ಸಾಣೇಹಳ್ಳಿ:
ದುರ್ಬಲರು, ಅನಾರೋಗ್ಯದಲ್ಲಿರುವವರು ಹಾಗೂ ಬಡತನದಲ್ಲಿರುವವರೇ ದೇವರಾಗಿದ್ದು, ಅವರ ಸೇವೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಾಣೇಹಳ್ಳಿಯ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನ ಶಿವಕುಮಾರ ಸ್ವಾಮೀಜಿ ರಥೋತ್ಸವದ ನಿಮಿತ್ತ ಏರ್ಪಡಿಸಿದ್ದ ಗುರುವಂದನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಅವರು, ಬೆಂಗಳೂರಿನಿಂದ ಡಾ.ಶ್ರೀಕಂಠ ಅವರು ನೂರು ದೇವರುಗಳನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ಇಲ್ಲಿಗೆ ಬಂದಿರುವ ದೇವರು ಎಂದರೆ, ಮೊದಲನೆಯವರು ಮಧುಮೇಹಿ ಮಕ್ಕಳು, ಅವರ ಬದುಕು ಅತ್ಯಂತ ಆತಂಕಕಾರಿಯಾದುದು. ಒಂದು ದಿನಕ್ಕೆ ನಾಲ್ಕು ಬಾರಿ ಇನ್ಸುಲಿನ್ ತೆಗೆದುಕೊಳ್ಳಬೇಕು.
ಇಲ್ಲದೇ ಹೋದರೆ ಸಾವಿನ ಮನೆಯ ಕದತಟ್ಟುವ ಸಂದರ್ಭ ಬರುವುದು ನಿಶ್ಚಿತ. ಇಂಥ ಮಕ್ಕಳನ್ನು ಡಾ. ಶ್ರೀಕಂಠ ಮತ್ತು ಅವರ ಇನ್ನಿತರ ವೈದ್ಯರ ತಂಡ ತಾಯಿ ತನ್ನ ಮಗುವನ್ನು ನೋಡಿಕೊಳ್ಳುವುದಕ್ಕಿಂತ ಹೆಚ್ಚಿನದಾಗಿ ನೋಡಿಕೊಳ್ಳುತ್ತಿದ್ದಾರೆ. ಇದನ್ನು ಕಂಡು ನಮಗೆ ಅತ್ಯಂತ ಸಂತೋಷವಾಗಿದೆ. ಇದು ದೇವರು ಮೆಚ್ಚುವ ಕೆಲಸ ಎಂದರು.
80ರ ವಯಸ್ಸಿನ ಡಾ.ಶ್ರೀಕಂಠ, ಭಾನುಭಟ್ ಮುಂತಾದ ಹಿರಿಯರ ಜೀವನೋತ್ಸಹ ಯುವಕರಿಗೆ ಮಾದರಿಯಾದುದು. ಸಾರ್ವಜನಿಕ ಸೇವೆಯಲ್ಲಿರುವ ಸುಖ ಮತ್ತೆಲ್ಲೂ ಸಿಗುವುದಿಲ್ಲ. ಹೀಗಾಗಿ ಪ್ರತಿಯೊಬ್ಬರು ತಮ್ಮ ವೈಯುಕ್ತಿಕ ಬದುಕಿನ ಜೊತೆಗೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಪುಣ್ಯದ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಉತ್ಸಾಹದಿಂದ, ನಿಸ್ಪøಹತೆಯಿಂದ ಮಾಡುವ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರೆ ರೋಗ ತನ್ನಿಂದ ತಾನೇ ಓಡುವುದು ಎಂದರು.
