ಬೆಂಗಳೂರು:
ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್ ಉಗ್ರಪ್ಪನವರು ಜಿಲ್ಲೆಯ ಬಬ್ರುವಾಹನ ಎಂದು ವಿಧಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ ನಗರದ ಖಾಸಗಿ ಹೋಟೆಲ್ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಉಗ್ರಪ್ಪನವರು ಅಭಿಮನ್ಯು ಆಗಿದ್ದಾರೆ ಎಂಬ ವದಂತಿ ಸುಳ್ಳು. ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಉಗ್ರಪ್ಪ ಸಮರ್ಥವಾಗಿದ್ದಾರೆ. ಜಿಲ್ಲೆಯ ಮತದಾರರು ಉಗ್ರಪ್ಪನವರ ಜೊತೆಗಿದ್ದಾರೆ. ನಾವು ಇಲ್ಲಿಯೇ ಇದ್ದೀವಿ ಎಂದರು.
ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆಯವರ ಪರವಾಗಿ ಪ್ರಚಾರ ಕೈಗೊಳ್ಳಲು ಪಕ್ಷದ ಹೈಕಮಾಂಡ್ ಸೂಚನೆಯ ಮೇರೆಗೆ ಕಲಬುರಗಿಗೆ ತೆರಳಿದ್ದೇವೆ. ಹೀಗಾಗಿ, ಬಳ್ಳಾರಿಯ ಅಭ್ಯರ್ಥಿ ಉಗ್ರಪ್ಪನವರ ಜೊತೆಗಿಲ್ಲ. ಏಪ್ರಿಲ್ 2ರಂದು ನಡೆಯುವ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪನವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ನಾವೆಲ್ಲರೂ ಒಗ್ಗಟ್ಟು ಪ್ರದರ್ಶನ ಮಾಡಲಿದ್ದೇವೆ ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಮಾತನಾಡಿ, ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲೂ ಕೊಂಡಯ್ಯ, ಅಲ್ಲಂ ವೀರಭದ್ರಪ್ಪನಂತೆ ಕಾರ್ಯಕರ್ತರಿದ್ದಾರೆ. ಹೀಗಾಗಿ, ಕಾಂಗ್ರೆಸ್ಸಿಗೆ ಕಾರ್ಯಕರ್ತರೇ ಬಹುಮುಖ್ಯ. ಶಾಸಕರು ಭಾಗಿಯಾಗದಿರುವುದು ದೊಡ್ಡ ಪ್ರಶ್ನೆಯಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಜಿ.ಎಸ್.ಮಹಮ್ಮದ ರಫೀಕ್, ಮುಖಂಡರಾದ ಗುತ್ತಿಗನೂರು ವಿರುಪಾಕ್ಷಗೌಡ, ನಿರಂಜನ ನಾಯ್ಡು, ವೆಂಕಟೇಶ ಹೆಗಡೆ, ಅಸುಂಡಿ ಹೊನ್ನೂರಪ್ಪ, ಪಿ.ಎಸ್. ಘನಮಲ್ಲನಗೌಡ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
