ಸರ್ಕಾರಿ ಶಾಲೆಗಳಲ್ಲಿದೆ ಹಲವು ಸೌಲಭ್ಯಗಳು

ತುಮಕೂರು:

          ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಸಿಗುವ ಸವಲತ್ತು ಸೌಲಭ್ಯಗಳನ್ನು ಗಮನಿಸಿದರೆ ಇದೇ ಶಾಲೆಗೆ ದಾಖಲಿಸಬೇಕೆಂಬ ಹಂಬಲ ಉಂಟಾಗುವುದು ಸಹಜ. ಅಷ್ಟರ ಮಟ್ಟಿಗೆ ಸೌಲಭ್ಯಗಳು ಅಲ್ಲಿವೆ. ಒಬ್ಬ ವಿದ್ಯಾರ್ಥಿ ಆ ಶಾಲೆಗೆ ದಾಖಲಾದ ಕೂಡಲೇ ಉಚಿತ ಪಠ್ಯ ಪುಸ್ತಕಗಳು ಸಿಗುತ್ತವೆ. ಉಚಿತ ಬ್ಯಾಗ್, ಉಚಿತ ಶೂ, ಮಧ್ಯಾಹ್ನದ ಬಿಸಿಯೂಟ, ಹಾಲು, ಬಸ್‍ಪಾಸ್, ಹೆಣ್ಣು ಮಕ್ಕಳಿಗೆ ನ್ಯಾಪ್ಕಿನ್ ಇತ್ಯಾದಿ ಸೌಲಭ್ಯಗಳು ದೊರಕುತ್ತವೆ.

         ಹಿಂದೆಲ್ಲ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದವು. ಶಾಲೆಗಳಿಗೆ ಹೋಗುವಾಗ ರೊಟ್ಟಿ, ಮುದ್ದೆ ಮಾಡುವ ಮಡಕೆ ತಳದ ಸೀಕು ಇತ್ಯಾದಿ.. ಏನು ಸಿಗುತ್ತದೋ ಅದನ್ನು ತಿಂದು ಸಂಜೆ ವಾಪಸ್ ಮನೆಗೆ ಬಂದಾಗಲೇ ಊಟ ಮಾಡಬೇಕಾಗಿತ್ತು. ನಿಗದಿತ ಸಮಯಕ್ಕೆ ಉಪಹಾರ, ಊಟ ಸಿಗುತ್ತಿರಲಿಲ್ಲ. ಸಮಯ ಆಯಿತೆಂದು ಬಹಳಷ್ಟು ಮಕ್ಕಳು ಊಟೋಪಚಾರವಿಲ್ಲದೇ ಹೆಗಲಿಗೆ ಬ್ಯಾಗ್ ಏರಿಸಿಕೊಂಡು ಶಾಲೆಯತ್ತ ದೌಡಾಯಿಸುತ್ತಿದ್ದರು. ಇದರಿಂದ ಆಗಿನ ಕಾಲಕ್ಕೆ ಅಪೌಷ್ಟಿಕತೆ ಹೆಚ್ಚಿತ್ತು. ಈಗ ಹಾಲಿನಿಂದ ಹಿಡಿದು ಬಿಸಿಯೂಟದವರೆಗೆ ಶಾಲೆಯಲ್ಲಿಯೇ ಸಿಗುತ್ತಿರುವಾಗ ವಿದ್ಯಾರ್ಥಿಗಳ ಆರೋಗ್ಯವೂ ವೃದ್ಧಿಯಾಗುವುದರ ಜೊತೆಗೆ ಶೈಕ್ಷಣಿಕ ವ್ಯಾಸಂಗಕ್ಕೆ ಪೂರಕ ವಾತಾವರಣ ಸೃಷ್ಟಿಯಾಗಿದೆ.

       ಇದರ ಜೊತೆಗೆ ಉಚಿತ ಬೈಸಿಕಲ್, ಪ್ರವಾಸ, ಪ್ರತಿಭಾ ಕಾರಂಜಿ, ವಿವಿಧ ವಿದ್ಯಾರ್ಥಿ ವೇತನಗಳು, ಹಾಜರಾತಿ ಶಿಷ್ಯ ವೇತನ, ಹೆಚ್ಚು ಅಂಕ ಪಡೆದ ಟಾಪರ್‍ಗಳಿಗೆ ಲ್ಯಾಪ್‍ಟಾಪ್ ವಿತರಣೆ ಇಂತಹ ಅನೇಕ ಯೋಜನೆಗಳು ವಿದ್ಯಾರ್ಥಿಗಳಿಗೆ ಪೂರಕವಾಗಿವೆ. ವಿದ್ಯಾರ್ಥಿ ವೇತನಗಳು ಮಕ್ಕಳ ಇತರೆ ವೆಚ್ಚಗಳನ್ನು ಸರಿದೂಗಿಸಲು ಸಹಕಾರಿಯಾಗುತ್ತಿವೆ. ವಿಶೇಷವಾಗಿ ಇಂತಹ ಸವಲತ್ತುಗಳು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದು ಹೆಚ್ಚು ಅಂಕಗಳಿಸುವತ್ತ ಇವೆಲ್ಲವೂ ಪೂರಕ ವಾತಾವರಣ ಸೃಷ್ಟಿಸಿವೆ.

