ಚಳ್ಳಕೆರೆ
ರಾಷ್ಟ್ರ ಹಾಗೂ ರಾಜ್ಯದಲ್ಲಿ ಮೋದಿಯವರ ಜನಪ್ರಿಯತೆ ಹಾಗೂ ಅವರ ಬಗ್ಗೆ ಜನಸಾಮಾನ್ಯರಲ್ಲಿರುವ ವಿಶ್ವಾಸಕ್ಕೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರದ ಮುಖ್ಯಮಂತ್ರಿ ಹಾಗೂ ಮಂತ್ರಿಗಳು ಕಂಗೆಟ್ಟು ಹೋಗಿದ್ದಾರೆ. ವಿನಾಕಾರಣ ಸುಳ್ಳು ಆರೋಪ ಮಾಡುವ ಮೂಲಕ ವಾಮಮಾರ್ಗದಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಯತ್ನ ನಡೆಸಿದೆ. ಆದರೆ, ರಾಜ್ಯದ ಮತದಾರ ಎರಡೂ ಪಕ್ಷಗಳಿಗೆ ಬುದ್ದಿ ಕಲಿಸಲಿದ್ಧಾನೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಲೋಕಸಭಾ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಕ್ಷೇತ್ರದ ಅಭ್ಯರ್ಥಿ ನಾರಾಯಣಸ್ವಾಮಿ ಪರ ಪ್ರಚಾರ ನಡೆಸಲು ಇಲ್ಲಿಗೆ ಆಗಮಿಸಿದ್ದ ಅವರನ್ನು ಹೆಲಿಪ್ಯಾಡ್ನಲ್ಲಿ ಅಭ್ಯರ್ಥಿ ನಾರಾಯಣಸ್ವಾಮಿ ಹಾಗೂ ಇನ್ನಿತರೆ ಗಣ್ಯರು ಪುಪ್ಪಹಾರ ನೀಡಿ ಸ್ವಾಗತಿಸಿದ ನಂತರ ಹೆಲಿಪ್ಯಾಡ್ನಲ್ಲಿಯೇ ಪತ್ರಕರ್ತರ ಪ್ರಶ್ನೆಗಳಿಗೆ ಯಡಿಯೂರಪ್ಪ ಉತ್ತರಿಸಿದರು.
ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಈ ಬಾರಿ 22ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯ ದಾಖಲಿಸಲಿದೆ. ಕಳೆದ ಬಾರಿ 17 ಸ್ಥಾನಗಳಿಸಿದ್ದ ಬಿಜೆಪಿ ಈ ಬಾರಿ ಹೆಚ್ಚು ಸ್ಥಾನಗಳಿಸಲು ಮೋದಿಯವರ ಜನಪ್ರಿಯತೆ ಕಾರಣವಾಗಲಿದೆ. ಯುವಕರು ಹಾಗೂ ಮಹಿಳೆಯರು ಸ್ವಯಂ ಸ್ಪೂರ್ತಿಯಿಂದ ಮೋದಿಯವರ ಗೆಲುವಿಗಾಗಿ ಹಗಲಿರುಳು ಶ್ರಮಿಸುತ್ತಿದ್ಧಾರೆಂದರು.
ಇತ್ತೀಚಿನ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಮೋದಿಯವರ ಬಗ್ಗೆ ಕೀಳು ಪದಗಳಿಂದ ಟೀಕೆ ಮಾಡುತ್ತಿರುವುದು ರಾಜ್ಯದ ಜನತೆ ಗಮಿಸುತ್ತಿದ್ದಾರೆ. ಚುನಾವಣೆಯ ನಂತರ ಸಿದ್ದರಾಮಯ್ಯನವರಿಗೆ ಅವರ ಟೀಕೆಯ ಪರಿಣಾಮ ಸ್ಪಷ್ಟವಾಗಿ ತಿಳಿಯಲಿದೆ ಎಂದರು. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತ ಗೆಲುವು ಸಾಧಿಸಲಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಎಲ್ಲವನ್ನೂ ಬಿಟ್ಟು ಮಗನ ಗೆಲುವಿವಾಗಿ ಮಂಡ್ಯದಲ್ಲೇ ಟೀಕಾಣಿ ಹೂಡಿದ್ದಾರೆ. ಚುನಾವಣೆ ಗೆಲ್ಲಲು ನೂರಾರು ಕೋಟಿ ಹಣ ವೆಚ್ಚ ಮಾಡುವ ಬಗ್ಗೆ ಮಾದ್ಯಮಗಳು ವರದಿ ಮಾಡಿದ್ದು, ಇದನ್ನು ಚುನಾವಣಾ ಆಯೋಗ ಗಮನಿಸಲಿದೆ. ನನ್ನ ಪುತ್ರ ಬಿ.ವೈ.ರಾಘವೇಂದ್ರ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯಾಗಿದ್ದರೂ ಸಹ ನನಗೆ ಅವರ ಪರವಾಗಿ ಪ್ರಚಾರ ಮಾಡಲು ಇದುವರೆಗೂ ಸಾಧ್ಯವಾಗಿಲ್ಲ ಎಂದರು.
ಮೋದಿ ಸರ್ಕಾರ ರಾಜ್ಯದ ಬಡ ರೈತರಿಗೆ ವಾರ್ಷಿಕ 6 ಸಾವಿರ ಸಹಾಯ ದನ ನೀಡುವುದಾಗಿ ಪ್ರಕಟಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ರೈತರಿಗೂ ಈ ಯೋಜನೆ ವಿಸ್ತಾರ ಮಾಡುವ ಉದ್ದೇಶವಿದೆ ಎಂದರು. ರಾಷ್ಟ್ರದಲ್ಲಿ 320 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸದರು. ಸರ್ಕಾರದ ಬಹುತೇಕ ಮಂತ್ರಿಗಳಲ್ಲಿ ಅಂತರಿಕ ಅಸಮದಾನ ಹೆಚ್ಚಾಗುತ್ತಿದ್ದು, ಇತ್ತೀಚೆಗೆ ಸಚಿವ ಎಂ.ಬಿ.ಪಾಟೇಲ್ ಮತ್ತು ಡಿ.ಕೆ.ಶಿವಕುಮಾರ್ ವಾಗ್ವಾದ ಜನತೆ ನೋಡಿದೆ. ಲಿಂಗಾಯತ ಧರ್ಮ ಪ್ರತ್ಯೇಕತೆಗೆ ಸೋನಿಯಾ ಗಾಂಧಿ ಕೈವಾಡ ಇರುವ ಬಗ್ಗೆ ಮಾದ್ಯಮ ವರದಿ ಉಲ್ಲೇಘಿಸಿದ್ದು ಇದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದೆ ಎಂದರು.
ಮಹಿಳೆಯರಿಗೆ ಜಾಮೀನು ಪಡೆಯದೇ ಸಾಲ ನೀಡುವ ಯೋಜನೆಯನ್ನು ಜಾರಿಗೆ ತರಲಾಗುವುದು, 370ನೇ ವಿಧಿಯನ್ನು ರದ್ದು ಪಡಿಸಲಾಗುವುದು, ರಾಜ್ಯದ 60 ಸಾವಿರ ಕಿ.ಮೀ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಮಾಡುವ ಯೋಜನೆ ಇದೆ. ಕರ್ನಾಟಕ ರಾಜ್ಯವನ್ನು ಗುಡಿಸಲು ರಹಿತ ರಾಜ್ಯವನ್ನಾಗಿ ಮಾಡುವ ಅಭಿಲಾಷೆ ಬಿಜೆಪಿಯದ್ದು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