ಕರ್ನಾಟಕದ ಮಠಾಧಿಪತಿಗಳಲ್ಲಿ ಕ್ರಾಂತಿಕಾರಿ ಜಗದ್ಗುರುಗಳು ಶ್ರೀಶಿವಕುಮಾರ ಸ್ವಾಮಿಜಿಗಳು. ಅವರ ಹೃದಯ ಹೂವಿನಷ್ಟು ಕೋಮಲ; ವಜ್ರದಷ್ಟು ಕಠಿಣ. ಇಂಥ ಗಟ್ಟಿನತ ಹಲವು ಸ್ವಾಮಿಗಳಿಗೆ ಬರಲಾರದು. ಅವರು ಯಾವುದಕ್ಕೂ ಅಂಜುವವರಲ್ಲ. ದಿಟ್ಟ ಹೆಜ್ಜೆಗಳ ಮೂಲಕ ದಿಟ್ಟ ಕ್ರಮಗಳನ್ನು ತೆಗೆದುಕೊಂಡವರು. ನಾವು ಬಾಲ್ಯದಲ್ಲಿ ಜವಾನ ಹುದ್ದೆ ಬಯಸಿ ಸಿರಿಗೆರೆಗೆ ಬಂದವರು. ಪೂಜ್ಯರು ನಮ್ಮ ಸೇವೆಯನ್ನು ಗುರುತಿಸಿ ಉನ್ನತ ವಿದ್ಯಾಭ್ಯಾಸ ಮುಂದುವರೆಸಲು ಅವಕಾಶ ನೀಡಿದರು ಎಂದು ಸ್ಮರಿಸಿದರು.
ನಾವು ಪಿಯುಸಿ, ಬಿ ಎ ಅಲ್ಲಿ ಫೇಲ್ ಆದಾಗ `ಎಲ್ಲರೂ ಪಾಸ್ ಆದರೆ ಫೇಲ್ ಆಗುವವರು ಯಾರು? ಪೇಲ್ ಆಗುವುದೇ ಪಾಸಾಗಲು’ ಎಂದು ಪ್ರೋತ್ಸಾಹಿಸಿದರು. ಇದರ ಫಲವಾಗಿಯೇ ನಾವು ಅಂತಿಮ ಬಿ ಎ ಮತ್ತು ಎಂ ಎ ಅಲ್ಲಿ ಪ್ರಥಮ ರ್ಯಾಂಕ್ ಬರಲು ಸಾಧ್ಯವಾಯಿತು. ಮಕ್ಕಳು ಫೇಲ್ ಆದರೆ ಪೋಷಕರು ಅವರಿಗೆ ಸ್ಪೂರ್ತಿ ತುಂಬ ಬೇಕೇ ಹೊರತು ಅವರನ್ನು ಕೀಳಾಗಿ ಕಾಣಬಾರದು ಎಂದರು.
ಗುರುವಂದನೆ ಸಲ್ಲಿಸಿದ ದಾವಣಗೆರೆಯ ಹೊಟೆಲ್ ಉದ್ಯಮಿ ಅಣಬೇರು ರಾಜಣ್ಣ ಮಾತನಾಡಿ, ಸತ್ತು ಬದುಕಿದ ಕೆಲವೇ ಕೆಲವರಲ್ಲಿ ಶಿವಕುಮಾರ ಸ್ವಾಮಿಜಿಗಳು ಒಬ್ಬರು. ಸಮಯ ಪ್ರಜ್ಞೆಗೆ ಇನ್ನೊಂದು ಹೆಸರೇ ಶಿವಕುಮಾರ ಶ್ರೀಗಳು. ಶಿವಕುಮಾರ ಶ್ರೀಗಳು ತರಳಬಾಳು ಮಠದ ಚುಕ್ಕಾಣಿ ಹಿಡಿದಾಗಿನಿಂದ ಸಾಹಿತ್ತಿಕ, ಸಾಂಸ್ಕತಿಕ, ಶೈಕ್ಷಣಿಕ, ಚಟುವಟಿಕೆಗಳು ಗರಿಗೆದರಿ ಮಠದ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದವು. ಆಧ್ಯತ್ಮ ಇದ್ದರೆ ಮಾತ್ರ ಜೀವನ ಪರಿಪೂರ್ಣ ಎನ್ನುವುದನ್ನು ಅರಿತು ಆಚರಿಸಿದವರು. ಶಿವಕುಮಾರ ಶ್ರೀಗಳು ಸಮಾಜಕ್ಕಾಗಿ ತಮ್ಮನ್ನು ತಾವೇ ಗಂಧದ ಕೊರಡಿನಂತೆ ತೇಯ್ದುಕೊಂಡವರು. ಪೂಜ್ಯರಲ್ಲಿ ಅಪಾರ ಪಾಂಡಿತ್ಯವಿತ್ತು. ಅದನ್ನು ಸಮಾಜಕ್ಕೆ ಧಾರೆಯರೆದರು. ಈ ಕಾರಣಕ್ಕಾಗಿಯೇ ಇಂದು ಸಮಾಜ ಮಾದರಿ ಸಮಾಜವಾಗಿದೆ ಎಂದು ಹೇಳಿದರು.