ಶಿಕ್ಷಕರಿಗೆ ತರಬೇತಿ:

        ಸರ್ಕಾರಿ ಶಾಲೆಗಳಲ್ಲಿ ಬೋಧನೆ ಮಾಡುವ ಶಿಕ್ಷಕರು ನಿಗದಿತ ವಿದ್ಯಾರ್ಹತೆಯೊಂದಿಗೆ ಕಾಲ ಕಾಲದ ತರಬೇತಿಗಳನ್ನು ಪಡೆಯುತ್ತಿದ್ದಾರೆ. ಪದವಿ ಮಾಡಿದವರೆಲ್ಲ ಶಿಕ್ಷಕರಾಗಲು ಅರ್ಹರಲ್ಲ. ಪದವಿಯ ಜೊತೆಗೆ ಉತ್ತಮ ಅಂಕ ಗಳಿಸಿರಬೇಕು. ಸರ್ಕಾರ ನಿಗದಿಪಡಿಸಿರುವ ಕೋರ್ಸ್ ಅಧ್ಯಯನ ಮಾಡಬೇಕು. ಟಿಇಟಿಯಲ್ಲಿ ರ್ಯಾಂಕ್ ಪಡೆಯಬೇಕು. ಸಿಇಟಿಯಲ್ಲಿ ಉತ್ತೀರ್ಣರಾಗಬೇಕು. ಇಷ್ಟೆಲ್ಲ ವಿವಿಧ ಹಂತದ ಪರೀಕ್ಷೆಗಳನ್ನು ದಾಟಿ ಬಂದ ನಂತರ ಅವರಿಗೆ ತರಬೇತಿಗಳನ್ನು ನೀಡಲಾಗುತ್ತದೆ. ಇತ್ತೀಚೆಗೆ ಶಿಕ್ಷಕರಿಗೆ ಸ್ಮಾರ್ಟ್ ಕ್ಲಾಸ್‍ಗಳ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ ಲ್ಯಾಪ್‍ಟಾಪ್ ಖರೀದಿಸುವ ಅವಕಾಶ ಕಲ್ಪಿಸಲಾಗಿದೆ. ವಿಷಯವಾರು ತರಬೇತಿ ನೀಡಲು ಮಾಸ್ಟರ್ ಟ್ರೈನರ್‍ಗಳನ್ನು ಸಿದ್ಧಪಡಿಸಲಾಗುತ್ತಿದೆ.

       ಸರ್ಕಾರಿ ಶಾಲೆಯಲ್ಲಿ ಬೋಧನೆ ಮಾಡಬೇಕೆಂದರೆ ಶಿಕ್ಷಕನಾದವನು ಮೇಲ್ಕಂಡಂತೆ ಈ ಎಲ್ಲ ಅರ್ಹತೆಗಳನ್ನು ಹೊಂದಿರಬೇಕು. ಇಂತಹ ಅರ್ಹತೆಗಳು ಖಾಸಗಿ ಶಾಲೆಗಳಲ್ಲಿ ಸಿಗುವುದು ಕಡಿಮೆಯೇ. ಖಾಸಗಿ, ಅನುದಾನರಹಿತ ಶಾಲೆಗಳಲ್ಲಿ ಶೈಕ್ಷಣಿಕ ಅರ್ಹತೆಗಳಿಗಿಂತ ಮೇಲ್ನೋಟದ ಆಕರ್ಷಣೆಯೇ ಹೆಚ್ಚಿರುತ್ತದೆ. ಇಲ್ಲಿ ಬೋಧನೆ ಮಾಡುವವರು ಯಾರು ಬೇಕಾದರೂ ಆಗಿರಬಹುದು. ಸರ್ಕಾರ

       ನಿಗದಿಪಡಿಸಿರುವ ಎಲ್ಲ ಅರ್ಹತೆಗಳೂ ಇರಲೇಬೇಕೆಂದೇನೂ ಇಲ್ಲ. ಖಾಸಗಿ ಶಾಲೆಗಳು ನೀಡುವ ಸಂಬಳಕ್ಕೆ ಅಂತಹವರು ಬರುತ್ತಾರೆಂಬ ನಂಬಿಕೆಯೂ ಇಲ್ಲ. ಇರುವಷ್ಟು ದಿನಗಳ ಕಾಲ ಅಲ್ಲಿ ದುಡಿದು ಬೇರೆ ಕಡೆ ವಲಸೆ ಹೋಗುವ ಶಿಕ್ಷಕರೇ ಹೆಚ್ಚು. ಇಲ್ಲಿ ನಡೆಯುವ ಶೋಷಣೆಗೆ ಪರಿಹಾರವಂತೂ ಸಿಗದು. ಆದರೆ ಸರ್ಕಾರಿ ಶಾಲೆಗಳಿಗಿಂತ ದುಪ್ಪಟ್ಟು ಗಮನ ಸೆಳೆಯುವ ಸೌಲಭ್ಯಗಳು ಇಲ್ಲಿ ಕಾಣಸಿಗುತ್ತವೆ. ಅವರ ರೂಲ್ಸ್, ರೆಗ್ಯುಲೇಷನ್‍ಗಳಲ್ಲಿ ಪೋಷಕ ವರ್ಗ ಬಂಧಿಯಾಗಿ ಬಿಡುತ್ತದೆ.

      ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಈ ಹಿಂದೆ ಇದ್ದಷ್ಟು ಬಿಡುವು ಈಗ ಇಲ್ಲ. ಜವಾಬ್ದಾರಿಗಳು ಹೆಚ್ಚು. ಉತ್ತಮ ಫಲಿತಾಂಶ ಬರುವಂತೆ ನೋಡಿಕೊಳ್ಳುವುದರಿಂದ ಹಿಡಿದು ಆಡಳಿತಾತ್ಮಕ ವ್ಯವಸ್ಥೆಯ ಆಗು ಹೋಗುಗಳ ಗಮನ ಹರಿಸಬೇಕಾದ ಹೊಣೆಗಾರಿಕೆ ಇದೆ. ಹೀಗಾಗಿ ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸುತ್ತಿರುವ ಶಿಕ್ಷಕ ಸಮೂಹಕ್ಕೆ ತನ್ನ ಶಾಲೆ ಮಾದರಿಯಾಗಿರಬೇಕು, ಹೆಚ್ಚು ಫಲಿತಾಂಶ ಬರಬೇಕು ಎಂಬ ಆಸೆ ಸಹಜವಾಗಿ ಚಿಗುರೊಡೆಯುತ್ತಿದೆ. ಅದಕ್ಕೆ ಪೂರಕವಾಗಿಯೇ ಚಟುವಟಿಕೆಗಳನ್ನು ರೂಪಿಸಿಕೊಳ್ಳಲಾಗುತ್ತಿದೆ.

         ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮೂಲಕ (ಡಯಟ್) ಕಾಲಕಾಲಕ್ಕೆ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ವಿಷಯವಾರು ತರಬೇತಿಗಳಿಗೆ ಒತ್ತು ನೀಡಲಾಗುತ್ತದೆ. ಇದಕ್ಕಾಗಿಯೇ ವಿಶೇಷ ಯೋಜನೆಗಳು ಸರ್ಕಾರದಿಂದ ರೂಪಿತಗೊಂಡಿವೆ. ಶಿಕ್ಷಕರಿಗೆ ತರಬೇತಿ ಕೊಡಲೆಂದೇ ಡಯಟ್ ಹೆಚ್ಚು ಉತ್ಸುಕವಾಗಿದ್ದು, ಅಲ್ಲಿ ನೀಡುವ ಬೋಧನಾ ಕ್ರಮಗಳು, ತರಬೇತಿಗಳು ಸಹ ಶಿಕ್ಷಕರ ಕ್ರಿಯಾಶೀಲತೆಗೆ ಸಹಕಾರಿಯಾಗಿವೆ.

ನಿಕಟ ಸಂಬಂಧ:

       ಸರ್ಕಾರಿ ಶಾಲೆಗಳಿಗೆ ಬರುವ ಶಿಕ್ಷಕರನ್ನು ಆ ಗ್ರಾಮದ ಎಲ್ಲರೂ ಗಮನಿಸಿರುತ್ತಾರೆ. ವೈಯಕ್ತಿಕವಾಗಿ ಪರಿಚಯವಿರುತ್ತದೆ. ಶಿಕ್ಷಕ ಸತತವಾಗಿ ಗೈರು ಹಾಜರಾದರೆ ಪೋಷಕರು ಪ್ರಶ್ನಿಸುತ್ತಾರೆ. ಕಳಪೆ ಫಲಿತಾಂಶ ಬಂದರೆ ಬೇರೆ ಕಡೆ ಮಕ್ಕಳನ್ನು ದಾಖಲಿಸುವ ಎಚ್ಚರಿಕೆ ನೀಡುತ್ತಾರೆ. ಇದಷ್ಟೇ ಅಲ್ಲ, ಆ ಊರಿನ ಜನತೆ ಮತ್ತು ಶಿಕ್ಷಕರೊಂದಿಗೆ ಅವಿನಾಭಾವ ಸಂಬಂಧ ಇರುತ್ತದೆ. ಪ್ರೀತಿ, ಎಚ್ಚರಿಕೆ, ಸಲಹೆ, ಆತಂಕ ಇವೆಲ್ಲವೂ ಶಿಕ್ಷಕ ವರ್ಗದಲ್ಲಿ ಸಮ್ಮಿಳಿತವಾಗಿರುತ್ತವೆ. ಶಾಲೆಗಳಿಗೆ ನೇರವಾಗಿ ಹೋಗುವ, ಪ್ರಶ್ನಿಸುವ ಅಧಿಕಾರ ಅಲ್ಲಿನ ಜನತೆಗೆ ಇದ್ದೇ ಇರುತ್ತದೆ. ಖಾಸಗಿ ಶಾಲೆಗಳಿಗೆ ಹೋಗಬೇಕಾದರೆ ಗೇಟ್‍ನಲ್ಲಿಯೇ ನಿಲ್ಲಬೇಕು. ಅಲ್ಲಿನ ದ್ವಾರಪಾಲಕರ ಅನುಮತಿ ಪಡೆದು ಒಳಗೆ ಹೋಗಬೇಕು. ಪ್ರತಿಯೊಂದಕ್ಕೂ ನಿಬಂಧನೆಗಳಿರುತ್ತವೆ. ಅವೆಲ್ಲವನ್ನು ಒಪ್ಪಿಕೊಳ್ಳಬೇಕು. ಒಳಗೆ ಏನು ನಡೆಯುತ್ತದೆ ಎಂಬುದು ತಿಳಿಯುವುದೇ ಇಲ್ಲ. ಪೋಷಕರ ಸಭೆ ಕರೆದಾಗ ಹಾಜರಾಗಬೇಕು. ಸರ್ಕಾರಿ ಶಾಲೆಗಳಲ್ಲಾದರೆ ಈ ಯಾವ ನಿಬಂಧನೆಗಳು ಇಲ್ಲ. ನಿತ್ಯವೂ ಶಾಲೆಗೆ ಹೋಗಬಹುದು, ಮಕ್ಕಳ ಶೈಕ್ಷಣಿಕ ಚಟುವಟಿಕೆ ವಿಚಾರಿಸಬಹುದು. ಇವೆಲ್ಲವೂ ಮಕ್ಕಳ ವ್ಯಾಸಂಗಕ್ಕೆ ಪೂರಕವಾದ ವಾತಾವರಣ.

