ಶ್ರೀನಗರ:
ಇಂದು ಬೆಳಗ್ಗೆ ನಡೆದ ಎನ್ಕೌಂಟರ್ನಲ್ಲಿ ಭಾರತೀಯ ಸೇನೆ ಕನಿಷ್ಠ ಇಬ್ಬರು ಜೈಶ್-ಎ-ಮುಹಮ್ಮದ್ ಸಂಘಟನೆಗೆ ಸೇರಿದ ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಕಾಶ್ಮೀರದ ಶೋಪಿಯಾನ್ ಪ್ರಾಂತ್ಯದಲ್ಲಿ ಮನೆಯೊಳಗೆ ಅವಿತಿದ್ದ ಉಗ್ರರು ಮತ್ತು ನಮ್ಮ ಸೇನಾ ಜವಾನರ ನಡುವೆ ಗುಂಡಿನ ಚಕಮಕಿ ನಡೆದಿದೆ. ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಸೇನೆ ಹತ್ಯೆ ಮಾಡಿದ್ದು, ಇದರಲ್ಲಿ ಭಾರತೀಯ ಸೇನೆಯ ನಾಲ್ವರು ಯೋಧರು ಗಾಯಗೊಂಡಿದ್ದಾರೆ.
ತನ್ನ ನೆಲದಲ್ಲಿರುವ ಉಗ್ರ ಶಿಬಿರಗಳ ಮೇಲೆ ಭಾರತ ವಾಯುದಾಳಿ ನಡೆಸಿದ ಬಳಿಕ ಎಲ್.ಒ.ಸಿ.ಯಲ್ಲಿ ಪಾಕ್ ಸೈನಿಕರು ಗುಂಡಿನ ದಾಳಿಯನ್ನು ನಡೆಸುತ್ತಿದ್ದಾರೆ
ಬೆಳಿಗ್ಗೆಯಿಂದಲೇ ಭಾರತ – ಪಾಕಿಸ್ಥಾನ ಗಡಿ ಪ್ರದೇಶದುದ್ದಕ್ಕೂ ಅಲ್ಲಿರುವ ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕ್ ಸೇನೆ ತನ್ನ ಸೇನಾ ಟ್ಯಾಂಕ್ ಗಳ ಮೂಲಕ ಗುಂಡಿನ ದಾಳಿ ನಡೆಸುತ್ತಿದೆ ಎಂಬ ಮಾಹಿತಿ ಸೇನಾ ಮೂಲಗಳಿಂದ ಲಭ್ಯವಾಗಿದೆ.
ಪಾಕಿಸ್ಥಾನದ ಗುಂಡಿನ ದಾಳಿಗೆ ಭಾರತೀಯ ಸೇನೆಯೂ ತಕ್ಕ ಪ್ರತ್ಯುತ್ತರವನ್ನು ನೀಡುತ್ತಿದ್ದು ಇತ್ತ ಪಾಕ್ ನ ಐದು ಸೇನಾ ಪೋಸ್ಟ್ ಗಳನ್ನು ನಮ್ಮ ಸೇನೆ ಧ್ವಂಸ ಮಾಡಿದೆ ಎಂದು ತಿಳಿದುಬಂದಿದೆ. ಇತ್ತ ಮಾಂಜ್ ಕೋಟ್, ಪೂಂಛ್, ನೌಶೇರಾ, ರಜೌರಿ, ಅಂಖೂರ್ ಮತ್ತು ಸಿಯಾಲ್ ಕೋಟ್ ಭಾಗಗಳಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಎನ್ಕೌಂಟರ್ ಸ್ಥಳದಿಂದ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತಷ್ಟು ಉಗ್ರರಿಗಾಗಿ ಶೋಧ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
