ಗುಬ್ಬಿ
ತಾಲ್ಲೂಕಿನ ಧಾರ್ಮಿಕ ಪ್ರಸಿದ್ದ ಮಣ್ಣೇಮಾರಿ ಕಾವಲ್ ಶ್ರೀಮಣ್ಣಮ್ಮ ದೇವಿ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಸಹಸ್ರಾರು ಸಂಖ್ಯೆಯ ಭಕ್ತಾದಿಗಳ ಸಮ್ಮುಖದಲ್ಲಿ ಶನಿವಾರ ರಥೋತ್ಸವವು ಅತ್ಯಂತ ವೈಭವಯುತವಾಗಿ ನಡೆಯಿತು.
ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ವಿಧಿವತ್ತಾಗಿ ನಡೆಸಲಾಯಿತು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ರಥೋತ್ಸವಕ್ಕೆ ದವನ ಸಿಕ್ಕಿಸಿದ ಬಾಳೆಹಣ್ಣನ್ನು ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಣೆ ಮಾಡಿದರು.
33 ಹಳ್ಳಿಗಳ ಕುಲದೇವತೆಯಾಗಿರುವ ಮಾದಾಪುರ ಗ್ರಾಮದ ಬಳಿಯ ಮಣ್ಣೇಮಾರಿ ಕಾವಲ್ನಲ್ಲಿ ಅನಾದಿಕಾಲದಿಂದಲೂ ಮಹಾಲಕ್ಷ್ಮೀಸ್ವರೂಪಿಣಿಯಾಗಿ, ಆನೆವಾಹಿನಿಯಾಗಿ, ಭಕ್ತರ ಮನೋಭಿಷ್ಠ ದೇವಿಯಾಗಿ ಕೌಟುಂಬಿಕ ಸಮಸ್ಯೆಯಿಂದ ನೊಂದು ಬಂದ ಭಕ್ತಾದಿಗಳಿಗೆ ಸದಾಕಾಲವೂ ಶಾಂತಿ ನೆಮ್ಮದಿಗಳನ್ನು ಕರುಣಿಸುವ ಶ್ರೀಮಣ್ಣಮ್ಮದೇವಿ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ ಈ ಬಾರಿಯೂ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ವೈಭವಯುತವಾಗಿ ನಡೆಯಿತು.
ರಾತ್ರಿ ವೇಳೆ ನಡೆಯುವ ರಥೋತ್ಸವದಲ್ಲಿ ತಾಲ್ಲೂಕಿನ 33 ಹಳ್ಳಿಗಳ ಭಕ್ತಾದಿಗಳು ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತಾದಿಗಳು ತಮ್ಮ ಇಷ್ಟಾರ್ಥ ಪೂಜೆ ಸಲ್ಲಿಸುವ ಮೂಲಕ ಹರಕೆ ತೀರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