ಶಿಕ್ಷಕರಲ್ಲಿ ಬದ್ಧತೆ:

      ಸರ್ಕಾರದ ಮಾರ್ಗಸೂಚಿಗಳು, ಕಟ್ಟುನಿಟ್ಟಿನ ಆದೇಶಗಳು ಏನೆಲ್ಲಾ ಇರಬಹುದು. ಆದರೆ ಶಿಕ್ಷಕ ವರ್ಗದಲ್ಲಿ ಒಂದು ಬದ್ಧತೆಯಂತೂ ಇದ್ದೇ ಇದೆ. ನಾನು ಸರ್ಕಾರದ ಋಣದಲ್ಲಿದ್ದೇನೆ. ಸರ್ಕಾರದ ಅನ್ನ ತಿನ್ನುತ್ತಿದ್ದೇನೆ ಎನ್ನುವ ಅರಿವು ಆ ವರ್ಗಕ್ಕೆ ಇದೆ. ದಿನನಿತ್ಯ ರೈತಾಪಿ ವರ್ಗ ಪಡುತ್ತಿರುವ ಕಷ್ಟಗಳನ್ನು ಹತ್ತಿರದಿಂದ ನೋಡುತ್ತಾರೆ. ಅವರ ಮಕ್ಕಳ ಸ್ಥಿತಿಗತಿಗಳೇನು ಎಂಬುದು ಚೆನ್ನಾಗಿ ಗೊತ್ತು. ನಾವಿಂದು ಇದ್ದುದರಲ್ಲಿ ಇವರಿಗಿಂತ ಉತ್ತಮ ಸ್ಥಿತಿಯಲ್ಲಿದ್ದೇವೆ. ಇರುವಷ್ಟು ಅವಧಿಯಲ್ಲಿ ಪ್ರಾಮಾಣಿಕ ಕರ್ತವ್ಯ ನಿಭಾಯಿಸಬೇಕೆಂಬ ಎಚ್ಚರಿಕೆ ಮೂಡುವುದರಿಂದಲೇ ಹೆಚ್ಚು ಜಾಗೃತನಾಗುತ್ತಿದ್ದಾನೆ.

      ಖಾಸಗಿ ಶಾಲೆಗಳತ್ತ ವಿದ್ಯಾರ್ಥಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚು ಆಕರ್ಷಿತರಾಗುತ್ತಿರುವುದು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಪ್ರಮಾಣ ಕುಸಿತವಾಗುತ್ತಿದೆ. ಇದು ಶಿಕ್ಷಕ ವರ್ಗದಲ್ಲಿ ಹೆಚ್ಚು ಆತಂಕಕ್ಕೆ ಕಾರಣವಾಗಿದೆ. ಹೀಗೆಯೇ ಮುಂದುವರೆದರೆ ಖಾಸಗಿ ಶಾಲೆಗಳ ಪ್ರಭಾವದಿಂದಾಗಿ ಸರ್ಕಾರಿ ಶಾಲೆಗಳಿಗೆ ಧಕ್ಕೆಯಾಗಬಹುದು, ಆ ಮೂಲಕ ನಮ್ಮ ಭವಿಷ್ಯಕ್ಕೂ ಕುತ್ತು ಬೀಳಬಹುದು ಎಂಬ ಆತಂಕ ಸರ್ಕಾರಿ ವಲಯದ ಶಿಕ್ಷಕ ಸಮೂಹದಲ್ಲಿ ಮನೆಮಾಡಿದೆ. ಈ ಪ್ರಜ್ಞೆಯೂ ಶಿಕ್ಷಕರೂ ಹೆಚ್ಚು ಜಾಗೃತರಾದರು ಒಂದು ಕಾರಣ ಎನ್ನಬಹುದು.

ಪರೀಕ್ಷಾ ಕ್ರಮ

      ಮಕ್ಕಳ ಓದಿಗೆ ಈಗ ಗ್ರಾಮೀಣ ಪ್ರದೇಶಗಳಲ್ಲಿಯೂ ಪೂರಕ ವಾತಾವರಣ ಸೃಷ್ಟಿಯಾಗುತ್ತಿದೆ. ಶಾಲೆಗಳು ಆರಂಭವಾದಾಗಿನಿಂದ ಹಿಡಿದು ಪರೀಕ್ಷೆಗಳು ಹತ್ತಿರ ಬರುವ ತನಕ ಎಲ್ಲರೂ ಮಕ್ಕಳ ಬಗ್ಗೆ ನಿಗಾ ವಹಿಸುತ್ತಾರೆ. ಶಿಕ್ಷಕರಂತೆಯೇ ಪೋಷಕರೂ ಈಗ ಹಿಂದೆ ಬೀಳುತ್ತಿಲ್ಲ. ಅಂದಿನ ಆ ದಿನಗಳೇ ಬೇರೆ, ಇಂದಿನ ಸ್ಪರ್ಧಾತ್ಮಕ ಯುಗವೇ ಬೇರೆ. ಪೋಷಕರಿಗೂ ಇಂದಿನ ಜಗತ್ತು ಅರ್ಥವಾಗುತ್ತಿದೆ.
ಹಿಂದಿನ ದಿನಗಳಲ್ಲಿ ಪರೀಕ್ಷೆ ಬರೆಯುವ ಮಕ್ಕಳಿಗೆ ಹೀಗೆಯೇ ಪರೀಕ್ಷೆ ಬರೆಯಬೇಕೆಂಬ ವಿಧಾನಗಳನ್ನು ಕಲಿಸಿಕೊಡುತ್ತಿದುದು ಕಡಿಮೆಯೇ.

