ಚಳ್ಳಕೆರೆ
ತಾಲ್ಲೂಕಿನ ತಳಕು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಬೂದಿಹಳ್ಳಿ ಮತ್ತು ಬೋಗನಹಳ್ಳಿ ಗ್ರಾಮಗಳ ಸುಮಾರು 200ಕ್ಕೂ ಹೆಚ್ಚು ದೇವರ ಎತ್ತುಗಳಿಗೆ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಜಪಾನಂದಸ್ವಾಮಿ ಮಂಗಳವಾರ ಉಚಿತವಾಗಿ ಮೇವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಬರಗಾಲದ ಪ್ರಯುಕ್ತ ತಾಲ್ಲೂಕಿನ ಬಹುತೇಕ ಗ್ರಾಮದ ದೇವರ ಎತ್ತುಗಳು ಮೇವು, ನೀರಿಲ್ಲದೆ ಜೀನ್ಮರಣ ಹೋರಾಟ ನಡೆಸುತ್ತಿದ್ದು, ಈ ಬಗ್ಗೆ ಮಾದ್ಯಗಳ ವರದಿಯನ್ನು ಆಲಿಸಿದ ಬೆಂಗಳೂರಿನ ಇನ್ಪೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಉಚಿತವಾಗಿ ಈ ಮೇವನ್ನು ನೀಡಿ, ದೇವರ ಎತ್ತುಗಳಿಗೆ ವಿತರಿಸುವಂತೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ನಾನು ಮತ್ತು ನಮ್ಮ ಸಿಬ್ಬಂದಿ ಚಳ್ಳಕೆರೆ ತಾಲ್ಲೂಕಿಗೆ ಆಗಮಿಸಿ ಈ ಮೇವು ವಿತರಣೆ ಮಾಡುತ್ತಿದ್ದೇವೆ. ಇದರ ಜೊತೆಗೆ ಬೂಸಾ, ಹಿಂಡಿಯನ್ನು ಸಹ ನೀಡುತ್ತಿದ್ದೇವೆ. ತಾಲ್ಲೂಕಿನಲ್ಲಿ ಎಲ್ಲೇಯಾದರೂ ದೇವರ ಎತ್ತುಗಳು ಉಪವಾಸ ಇರುವ ಸಂದರ್ಭದ ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಈ ಬಗ್ಗೆ ಮಾದ್ಯಮಗಳ ಮೂಲಕ ಮಾಹಿತಿ ಪಡೆದ ಪಾವಗಡದ ಶ್ರೀರಾಮಕೃಷ್ಣ ಸೇವಾ ಶ್ರಮ ದೇವರ ಎತ್ತುಗಳಿಗೆ ಮೇವು, ಬೂಸಾ, ಹಿಂಡಿಯನ್ನು ಒದಗಿಸುವ ಯೋಜನೆ ರೂಪಿಸಿದ್ದು, ಆಶ್ರಮದ ಸ್ವಾಮಿ ಜಪಾನಂದರವರ ಮನವಿ ಮೇರೆಗೆ ಬೆಂಗಳೂರಿನ ಇನ್ಪೋಸಿಸ್ ಫೌಂಡೇಷನ್ ಅಧ್ಯಕ್ಷೆ, ಕೊಡುಗೈ ದಾನಿ ಸುಧಾಮೂರ್ತಿಯವರನ್ನು ಭೇಟಿ ಮಾಡಿ ಮಾಹಿತಿ ತಿಳಿಸಿದಾಗ ಅವರು ಸಾವಿರಾರು ಸಂಖ್ಯೆಯಲ್ಲಿರುವ ದೇವರ ಹಸು ಮತ್ತು ಕರುಗಳಿಗೆ ಉಚಿತವಾಗಿ ಮೇವು ನೀಡುವ ಭರವಸೆ ನೀಡಿದರಲ್ಲದೆ ಅವರೇ ಖುದ್ದಾಗಿ ಭೇಟಿ ನೀಡಿ ಪ್ರತಿವಾರವೂ ಮೇವು ಹಾಗೂ ಹಿಂಡಿ ಬೂಸಾ ಮುಂತಾದ ವಸ್ತುಗಳನ್ನು ನೀಡುವ ಭರವಸೆ ನೀಡಿದ್ದರು.
ಅದೇ ರೀತಿ ಅವರ ಸಹಕಾರದಲ್ಲಿ ರಾಮಕೃಷ್ಣ ಸೇವಾಶ್ರಮದ ಜಪಾನಂದ ಸ್ವಾಮೀಜಿ ಪ್ರತಿವಾರ ದೇವರ ಎತ್ತುಗಳು ವಾಸಿಸುವ ಪ್ರದೇಶಗಳಾದ ಬೊಮ್ಮದೇವರಹಟ್ಟಿ, ಕುರುಡಿಹಳ್ಳಿ ಸೇರಿದಂತೆ ಹಲವಾರು ಕಡೆಗಳಲ್ಲಿ ಮೇವು ಇತರೆ ಆಹಾರ ಪದಾರ್ಥಗಳನ್ನು ಜಾನುವಾರುಗಳಿಗೆ ಒದಗಿಸಿದ್ಧಾರೆ.
ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಈಗಾಗಲೇ ಉಚಿತ ಮೇವು ನೀಡಲಾಗಿದೆ. ಇದರಿಂದ ದೇವರ ಎತ್ತುಗಳು ಮೇವು ನೀರು ಸೇವಿಸಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡಿವೆ. ಯಾವುದೇ ಕಾರಣಕ್ಕೂ ನಾವು ಪೂಜಿಸುವ ಕಾಮಧೇನು ಅವತಾರವಾದ ಎತ್ತುಗಳು ಹಸಿವಿನಿಂದ ಸಾವನಪ್ಪಬಾರದು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಆಶ್ರಮ ನಿರ್ಧರಿಸಿದೆ. ಸಾರ್ವಜನಿಕರು ಎಲ್ಲಿಯೇಯಾಗಲಿ ದೇವರ ಎತ್ತುಗಳು ಉಪವಾಸದ ದುಸ್ಥಿತಿಯಲ್ಲಿದ್ದರೆ ಗಮನಕ್ಕೆ ತರುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಹೇಶ್, ಸಿದ್ದೇಶ್ ಮುಂತಾದವರು ಉಪಸ್ಥಿತರಿದ್ದರು.