ಹರಿಹರ:
ನಮ್ಮ ನಡುವಿನ ಸಾಮಾಜಿಕ ವ್ಯವಸ್ಥೆಯನ್ನು ಜನರಿಗೆ ನೇರವಾಗಿ ಮುಟ್ಟಿಸುವ ಕಾರ್ಯವನ್ನು ನಾಟಕಗಳು ಮಾಡುತ್ತವೆ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಅಭಿಪ್ರಾಯಪಟ್ಟರು.
ತಾಲೂಕಿನ ಕಮಲಾಪುರ ಗ್ರಾಮದಲ್ಲಿ ಬಸವೇಶ್ವರ ನಾಟ್ಯ ಕಲಾಸಂಘದ ವತಿಯಿಂದ ಶ್ರೀ ಆಂಜನೇಯ ಸ್ವಾಮಿ ಹಾಗೂ ಬಸವೇಶ್ವರ ರಥೋತ್ಸವ ಮತ್ತು ರಂಗಕಲಾವಿದ ದಿ. ಬಾವಿಕಟ್ಟಿ ಚನ್ನಪ್ಪ ಅವರ ಸವಿನೆನಪಿಗಾಗಿ ಹಮ್ಮಿಕೊಂಡಿದ್ದ ತವರು ಮನೆ ಕುಂಕುಮ ನಾಟಕದ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾಟಕಗಳು ಕೇವಲ ಮನರಂಜನೆಯಲ್ಲ. ಬದಲಿಗೆ, ಅವು ಸಮಾಜದ ಅಂಕುಡೊಂಕುಗಳನ್ನು ಕೂಡಾ ತಿದ್ದುವ ಕಾರ್ಯ ಮಾಡುತ್ತದೆ. ಆದರೆ, ಇಂದು ಆಧುನಿಕತೆಯ ಭರದಲ್ಲಿ ನಾಟಕಗಳು, ರಂಗ ಕಲಾವಿದರೂ ನೈಪತ್ಯಕ್ಕೆ ಸರಿಯುತ್ತಿರುವ ಸಂದರ್ಭ ಗ್ರಾಮದಲ್ಲಿ ನಾಟಕ ಆಯೋಜಿಸಿರುವುದು ಶ್ಲಾಘನೀಯ. ಸ್ವಾತಂತ್ರ ಹೋರಾಟಗಾರರು, ನಾಟಕ, ಕಲೆ, ಸಾಹಿತ್ಯಕ್ಕೆ ಹೆಸರುವಾಸಿಯಾದ ಕಮಲಾಪುರದಲ್ಲಿ ಪ್ರತಿ ವರ್ಷವೂ ನಾಟಕ ನಡೆಯುವಂತಾಗಲಿ ಅಂದು ಅವರು ಆಶಿಸಿದರು.
ನಮ್ಮ ಮನೆ ಅಥವಾ ನನ್ನಿಂದ ಯಾವುದೇ ಸಂದೇಶ ಬಂದರೂ ಅದನ್ನು ಚಾಚುತಪ್ಪದೇ ಪಾಲಿಸುವ ಗ್ರಾಮವಾಗಿದ್ದು, ನಮ್ಮ ತಂದೆ (ದಿ. ಎಚ್. ಶಿವಪ್ಪ) ಅವರ ಕಾಲದಿಂದಲೂ ಕಮಲಾಪುರ ಗ್ರಾಮಸ್ಥರು ನಮ್ಮ ಮೇಲೆ ತೋರಿಸುತ್ತಿರುವ ಅಭಿಮಾನಕ್ಕೆ ನಾನು ಚಿರರುಣಿ ಎಂದ ಅವರು, ನನ್ನ ಅವಧಿಯಲ್ಲಿ ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆಯಡಿ ಸಂಪೂರ್ಣವಾಗಿ ಕಾಂಕ್ರೀಟಿಕರಣ ಮಾಡಿದ್ದು, ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ಬೇಕಾದ ಸವಲತ್ತುಗಳನ್ನು ಒದಗಿಸುತ್ತೇನೆ ಎಂದು ಅವರು ಭರವಸೆ ನೀಡಿದರು.
ಜಿಪಂ ಸದಸ್ಯರಾದ ಹೇಮಾವತಿ ಭೀಮಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿವಮೊಗ್ಗ ಹಾಲು ಒಕ್ಕೂಟ, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಗದೀಶಪ್ಪ ಬಣಕಾರ್, ತಾಪಂ ಸದಸ್ಯ ಕೆ.ಜಿ. ಕೊಟ್ರೇಶ್ಗೌಡ, ಮುಖಂಡರಾದ ಪರಮೇಶ್ವರ್ಗೌಡ್ರು ಮಾತನಾಡಿದರು. ಪ್ರಾಸ್ತಾವಿಕವಾಗಿ ಕೆ. ಈಶ್ವರಪ್ಪ ಮಾತನಾಡಿದರು. ಮಲ್ಲಿಕಾರ್ಜುನ್, ರಮೇಶ್ ಕೆ.ಬಿ., ಎಂ.ಎನ್. ಗಂಗಾಧರ, ಈಶ್ವರ್ ಮತ್ತಿತರರಿದ್ದರು.
ಚೈತ್ರಾ ಪ್ರಾರ್ಥಿಸಿದರು. ಪತ್ರಕರ್ತ ಗಣೇಶ್ ಕಮ್ಲಾಪುರ ಸ್ವಾಗತಿಸಿದರು. ಶಿಕ್ಷಕ ಮಹಾಂತೇಶ್ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