      ಶಾಲೆಗಳಲ್ಲಿ ಶಿಕ್ಷಕರು ಒಂದಿಷ್ಟು ಮಾಹಿತಿ ಕೊಡುತ್ತಿದುದನ್ನು ಹೊರತುಪಡಿಸಿದರೆ ಬೇರೆಲ್ಲೂ ಮಾಹಿತಿಗಳು ಸಿಗುತ್ತಿರಲಿಲ್ಲ. ಇತ್ತೀಚೆಗಂತೂ ಪರೀಕ್ಷೆ ಎದುರಿಸುವುದು ಹೇಗೆ, ಪರೀಕ್ಷಾ ಭಯ ನಿವಾರಣೆ ಹೇಗೆ ಎಂಬ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿಗಳು ಲಭ್ಯವಾಗುತ್ತಿವೆ. ಓದಿದ ವಿಷಯವನ್ನು ಮನದಟ್ಟು ಮಾಡಿಕೊಳ್ಳುವ ಬಗೆಯಿಂದ ಹಿಡಿದು ಪರೀಕ್ಷೆ ಬರೆಯುವ ತನಕ ಹೇಗೆ ಮನಸ್ಸನ್ನು ಜಾಗೃತವಾಗಿಟ್ಟು ಕೊಳ್ಳಬೇಕು ಎಂಬ ಮಾಹಿತಿ ಈಗ ವಿದ್ಯಾರ್ಥಿಗಳಿಗೆ ದೊರಕುತ್ತಿದೆ. ಕೆಲವು ಸಂಘ ಸಂಸ್ಥೆಗಳು ಈ ಬಗ್ಗೆ ತರಬೇತಿ ನೀಡಿದರೆ ಮಾಧ್ಯಮ ಗಳಲ್ಲಂತೂ ಈ ವಿಷಯದ ಬಗ್ಗೆ ಹೆಚ್ಚು ಲೇಖನಗಳು ಪ್ರಕಟವಾಗುತ್ತಿವೆ. ಮನೋವೈದ್ಯರಿಂದ ಹಿಡಿದು ಆಪ್ತ ಸಮಾಲೋಚಕರ ವರೆಗೆ , ಮಾರ್ಗದರ್ಶಿ ಶಿಕ್ಷಕರಿಂದ ಹಿಡಿದು ವಿಷಯಾಧಾರಿತ ಶಿಕ್ಷಕರವರೆಗೆ ತರಾವರಿ ವಿಧಾನಗಳು ಈಗ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿವೆ. ಶಾಲೆಗಳಲ್ಲಿ ಶಿಕ್ಷಕರು ಬೋಧನೆ ಮಾಡುವಾಗಲೂ ಪ್ರಸ್ತಾಪವಾಗುತ್ತದೆ. ಹೀಗಾಗಿ ಪರೀಕ್ಷಾ ಸಂದರ್ಭಗಳಲ್ಲಿ ಎದುರಾಗುವ ಭಯ ಈಗ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.

ಮಕ್ಕಳಲ್ಲಿ ಜಾಗೃತಿ:

       ಗ್ರಾಮೀಣ ಪ್ರದೇಶದ ಮಕ್ಕಳು ಇಂದು ಸ್ಪರ್ಧಾತ್ಮಕ ಜಗತ್ತಿಗೆ ಒಗ್ಗಿಕೊಳ್ಳುತ್ತಿದ್ದಾರೆ. ಕೀಳರಿಮೆ ಮರೆಯಾಗುತ್ತಿದೆ. ನಾನೂ ನಗರದವರಂತೆ ಆಗಬೇಕು. ಅವರಂತೆ ಬೆಳೆಯಬೇಕು, ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಎಂಬ ಹಂಬಲ ಎಲ್ಲ ಮಕ್ಕಳಲ್ಲಿಯೂ ಮೂಡುತ್ತಿದೆ. ಅದಕ್ಕೆ ತಕ್ಕಂತೆ ಪರಿಶ್ರಮ ಹಾಕುತ್ತಿದ್ದಾರೆ. ಗ್ರಾಮೀಣ ಜನಜೀವನದ ಬದುಕಿನ ಇತರೆ ಒತ್ತಡಗಳ ನಡುವೆಯೂ ಶೈಕ್ಷಣಿಕ ಚಟುವಟಿಕೆಯತ್ತ ಹೆಚ್ಚು ಗಮನ ಹರಿಸುತ್ತಿದ್ದಾನೆ. ಈ ಕ್ರಿಯಾಶೀಲತೆ ಮಕ್ಕಳಲ್ಲಿ ಶೈಕ್ಷಣಿಕ ಚಟುವಟಿಕೆಗೆ ಆಸಕ್ತಿ ಮೂಡಿಸುತ್ತಿದೆ. ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಶೈಕ್ಷಣಿಕ ಆಸಕ್ತಿ, ಸ್ಪರ್ಧೆಗೆ ಒಡ್ಡಿಕೊಳ್ಳುವ ಛಲಗಾರಿಕೆ, ಮುಂದಿನ ಭವಿಷ್ಯ ರೂಪಿಸಿಕೊಳ್ಳುವ ಮನೋಸ್ಥಿತಿ, ಮರೆಯಾದ ಕೀಳರಿಮೆ ಇವೆಲ್ಲವೂ ಉತ್ತಮ ಸಾಧನೆಗೆ ಪ್ರೇರಣೆಯಾಗಿ ನಿಲ್ಲುತ್ತಿವೆ.

        ಕಂಪ್ಯೂಟರ್, ಮೊಬೈಲ್‍ಗಳ ಬಳಕೆ, ಸಮೂಹ ಮಾಧ್ಯಮಗಳ ಅರಿವು ಈಗ ಎಲ್ಲ ವರ್ಗಕ್ಕೂ ವಿಸ್ತರಿಸಿದೆ. ಮಕ್ಕಳ ವಿದ್ಯಾಭ್ಯಾಸ ಪ್ರೋತ್ಸಾಹಕ್ಕೆ ಸರ್ಕಾರವಷ್ಟೇ ಅಲ್ಲ, ಇತರೆ ಸಂಘ ಸಂಸ್ಥೆಗಳೂ ಸಹಕಾರಿಯಾಗಿವೆ. ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ವೇತನಗಳು ಲಭ್ಯವಾಗುತ್ತಿವೆ. ಸರ್ಕಾರದ ವಿದ್ಯಾರ್ಥಿ ವೇತನದ ಜೊತೆಗೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಹಲವಾರು ಬಗೆಯ ವೇತನಗಳು ಈಗ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿವೆ.