ತರಳಬಾಳು ಮಠದ ಶ್ರೀಗಳು ಹೇಳಿದ ಮಾತನ್ನು ಕೇಳುವ ಶಿಷ್ಯವರ್ಗ ಇಂದಿಗೂ ಇದೆ. ಹಳ್ಳಿಯ ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಹಳ್ಳಿ ಹಳ್ಳಿಗಳಲ್ಲಿ ಪ್ರೌಢಶಾಲೆಗಳನ್ನು ತೆರೆದು ಶಿಕ್ಷಣ ನೀಡಿದ ಫಲವಾಗಿ ಇಂದು ಹಳ್ಳಿಯ ಮಕ್ಕಳೂ ವಿದೇಶದಲ್ಲಿ ನೆಲೆಸುವಂತಾಗಿದೆ. ಸಮಾಜದ ಸಂಘಟನೆಯ ಹಿನ್ನೆಲೆಯಲ್ಲಿ ತರಳಬಾಳು ಹುಣ್ಣಿಮೆಯಂತ ಮಹಾ ಉತ್ಸವವನ್ನು ಆಯೋಜಿಸಿದರು. ದುಡಿದ ಹಣದಲ್ಲಿ ಹಂಚಿ ತಿನ್ನುವ ದಾಸೋಹ ಪ್ರಜ್ಞೆಯನ್ನು ಮೂಡಿಸಿದವರು ಶಿವಕುಮಾರ ಶ್ರೀಗಳವರು ಎಂದರು.
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ 95ನೆಯ ಕೃತಿ `ಸಮ ಸಮಾಜದ ಕನಸು’ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಬೆಂಗಳೂರಿನ ವೈದ್ಯ ಡಾ.ಶ್ರೀಕಂಠ, ಕಾಶಿ, ಕೈಲಾಸ, ಸ್ವರ್ಗಕ್ಕಿಂತ ಸಾಣೇಹಳ್ಳಿ ಮಿಗಿಲಾಗಿದೆ. ಪುಣ್ಯ ಪಡೆಯಲು ಎಲ್ಲಿಗೂ ಹೋಗುವುದು ಬೇಕಾಗಿಲ್ಲ; ಸಾಣೇಹಳ್ಳಿಗೆ ಬಂದರೆ ಸಾಕು ಎಂದರು.
ಪಂಡಿತಾರಾಧ್ಯ ಶ್ರೀಗಳು ಕೇವಲ ಸಂತರಷ್ಟೇ ಅಲ್ಲ; ಮಹಾನ್ ಸಾಹಿತಿಗಳು, ಕಲೆ, ಸಂಸ್ಕøತಿಯ ಪೋಷಕರೂ ಹೌದು. ಟೈಪ್ – 1 ಮಧುಮೇಹಿಗಳಿಗೆ ಒಂದು ದಿನ ಇನ್ಸುಲಿನ್ ಇಲ್ಲದೇ ಹೋದರೆ ಅವರ ಉಸಿರು ನಿಂತು ಹೋಗಲಿದೆ. ದಿನಕ್ಕೆ ನಾಲ್ಕು ಬಾರಿ ಇನ್ಸುಲಿನ್ ತೆಗೆದುಕೊಳ್ಳಬೇಕು. ಮೂರು ಸಾರಿ ಇನ್ಸುಲಿನ್ ಮಟ್ಟವನ್ನು ಪರೀಕ್ಷಿಸಿಕೊಳ್ಳಬೇಕು. ಬಡಮಕ್ಕಳಿಗೆ ಈ ಕಾಯಿಲೆ ಬಂದರೆ ನಿಭಾಯಿಸುವುದು ಅತ್ಯಂತ ಕಷ್ಟಕರ ಎಂದರು.
ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ ಕಪ್ಪಣ್ಣ ಮಾತನಾಡಿ, ಸಮಾಜಮುಖಿ ಕಾರ್ಯಗಳು ಎಷ್ಟೇ ಇದ್ದರೂ ಪೂಜ್ಯರು ಅದನ್ನು ನೆರವೇರಿಸಿಕೊಡುತ್ತರೆ. ಹೀಗಾಗಿ ನನ್ನ ಮತ್ತು ಪೂಜ್ಯರ ನಡುವೆ ಇಂಥ ಅವಿನಾಭಾವ ಸಂಬಂಧ ಏರ್ಪಟ್ಟಿದೆ. ನನ್ನ ಜೀವನದ ಅತ್ಯಂತ ಸಾರ್ಥಕ ಕ್ಷಣಗಳು ಎಂದರೆ ಸಾಣೇಹಳ್ಳಿಯ ಪೂಜ್ಯರೊಡನೆ ಕೆಲಸ-ಕಾರ್ಯಗಳನ್ನು ಮಾಡುವುದು. ಭಾರತ ಸಂಚಾರ ಮತ್ತು ಶಿವದೇಶ ಸಂಚಾರಗಳು ದೇಶದ ರಂಗಭೂಮಿಯ ಇತಿಹಾಸದಲ್ಲಿಯೇ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಸಂಗತಿ. ಈ ಕಾರ್ಯದಲ್ಲಿ ನಾನು ಸಹ ಪಾಲ್ಗೊಂಡಿದ್ದೆ ಎನ್ನುವುದೇ ನನಗೆ ಸಲ್ಲುವ ಅತ್ಯಂತ ದೊಡ್ಡ ಪ್ರಶಸ್ತಿ ಎಂದರು.
ಶಿವಕುಮಾರ ಸ್ವಾಮೀಜಿ ರಥೋತ್ಸವದ ನಿಮಿತ್ತ ಬೆಂಗಳೂರಿನ ಖ್ಯಾತ ವೈದ್ಯರಾದ ಡಾ. ಶ್ರೀಕಂಠ ಅವರ ನೇತೃತ್ವದಲ್ಲಿ ಸಾರ್ವಜನಿಕ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಹೃದಯ, ಕಣ್ಣು, ಹಲ್ಲುಗಳನ್ನು ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ ನೀಡಲಾಯಿತು. ಸುಮಾರು 650 ಜನ ತಪಾಸಣೆಗೆ ಒಳಗಾದರು.
ಮಕ್ಕಳ ಹಬ್ಬದ ಸಮಾರೋಪದ ನಿಮಿತ್ತ ಶಿಬಿರಾರ್ಥಿಗಳಿಂದ ವಚನಗೀತೆ, ಯೋಗ ನೃತ್ಯ, ನಾಟಕಗಳಾದ ರಿಯಾಲಿಟಿ… .ಬೊಮ್ಮನಹಳ್ಳಿಯ ಕಿಂದರಿಜೋಗಿ, ನನ್ನ ಕನಸಿನ ಲೋಕ ಮತ್ತು ನೃತ್ಯರೂಪಕ ಶಿವಶಕ್ತಿ ಪ್ರದರ್ಶನಗೊಂಡವು. ಶ್ರೀ ಶಿವಕುಮಾರ ಸ್ವಾಮಿಜಿಗಳ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಜೃಂಭಣೆಯಿಂದ ಹಳೆಮಠದಿಂದ ಹೊಸಮಠದ ತನಕ ರಥೋತ್ಸವವನ್ನು ನೆರವೇರಿಸ ಲಾಯಿತು. ಸಾವಿರಾರು ಭಕ್ತರು ಭಾಗವಹಿಸಿದ್ದರು. ನಾಗರಾಜ್ ಹೆಚ್ ಎಸ್ ವಚನಗೀತೆಗಳನ್ನು ಹಾಡಿದರು. ಪ್ರಕಾಶ್ ಸ್ವಾಗತಿಸಿದರು. ಕಾವ್ಯ ನಿರೂಪಿಸಿದರು. ಜಯಣ್ಣ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
