ತಿಪಟೂರು :
ನಗರದಲ್ಲಿ ಹಿಂದಿನಿಂದಲೂ ಕಾಂಗ್ರೆಸ್ ಸಮರ್ಥವಾಗಿದ್ದು, ಪಕ್ಷದ ಶಕ್ತಿಯ ಜತೆಗೆ ತಮ್ಮ ಸ್ವಂತ ವರ್ಚಸ್ಸು ಬಳಸಿಕೊಂಡು ಗೆಲುವು ಸಾಧಿಸಿ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಾಕಾಂಕ್ಷಿಗಳು ಸಜ್ಜಾಗಿ ಎಂದು ಮಾಜಿ ಶಾಸಕ ಕೆ.ಷಡಕ್ಷರಿ ಪಕ್ಷದ ಕಾರ್ಯಕರ್ತರಿಗೆ ಕರೆನೀಡಿದರು.
ನಗರದಲ್ಲಿ ಸರ್ಕಾರಿ ನೌಕರ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಕಳೆದ ಅವಧಿಯಲ್ಲಿ ಕಾಂಗ್ರೆಸ್ ನೇತೃತ್ವದ ಆಡಳಿತ ನಗರದ ಅಭಿವೃದ್ಧಿಗೆ ವ್ಯಾಪಕ ಕೊಡುಗೆ ನೀಡಿದೆ. ನಗರದ ಪ್ರಗತಿಗೆ ಸಂಬಂಧಿಸಿ ತಂದಿದ್ದ ಹಲವಾರು ಯೋಜನೆಗಳು ಈಗಲೂ ಪ್ರಗತಿಯಲ್ಲಿವೆ. ಒಳ ಚರಂಡಿ ಮೊದಲ ಹಂತ ಪೂರ್ಣಗೊಳಿಸುವ ಜತೆಗೆ ಎರಡನೇ ಹಂತ ಯಶಸ್ವಿಗೊಳಿಸಿ ನಗರದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. 24/7 ಕುಡಿವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ನಗರಸಭೆಗೆ ಸುಸಜ್ಜಿತ ಆಡಳಿತ ಕಟ್ಟಡ ನಿರ್ಮಿಸಲಾಗುತ್ತಿದೆ.
ನಗರದಲ್ಲಿ ವಾಸವಿರುವ ಕೂಲಿ ಕಾರ್ಮಿಕರು, ಶ್ರಮಿಕರೆಲ್ಲರಿಗೂ ಅನುಕೂಲವಾಗುವ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲಾಗಿದೆ. ತಾವು ಶಾಸಕರಾಗಿ ತಂದಿದ್ದ ಯೋಜನೆಗಳು ಮತ್ತು ನಗರಸಭೆಯಲ್ಲಿದ್ದ ಕಾಂಗ್ರೆಸ್ ನೇತೃತ್ವದ ಆಡಳಿತ ಮಾಡಿದ ಕೆಲಸಗಳು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ನೆರವಾಗುತ್ತವೆ. ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಕಾಂಗೆಸ್ ಕೊಡುಗೆಯನ್ನು ಮನದಟ್ಟು ಮಾಡಬೇಕು. ಚುನಾವಣೆಯನ್ನು ಉತ್ಸಾಹದಿಂದ ಎದುರಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ಮಾತನಾಡಿ, ಷಡಕ್ಷರಿ ಶಾಸಕರಾಗಿದ್ದಾಗ ನಗರದ ಸರ್ವತೋಮುಖ ಕೊಡುಗೆ ನೀಡಿದ್ದಾರೆ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮಧ್ಯಮ ಮತ್ತು ಬಡ ಜನರ ನೆರವಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರು. ಅನ್ನಭಾಗ್ಯ, ಕ್ಷೀರ ಭಾಗ್ಯ ಸೇರಿದಂತೆ ಹಲವರು ಭಾಗ್ಯ ಯೋಜನೆಗಳು ನಗರದ ಜನತೆಯ ನೆಮ್ಮದಿಯ ಬದುಕಿಗೆ ಸಹಕಾರಿಯಾಗಿವೆ. ಈ ಎಲ್ಲಾ ಕೊಡುಗೆಯನ್ನು ಮನದಟ್ಟು ಮಾಡಿ ಜನರ ಮನಸ್ಸು ಗೆಲ್ಲಬೇಕು ಎಂದರು.
ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಕಾಂತರಾಜ್ ಮಾತನಾಡಿ, ನಗರದಲ್ಲಿ ಕಾಂಗ್ರೆಸ್ ಆಡಳಿತ ಹಿಡಿಯಲು ಉತ್ತಮ ವಾತಾವರಣ ಇದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿರಂಜನ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶಿವಸ್ವಾಮಿ, ನಗರ ಕಾಂಗ್ರೆಸ್ ಅಧ್ಯಕ್ಷ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಟಿ.ಎನ್. ಪ್ರಕಾಶ್, ಎಪಿಎಂಸಿ ಅಧ್ಯಕ್ಷ ಲಿಂಗರಾಜು, ತಾಪಂ ಮಾಜಿ ಅಧ್ಯಕ್ಷ ಎನ್.ಎಂ. ಸುರೇಶ್, ಎಪಿಎಂಸಿ ಉಪಾಧ್ಯಕ್ಷ ಬಜಗೂರು ಮಂಜುನಾಥ್, ಕೆಪಿಸಿಸಿ ಸದಸ್ಯ ಯೋಗೀಶ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