       ವಿದ್ಯಾರ್ಥಿಗಳಿಗೆ ನೆರವಾಗಲೆಂದೇ ಸಾಕಷ್ಟು ಸಂಖ್ಯೆಯ ಸಂಸ್ಥೆಗಳು ಹುಟ್ಟಿಕೊಂಡಿವೆ. ಸ್ಕಾಲರ್ ಶಿಪ್ ದೊರಕಿಸಿಕೊಳ್ಳುವ ಜೊತೆಗೆ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಹೆಚ್ಚಿನ ಅಂಕ ಪಡೆಯುವ ಅನಿವಾರ್ಯತೆಗೆ ವಿದ್ಯಾರ್ಥಿಗಳು ಸಿಲುಕಿದ್ದಾರೆ.ಮಕ್ಕಳಂತೆ ಪೋಷಕರೂ ಜಾಗೃತರಾಗಿದ್ದಾರೆ. ವ್ಯವಸಾಯವನ್ನೇ ನಂಬಿ ಬದುಕುವ ಕಾಲ ಈಗ ಇಲ್ಲ. ಎಕರೆಗಟ್ಟಲೇ ಕೃಷಿ ಜಮೀನು ಹೊಂದಿ ಬದುಕುತ್ತಿದ್ದವರು ಇಂದು ಕೈಚೆಲ್ಲಿ ಕುಳಿತಿದ್ದಾರೆ. ಕೃಷಿಯಿಂದ ಯಾವತ್ತೂ ನಷ್ಟವೆ ಎಂಬ ಅರಿವಾಗಿ ಮಕ್ಕಳಾದರೂ ಹೊರಗೆ ಹೋಗಿ ದುಡಿದು ತಿನ್ನಲಿ ಎಂಬ ಅಭಿಲಾಷೆ ಅವರಲ್ಲ್ಲಿ ಮೂಡಿದೆ. ಹೀಗಾಗಿಯೇ ಮಕ್ಕಳ ಬಗ್ಗೆ, ಶಿಕ್ಷಣದ ಬಗ್ಗೆ, ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಮಕ್ಕಳನ್ನು ತಮ್ಮ ಕೃಷಿ ಚಟುವಟಿಕೆಗೆ ಬಳಸಿಕೊಳ್ಳದೆ, ಇತರೆ ಕೆಲಸ ಕಾರ್ಯಗಳಿಗೆ ಹಚ್ಚದೇ ಓದಿಗೆ ಸಹಕರಿಸುತ್ತಿದ್ದಾರೆ.

       ಗ್ರಾಮೀಣ ಪ್ರದೇಶಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಕಲಿಕಾ ಬೋಧನೆಯ ಜೊತೆ ಜೊತೆಯಲ್ಲೇ ವಾಸ್ತವ ಚಿತ್ರಣದ ಅರಿವು ಇರುತ್ತದೆ. ತಾನು ಶಾಲೆಯಲ್ಲಿ ಕಲಿಯುವ ಹಲವು ವಿಷಯಗಳು ತನ್ನ ದೈನಂದಿನ ಕೃಷಿ ಚಟುವಟಿಕೆಗಳಲ್ಲಿ ಹತ್ತಿರದಿಂದ ಕಂಡಿರುವ, ನೋಡಿರುವ ವಿಷಯಗಳಾಗಿರುವುದರಿಂದ ಬಹು ಬೇಗನೆ ಅರ್ಥವಾಗುತ್ತದೆ. ನಗರ ಪ್ರದೇಶದ ಮಕ್ಕಳಿಗೆ ಗ್ರಾಮೀಣ ಸೊಗಡಿನ ಚಿತ್ರಣವನ್ನು ಬಿಡಿ ಬಿಡಿಯಾಗಿ ವಿವರಿಸಬೇಕು. ಆದರೂ ಅರ್ಥವಾಗದು. ಗ್ರಾಮೀಣ ಮಕ್ಕಳಿಗೆ ಇದೆಲ್ಲ ಅತ್ಯಂತ ಸುಲಭವಾದ ಸಂಗತಿ. ಬೋಧನೆಯ ಪಾಠದ ಜೊತೆಗೆ ಪ್ರಾಯೋಗಿಕ ಅನುಭವವೂ ಇರುವುದರಿಂದ ಪಠ್ಯ ವಿಷಯಗಳು ಬಹು ಬೇಗನೆ ಮನಸ್ಸಿಗೆ ನಾಟುತ್ತವೆ. ಹೆಚ್ಚು ಜ್ಞಾನಾರ್ಜನೆಗೆ ಇದು ಪೂರಕ. ರಾಗಿ ಬೆಳೆಯುವುದರಿಂದ ಹಿಡಿದು ಇತರೆ ದವಸ ಧಾನ್ಯಗಳ ಕೃಷಿ ಚಟುವಟಿಕೆ, ತೋಟಗಾರಿಕೆ, ಹೈನುಗಾರಿಕೆ, ಹಣ್ಣು ಹಂಪಲು ಇತ್ಯಾದಿ ವಿಷಯಗಳು ಗ್ರಾಮೀಣ ಮಕ್ಕಳಿಗೆ ವಿವರಿಸಿ ಹೇಳಬೇಕಿಲ್ಲ.

        ಹಸಿವು, ಬಡತನ, ಶ್ರಮವನ್ನು ಹತ್ತಿರದಿಂದ ನೋಡುವ ಗ್ರಾಮೀಣ ಮಕ್ಕಳಿಗೆ ಬದುಕಿನ ಛಲ ಮೂಡದೇ ಇರದು. ಶ್ರಮದ ಹಾದಿಯಲ್ಲಿಯೇ ಶಿಕ್ಷಣ ಪಡೆಯುವ ಮಕ್ಕಳಿಗೆ ಮುಂದಿನ ಭವಿಷ್ಯ ತುಂಬಾ ಪ್ರಮುಖವಾಗುತ್ತದೆ. ಬದುಕಿನ ಕಲೆಯನ್ನು ಕಲಿಯುವ ಮಕ್ಕಳು ಭವಿಷ್ಯವನ್ನು ರೂಪಿಸಿಕೊಳ್ಳಲು ಮುಂದಾಗುತ್ತಾರೆ. ಇದೇ ಹಾದಿಯಲ್ಲಿ ಉತ್ತಮ ಅಂಕ ಗಳಿಸಲು ಪ್ರಯತ್ನಿಸುತ್ತಾರೆ. ಹೀಗಾಗಿ ಸೋಮಾರಿತನ ಎಂಬುದು ಅವರ ಮುಂದೆ ಸುಳಿಯಲು ಸಾಧ್ಯವಾಗದು.

