುರ್ಗ ಎರಡು ಜಿಲ್ಲೆ ಸೇರಿ ಒಂದು ಹೊಸ ಹಾಲು ಒಕ್ಕೂಟ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.
ತಾಲ್ಲೂಕಿನ ಕೇಸರಹಳ್ಳಿ ಗ್ರಾಮದಲ್ಲಿ ಭಾನುವಾರ ಹಾಲು ಉತ್ಪಾದಕರ ಸಹಾಕರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಮುಂಬರುವ ದಿನಗಳಲ್ಲಿ ಪ್ರತ್ಯೇಕವಾದ ದಾವಣಗೆರೆ-ಚಿತ್ರದುರ್ಗ ಹಾಲು ಒಕ್ಕೂಟ ಆರಂಭಿಸಿ ಕಲ್ಪನಹಳ್ಳಿ ಹಾಗೂ ದೊಡ್ಡಬಾತಿ ಬಳಿ ಹಾಲು ಸಂಸ್ಕರಣ ಘಟಕ ಸ್ಥಾಪಿಸಲಾಗುವುದು. ಇದರಿಂದ ಕ್ಷೀರ ಉತ್ಪಾದನೆಗೆ ಹೆಚ್ಚು ಒತ್ತು ನೀಡಲಾಗುವುದು’ ಎಂದರು.ತಾಲ್ಲೂಕಿನ ಅನಂತನಹಳ್ಳಿ ಬಳಿಯಿರುವ 100 ಎಕರೆ ಸರ್ಕಾರಿ ಜಮೀನಿನಲ್ಲಿ ಇಂಡಿಯನ್ ರಿಜರ್ವ್ ಬೆಟಾಲಿಯನ್ ಪೊಲೀಸ್ ತರಬೇತಿ ಕೇಂದ್ರಕ್ಕೆ ಸ್ಥಳ ಗುರುತಿಸಲಾಗಿತ್ತು. ಈ ಬಗ್ಗೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಶೀಘ್ರದಲ್ಲೇ ತರಬೇತಿ ಕೇಂದ್ರ ಕಾರ್ಯಾರಂಭಗೊಳ್ಳಲಿದೆ. ಮರಿಯಮ್ಮನಹಳ್ಳಿಯಿಂದ ಶಿವಮೊಗ್ಗದವರಿಗೆ ಇರುವ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಗುರುತಿಸಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.
`ಮೆಕ್ಕೆಜೋಳದಿಂದ 2ಜಿ ಎಥಿನಾಲ್ ತಯಾರಿಕೆ ಘಟಕಕ್ಕೆ ಹರಿಹರ ಬಳಿ 52 ಎಕರೆ ಜಮೀನು ಮೀಸಲಿಡಲಾಗಿದೆ. ಈ ಕೆಲಸವೂ ಕೂಡ ಶೀಘ್ರದಲ್ಲೆ ಪ್ರಾರಂವಾಗುತ್ತದೆ. ಚನ್ನಗಿರಿ ತಾಲ್ಲೂಕಿನಲ್ಲಿ ಪ್ರವಾಸೋದ್ಯಮಕ್ಕೆ 52 ಕೋಟಿ ನೀಡಲಾಗಿದೆ. ಹೀಗೆ ಜಿಲ್ಲೆ ಎಲ್ಲ ತಾಲ್ಲೂಕುಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದೇನೆ’ ಎಂದು ಹೇಳಿದರು.ಜಿಲ್ಲಾ ಪಂಚಾಯಿತಿ ಸದಸ್ಯ ಮಂಜುನಾಥ ಉತ್ತಂಗಿ ಮಾತನಾಡಿ, `ಜಿಲ್ಲೆಯ ಸಣ್ಣ ಸಣ್ಣ ಹಳ್ಳಿಗಲಿಗೂ ಅನುದಾನ ನೀಡುವ ಮೂಲಕ ಅಭಿವೃದ್ಧಿ ಹರಿಕಾರ ಎನಿಸಿದ್ದಾರೆ. ಕೇಸರಹಳ್ಳಿ ಹಾಲು ಉತ್ಪಾದಕರ ಕಟ್ಟಡ ನಿರ್ಮಾಣಕ್ಕೆ 4 ಕೋಟಿ ಅನುದಾನ ನೀಡಿ ಕ್ಷೀರ ಉತ್ಪಾದನೆಗೆ ಪ್ರೋತ್ಸಾಹ ನೀಡಿದ್ದಾರೆ’ ಎಂದರು.
ಮುಖಂಡ ಮಹಾಬಳೇಶ್ವರಗೌಡ, `ಹಾಲು ಉತ್ಪಾದಕ ಸಂಘ ಬಿಟ್ಟರೆ ಬೇರೆ ಸಂಘಗಳು ನಷ್ಟದಲ್ಲಿವೆ. ಸಾಲ ನೀಡುವ ಪದ್ಧತಿ ಇಲ್ಲದಿರುವುದರಿಂದ ಇಲ್ಲಿ ನಷ್ಟದ ಭೀತಿ ಇಲ್ಲ. ಅಧಿಕಾರಿಗಳನ್ನು ಹಿಡಿತದಲ್ಲಿದ್ದರೆ ಸಂಘಗಳು ದಿವಾಳಿ ಆಗುವುದಿಲ್ಲ. ಹೈನುಗಾರಿಕೆ ರೈತರಿಗೆ ಲಾಭದಾಯಕ ಉದ್ಯಮವಾಗಿದೆ’ ಎಂದರು.ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಕೆ.ಲಕ್ಷ್ಮಣ, ಉಪಾಧ್ಯಕ್ಷ ಕಣವಿಹಳ್ಳಿ ಮಂಜುನಾಥ, ಹಾಲು ಒಕ್ಕೂಟದ ಅಧ್ಯಕ್ಷ ಕೆ.ರೇವಣಸಿದ್ದಪ್ಪ, ಶಿ.ದಾ.ಚಿ. ನಿರ್ದೇಶಕರಾದ ಆರ್.ಹನುಮಂತಪ್ಪ, ಪಾಲಾಕ್ಷಪ್ಪ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಲ್.ತಿಪ್ಪೇಸ್ವಾಮಿ ಮಾತನಾಡಿದರು.ವಿಸ್ತೀರ್ಣಾಧಿಕಾರಿ ಡಾ.ದೀಪಾ, ಮುಖಂಡರಾದ ಮಲ್ಕಪ್ಪ ಅಧಿಕಾರ, ಕೆ.ಕರಿಗೌಡರ, ವಿಜಯಕುಮಾರ, ಶಿವಕುಮಾರ, ಶರಣಪ್ಪ, ಹೇಮಗಿರೀಯಪ್ಪ, ರಾಜಪ್ಪ, ನಾಗನಗೌಡರ ಇವರೂ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
