ಹೊನ್ನಾಳಿ:
ತಾಲೂಕಿನ ಎಲ್ಲಾ ಗ್ರಾಮಗಳ ರಸ್ತೆಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.ತಾಲೂಕಿನ ಕುಳಗಟ್ಟೆ ಗ್ರಾಮದಲ್ಲಿ ಶನಿವಾರ 40 ಲಕ್ಷ ರೂ.ಗಳ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮಗಳನ್ನು ಧೂಳು ಮುಕ್ತವಾಗಿಸಲು ಹೆಚ್ಚಿನ ಅನುದಾನ ಮಂಜೂರು ಮಾಡಿಸಲಾಗುತ್ತದೆ . ನೀರಾವರಿ ನಿಗಮದಿಂದ 2 ಕೋಟಿ ರೂ., ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 5 ಕೋಟಿ ರೂ. ಸೇರಿದಂತೆ ಇತರೆ ಯೋಜನೆಗಳಿಂದ ಹೆಚ್ಚಿನ ಅನುದಾನವನ್ನು ಮಂಜೂರು ಮಾಡಿಸಿ ಪ್ರತಿ ಗ್ರಾಮದಲ್ಲೂ ಅವಶ್ಯವಿರುವ ರಸ್ತೆ, ಬಾಕ್ಸ್ ಚರಂಡಿಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ಬೇಸಿಗೆ ಆರಂಭವಾಗಿರುವ ಕಾರಣ ಕ್ಷೇತ್ರದಲ್ಲಿ ಜನ-ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ವಹಿಸಲಾಗಿದೆ. ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬುದನ್ನು ಗುರುತಿಸಿ ಪೈಪ್ಲೈನ್, ಬೋರ್ವೆಲ್ಗಳಿಗೆ ಕ್ರಿಯಾ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.
ತಾಲೂಕಿನ ಸಾಸ್ವೆಹಳ್ಳಿ ಸಮೀಪದ ಐನೂರು, ಬುಳ್ಳಾಪುರ, ಹೊಸಹಳ್ಳಿ ಕ್ಯಾಂಪ್, ಕರಡಿಕಲ್ ಕ್ಯಾಂಪ್, ಗೊಲ್ಲರಹಳ್ಳಿ ಸಮೀಪದ ಬೇಲಿಮಲ್ಲೂರು ತೋಟಗಾರಿಕೆ ಫಾರಂ ಮತ್ತು ಗ್ರಾಮಗಳಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳಿಗೆ ರೇಣುಕಾಚಾರ್ಯ ಚಾಲನೆ ನೀಡಿದರು.
ಜಿಪಂ ಉಪಾಧ್ಯಕ್ಷ ಸಿ. ಸುರೇಂದ್ರನಾಯ್ಕ, ತಾಪಂ ಸದಸ್ಯ ರಂಗನಾಥ್, ಎಪಿಎಂಸಿ ನಿರ್ದೇಶಕ ಜಿವಿಎಂ ರಾಜು, ತಾಪಂ ಮಾಜಿ ಸದಸ್ಯ ಮಲ್ಲಪ್ಪ, ಕುಳಗಟ್ಟೆ ಗ್ರಾಪಂ ಅಧ್ಯಕ್ಷೆ ಮೈತ್ರಾ ರಾಜಪ್ಪ, ಸದಸ್ಯರಾದ ಡಿ.ಬಿ. ರಮೇಶ್, ಬಸವರಾಜು, ಎಸ್. ಹಾಲೇಶ್ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