        ಮಕ್ಕಳು ಹಾಗೂ ಪೋಷಕರಿಗೆ ಈಗ ಸಮೂಹ ಮಾಧ್ಯಮಗಳು ಹೆಚ್ಚು ಪರಿಣಾಮಕಾರಿಯಾಗಿ ಕಾಣುತ್ತಿವೆ. ಪ್ರಪಂಚದ ವಿದ್ಯಮಾನಗಳು ಅರ್ಥವಾಗುತ್ತಿವೆ. ಎಂತಹ ಕುಗ್ರಾಮಗಳಲ್ಲೂ ಈಗ ಟಿ.ವಿ.ಗಳು ಬಂದು ಕುಳಿತಿವೆ. ಪತ್ರಿಕೆಗಳು ತಲುಪದ ಜಾಗ ಈಗ ಇಲ್ಲ. ಅದಕ್ಕಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳ ಬಳಕೆ ಎಲ್ಲೆಲ್ಲಿಯೂ ಪಸರಿಸಿದೆ. ದಿನೇ ದಿನೇ ಮುಂದುವರಿಯುತ್ತಿರುವ ಈ ಸ್ಪರ್ಧಾತ್ಮಕ ಜಗತ್ತಿಗೆ ಹೊಂದಿಕೊಳ್ಳುವ ಪರಿಕಲ್ಪನೆ ಮೂಡಿಸುವಲ್ಲಿ ವಿವಿಧ ಮಾಧ್ಯಮಗಳು ಈ ಸಮುದಾಯಕ್ಕೆ ಸಹಕಾರಿಯಾಗಿವೆ ಎನ್ನುವುದರಲ್ಲಿ ಅತಿಶಯೋಕ್ತಿ ಇಲ್ಲ.

         ಸರ್ಕಾರಿ ಶಾಲೆಗಳನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ವಿಷಯವಾರು ಆಧಾರಿತ ಶೈಕ್ಷಣಿಕ ಕಾರ್ಯಾಗಾರಗಳನ್ನು ನಡೆಸುತ್ತಿದ್ದು ಇಂತಹ ವಿಷಯಗಳಿಗೆ ಇಲಾಖೆ ಹಾಗೂ ಶೈಕ್ಷಣಿಕ ಸಂಘಟನೆಗಳು ಹೆಚ್ಚು ಒತ್ತು ನೀಡುವ ಅಗತ್ಯವಿದೆ. ಗಣಿತ, ವಿಜ್ಞಾನ, ಇಂಗ್ಲಿಷ್ ಇಂತಹ ವಿಷಯಗಳು ಇಂದಿಗೂ ಕೆಲವರಿಗೆ ಕಬ್ಬಿಣದ ಕಡಲೆ ಎನ್ನುವ ಮಾತಿದೆ. ಶಿಕ್ಷಕರು ಈ ನಿಟ್ಟಿನಲ್ಲಿ ಮತ್ತಷ್ಟು ಕ್ರಿಯಾಶೀಲರಾಗಬೇಕಿದೆ. ಯಾವ ವಿಷಯಗಳು ವಿದ್ಯಾರ್ಥಿಗಳಿಗೆ ಕಷ್ಟಕರ ಎಂಬುದು ಇಲಾಖೆಗೆ ತಿಳಿದಿರುತ್ತದೆ. ಅಂತಹ ವಿಷಯಗಳ ವಿಶೇಷ ಬೋಧನೆಯತ್ತ ಹೆಚ್ಚು ಗಮನ ಹರಿಸಬೇಕಿದೆ. ಶಿಕ್ಷಣ ಇಲಾಖೆಯು ಶಿಕ್ಷಕರು ಹಾಗೂ ಮಕ್ಕಳಿಗೆ ಸೇತುಬಂಧವಾಗಿ ಕಾರ್ಯನಿರ್ವಹಿಸಬೇಕು. ಆಗಾಗ್ಗೆ ಸಭೆ, ತರಬೇತಿ ಮತ್ತು ಕಾರ್ಯಾಗಾರಗಳು ಹೆಚ್ಚು ಉಪಯುಕ್ತವಾಗಬಲ್ಲವು. ಸರ್ಕಾರಿ ಶಾಲೆಗಳಲ್ಲಿ ಬೋಧಿಸುವ ಶಿಕ್ಷಕರು ಸಮರ್ಥರಿರುತ್ತಾರೆ. ಅವರ ಆ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳುವುದೇ ಮುಂದಿರುವ ದಾರಿ.

