ಹುಳಿಯಾರು:
ಹುಳಿಯಾರು ಹೋಬಳಿಯಲ್ಲಿ ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಡಿ ಅನುಷ್ಠಾನಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಸಂಸದ ಎಸ್.ಪಿ.ಮುದ್ದಹನುಮೇಗೌಡರು ನೆರವೇರಿಸಿದರು.
ಹುಳಿಯಾರು ಹೋಬಳಿಯ ಚಿಕ್ಕಬಿದರೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ ಹಾಗೂ ಕೋರಗೆರೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ತೊರೆಸೂರಗೊಂಡನಹಳ್ಳಿ ಹಾಗೂ ವೈ.ಎಸ್.ಪಾಳ್ಯ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದ ನಿರ್ಮಾಣ ಕಾಮಗಾರಿಯ ವೀಕ್ಷಣೆ ಮಾಡಿದರು.
ಇದಕ್ಕೂ ಮುನ್ನ ಹಂದನಕೆರೆ ಹೋಬಳಿಯ ದೊಡ್ಡೆಣ್ಣೆಗೆರೆಯಲ್ಲಿನ ಬಂಜಾರ ಸಮುದಾಯದ ಪ್ರಸಿದ್ಧ ಯಾತ್ರಾಸ್ಥಳವಾದ ಭೀಮಾಸತಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂಸದರು ನಂತರ ಹಂದನಕೆರೆ ಗ್ರಾಮದಲ್ಲಿ ಹೈಮಾಸ್ಟ್ ವಿದ್ಯುದ್ದೀಪದ ಉದ್ಘಾಟನೆ ನೆರವೇರಿಸಿದರು.
ತಾಲೂಕಿನ ದೊಡ್ಡರಾಂಪುರ ಗ್ರಾಮದಲ್ಲಿ ಹೈಮಾಸ್ಟ್ ವಿದ್ಯುದ್ದೀಪ, ತಿಮ್ಮನಹಳ್ಳಿ ಗ್ರಾಮದಲ್ಲಿ ಹೈಮಾಸ್ಟ್ ವಿದ್ಯುದ್ದೀಪ ಉದ್ಘಾಟನೆ ನೆರವೇರಿಸಿದ ಸಂಸದರು ತಿಮ್ಮನಹಳ್ಳಿ ಗ್ರಾಮದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು. ಒಟ್ಟು 125 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ವೈ.ಸಿ.ಸಿದ್ದರಾಮಯ್ಯ, ತಾಪಂ ಮಾಜಿ ಸದಸ್ಯರುಗಳಾದ ವೈ.ಆರ್.ಮಲ್ಲಿಕಾರ್ಜುನಯ್ಯ, ದಬ್ಬಗುಂಟೆ ರುದ್ರೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್, ಮಾಜಿ ಅಧ್ಯಕ್ಷ ಹೊಸಳ್ಳಿ ಅಶೋಕ್, ಪಪಂ ಸದಸ್ಯರಾದ ಎಲ್.ಆರ್.ಚಂದ್ರಶೇಖರ್, ಎಚ್.ಆರ್.ವೆಂಕಟೇಶ್, ರಾಘವೇಂದ್ರ, ಕೋಳಿ ಶ್ರೀನಿವಾಸ್, ಪ್ರಸನ್ನ ಕುಮಾರ್, ಪ್ರದೀಪ್, ಉಮೇಶ್, ಇಮ್ರಾಜ್, ಟಿ.ಸಿ.ಮಂಜುನಾಥ್, ತಿಮ್ಲಾಪುರ ಗ್ರಾಪಂ ಉಪಾಧ್ಯಕ್ಷ ಮೋಹನ್ ಮತ್ತಿತರರಿದ್ದರು.