ಬೆಂಗಳೂರು
ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ಆರಂಭಿಸುತ್ತಿದ್ದ ಬಿಜೆಪಿಗೆ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಪಕ್ಷದ ನಾಯಕರ ನಡುವಿನ ಅಸಮಾಧಾನ ಸ್ಫೋಟಗೊಂಡಿದೆ. ಬೆಂಗಳೂರು ಬಿಜೆಪಿ ನಾಯಕರ ನಡುವೆ ಕಿತ್ತಾಟ ಶುರುವಾಗಿ ರಾಜ್ಯ ನಾಯಕರಿಗೆ ಹೊಸ ಸಂಕಷ್ಟ ತಂದಿದೆ.
ಬೆಂಗಳೂರು ನಾಯಕರಲ್ಲಿ ಮತ್ತೆ ವೈಯಕ್ತಿಕ ರಾಜಕಾರಣದ ಗಲಾಟೆ ಶುರುವಾಗಿದೆ. ರಾಜ್ಯ ಬಿಜೆಪಿಯ ಲೋಕಸಭೆ ಚುನಾವಣೆ ಉಸ್ತುವಾರಿ ಮುಂದೆ ಮಾಜಿ ಡಿಸಿಎಂ ಆರ್. ಅಶೋಕ್, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಗಲಾಟೆ ಮಾಡಿಕೊಂಡಿರವ ಘಟನೆ ಬೆಳಕಿಗೆ ಬಂದಿದೆ. ರಾಜ್ಯ ಉಸ್ತುವಾರಿ ಮುರಳಿಧರ್ ರಾವ್ ಮುಂದೆಯೇ ಪರಸ್ಪರ ಮಾತಿನ ಚಕಮಕಿ, ವಾಗ್ದಾಳಿ ನಡೆದಿದೆ ಎನ್ನಲಾಗಿದೆ.
ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆದಿರುವ ಗಲಾಟೆ ಇದು ಎನ್ನಲಾಗಿದ್ದು, ಏರು ಧ್ವನಿಯಲ್ಲಿಯೇ ಪರಸ್ಪರ ಗಲಾಟೆ ಮಾಡಿಕೊಂಡಿದ್ದಾರೆ. ಶಿವಾಜಿನಗರ ವಿಧಾನಸಭೆ ಕ್ಷೇತ್ರದ ರಾಜಕೀಯ ವಿಚಾರಕ್ಕೆ ಗಲಾಟೆ ನಡೆದಿದೆಯಂತೆ.
ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ಬಿಜೆಪಿ ನಾಯಕರನ್ನು ಪುನಃ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆಂದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಆರೋಪಿಸಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆ ಶಿವಾಜಿನಗರದ ಇಬ್ಬರು ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ವಿಧಾನಸಭೆ ಚುನಾವಣೆ ವೇಳೆ ನನ್ನನ್ನು ಬೆಂಬಲಿಸದೆ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿದ್ದರು.
ಶಿವಾಜಿನಗರಕ್ಕೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಚಾರಕ್ಕೆ ಬಂದಾಗ ಚಪ್ಪಲಿ ತೋರಿಸಿದ್ರು. ಪುನಃ ಅಂತಹವರನ್ನು ಆರ್. ಅಶೋಕ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ ಅಂತ ಮುರಳಿಧರ್ ರಾವ್ಗೆ ಕಟ್ಟಾ ದೂರು ನೀಡಿದ್ದಾರೆ.
ಆರ್.ಅಶೋಕ್ ಮತ್ತು ಕಟ್ಟಾರನ್ನು ಕರೆದು ನಿನ್ನೆ ಮಾತುಕತೆ ನಡೆಸುವ ವೇಳೆ ರಾವ್ ಸಮ್ಮುಖದಲ್ಲಿಯೇ ಉಭಯ ನಾಯಕರು ಗಲಾಟೆ ಮಾಡಿಕೊಂಡಿದ್ದಾರೆ. ಆರ್.ಅಶೋಕ್ ಹೊಂದಾಣಿಕೆ ರಾಜಕಾರಣಕ್ಕೆ ಗರಂ ಆಗಿ ಮಾತುಕತೆ ವೇಳೆ ಅರ್ಧದಲ್ಲೇ ಹೊರ ನಡೆದಿರುವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ರಾಮನಗರ ಮತ್ತು ಗೋವಿಂದರಾಜ ನಗರದದಲ್ಲಿ ನಡೆಯಬೇಕಾಗಿದ್ದ ಚುನಾವಣೆ ಸಭೆ ರದ್ದು ಮಾಡಿ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ.
ಸಂಪಂಗಿ ರಾಮನಗರದ ಗೋಪಿ ಹಾಗೂ ಪಕ್ಷೇತರ ಕಾರ್ಪೊರೇಟರ್ ಶರವಣ್ ಪಕ್ಷ ಸೇರ್ಪಡೆಗೆ ಕಟ್ಟಾ ವಿರೋಧ ವ್ಯಕ್ತಪಡಿಸಿದ್ದರು. ವಿಧಾನಸಭಾ ಚುನಾವಣಾ ಪ್ರಚಾರ ವೇಳೆ ಅಮಿತ್ ಶಾಗೆ ಚಪ್ಪಲಿ ತೋರಿಸಿದ್ದ ಸಂಪಂಗಿ ರಾಮನಗರದ ಗೋಪಿ ಹಾಗೂ ಶರವಣ್ ಇಬ್ಬರೂ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ನಂತರ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದೀಗ ಆರ್. ಅಶೋಕ್ ಮೂಲಕ ಪಕ್ಷ ಸೇರ್ಪಡೆಗೆ ಮುಂದಾಗಿದ್ದಾರೆ.
ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಶಿವಾಜಿನಗರ ವಿಧಾನಸಭೆ ಕ್ಷೇತ್ರ ಬರಲಿದ್ದು, ಲೋಕಸಭೆ ಚುನಾವಣೆ ಹಿನ್ನೆಲೆ ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಒತ್ತಾಯದ ಮೇರೆಗೆ ಇಬ್ಬರು ಪಕ್ಷ ವಿರೋಧಿ ನಾಯಕರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳಲು ಅಶೋಕ್ ಮುಂದಾಗಿದ್ದಾರೆ. ಇದಕ್ಕೆ ಕಟ್ಟಾ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/10/News-9-ashok.gif)