ವಲಸೆ ತಡೆಯಬೇಕಿದೆ:-

        ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳು ಉತ್ತಮ ಫಲಿತಾಂಶ ಬಂದಷ್ಟೂ ಆ ಶಾಲೆಗಳತ್ತ ಪೋಷಕರ ಗಮನ ಹರಿಯಲು ಸಾಧ್ಯವಾಗುತ್ತದೆ. ದಿನೇ ದಿನೇ ಹೆಚ್ಚುತ್ತಿರುವ ನಗರೀಕರಣದಿಂದಾಗಿ ಪಟ್ಟಣ ಪ್ರದೇಶಗಳಲ್ಲಿ ಶಾಲಾ ಕಾಲೇಜುಗಳು ಗಲ್ಲಿಗಲ್ಲಿಗಳಲ್ಲಿ ಆರಂಭವಾಗುತ್ತಿವೆ. ಶಿಕ್ಷಣ ನಗರ ಕೇಂದ್ರೀತವಾಗುತ್ತಿದೆ. ಮಕ್ಕಳು ಹಳ್ಳಿಯಿಂದ ನಗರ ಪ್ರದೇಶಗಳಿಗೆ ವಲಸೆ ಬರುತ್ತಿರುವುದರಿಂದ ಶಿಕ್ಷಣವು ದುಬಾರಿಯಾಗುತ್ತಿದೆ. ಅತ್ತ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಶ್ರಮಿಸಿದರೂ ಪ್ರಯೋಜನಕ್ಕೆ ಬಾರದಂತಾಗುತ್ತಿದೆ. ನಮ್ಮ ಮುಂದೆ ಇರುವ ಈಗಿನ ದೊಡ್ಡ ಸವಾಲೆಂದರೆ ಗ್ರಾಮೀಣ ಮಕ್ಕಳು ಅಲ್ಲಿನ ಶಾಲೆಗಳಲ್ಲಿಯೇ ಕಲಿಯುವಂತಾಗುವುದು. ಆ ಮೂಲಕ ನಗರ ಪ್ರದೇಶಕ್ಕೆ ವಲಸೆ ಬರುವುದನ್ನು ತಡೆಯುವುದು.

         ನಗರಗಳಿಂದು ಅನೇಕ ಸಮಸ್ಯೆಗಳ ಬೀಡಾಗಿವೆ. ರೋಗರುಜಿನಗಳು ಅಂಟಿಕೊಳ್ಳುತ್ತಿವೆ. ನಗರದಲ್ಲಿರುವವರು ಹಳ್ಳಿ ವಾತಾವರಣ ಅಪೇಕ್ಷಿಸುತ್ತಿದ್ದರೆ, ಹಳ್ಳಿಗಳಲ್ಲಿರುವವರು ನಗರಕ್ಕೆ ಬಂದು ಸೇರುತ್ತಿದ್ದಾರೆ. ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ನಗರಕ್ಕೆ ಬರುತ್ತಿರುವುದರಿಂದಲೇ ವಿವಿಧ ಸಮಸ್ಯೆಗಳು ಉಲ್ಬಣಗೊಳ್ಳಲು ಕಾರಣವಾಗುತ್ತಿದೆ. ಪರಿಸರ ಅನೈರ್ಮಲ್ಯ, ಕುಡಿಯುವ ನೀರಿನ ಸಮಸ್ಯೆ, ಉತ್ತಮ ಆಹಾರ ದೊರಕದೇ ಇರುವುದು ಇತ್ಯಾದಿಗಳಿಂದಾಗಿ ಬದುಕು ಏರುಪೇರಾಗುತ್ತಿದೆ. ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಇದೇ ಕಾರಣದಿಂದ. ನಗರ ಪ್ರದೇಶಗಳಲ್ಲಿರುವ ಮಕ್ಕಳು ದಷ್ಟಪುಷ್ಟವಾಗಿ ಬೆಳೆದಿರಬಹುದು. ನೋಡಲು ಅಂದವಾಗಿ ಕಾಣಬಹುದು. ಗ್ರಾಮೀಣ ಮಕ್ಕಳು ಸಣ್ಣಗಿದ್ದರೂ ಅವರಲ್ಲಿ ಗಟ್ಟಿತನ ಇರುತ್ತದೆ. ಅಲ್ಲಿನ ವಾತಾವರಣ ಅವರನ್ನು ಗಟ್ಟಿಗರನ್ನಾಗಿ ಮಾಡಿದೆ.

        ಹಲವು ಸಮಸ್ಯೆಗಳಿಂದ ನರಳುತ್ತಿರುವ ನಗರ ಪ್ರದೇಶಗಳು ಸುಸ್ಥಿತಿಗೆ ಬರಬೇಕಾದರೆ ಗ್ರಾಮೀಣ ಜನ ನಗರಗಳಿಗೆ ವಲಸೆ ಬರುವುದನ್ನು ತಡೆಯಬೇಕು. ಉದ್ಯೋಗ ಅರಸಿ ನಗರಗಳಿಗೆ ಬರುವಂತೆಯೇ ತಮ್ಮ ಮಕ್ಕಳನ್ನು ನಗರಗಳಲ್ಲಿ ಓದಿಸುವುದಕ್ಕಾಗಿಯೇ ಬರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಎಷ್ಟೋ ಮಂದಿ ತಮ್ಮ ಕೃಷಿ ಭೂಮಿಯನ್ನು ಹಾಳುಬಿಟ್ಟು ಮಕ್ಕಳಿಗಾಗಿ ನಗರ ಸೇರಿದ್ದಾರೆ. ಇನ್ನು ಕೆಲವರು ಹಾಸ್ಟೆಲ್‍ಗಳಿಗೆ ಸೇರಿಸಿದ್ದಾರೆ. ಎಲ್ಲ ಮಕ್ಕಳಿಗೂ ಹಾಸ್ಟೆಲ್ ಸೌಲಭ್ಯ ಸಿಗುವುದಿಲ್ಲ ಎಂಬುದು ಗೊತ್ತು. ಆದರೂ ಹಾಸ್ಟೆಲ್ ದೊರಕಿಸಿಕೊಳ್ಳುವ ಇನ್ನಿಲ್ಲದ ಪ್ರಯತ್ನಗಳು ನಡೆದೇ ಇರುತ್ತವೆ. ಸ್ಥಳೀಯವಾಗಿಯೇ ಇರುವ ಉತ್ತಮ ಶಾಲಾ ಕಾಲೇಜುಗಳನ್ನು ಬಿಟ್ಟು ಅದೇಕೆ ಈ ಪರಿಯ ಸಂಕಟಕ್ಕೆ ಬೀಳುತ್ತಾರೆಂಬುದು ಅರ್ಥವಾಗದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link