ಬೆಂಗಳೂರು
ರಾಜ್ಯದ ಮೈತ್ರಿಕೂಟ ಸರ್ಕಾರದಲ್ಲಿ ಎದ್ದಿರುವ ಬಿರುಗಾಳಿಯ ಬಗ್ಗೆ ತಣ್ಣಗೆ ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ,ಏನೇ ಭಿನ್ನಾಭಿಪ್ರಾಯಗಳಿದ್ದರೂ ನಿವಾರಣೆಯಾಗಲಿವೆ.ಸರ್ಕಾರ ಸುಭದ್ರವಾಗಿರಲಿದೆ.ಹಾಗೆಯೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಡಬ್ಬಾ(ಗರ್ಜಿ ಗಮ್ಮತ್ತು)ಷೋ ಪ್ಲಾಪ್ ಆಗಲಿದೆ ಎಂದು ಹೇಳಿದ್ದಾರೆ.
ಇಂದಿಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಅವರು,ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಹಾಗೂ ಕಾಂಗ್ರೆಸ್ ನಾಯಕರಾದ ಸಿದ್ಧರಾಮಯ್ಯ ಅವರ ಮಧ್ಯೆ ಏನು ನಡೆದಿದೆಯೋ?ಗೊತ್ತಿಲ್ಲ.ಆದರೆ ಅದೇನೇ ಇದ್ದರೂ ದೇವೇಗೌಡರು,ಸಿದ್ಧರಾಮಯ್ಯ ಹಾಗೂ ಕುಮಾರಸ್ವಾಮಿಯವರು ಒಟ್ಟಿಗೆ ಕುಳಿತು ಚರ್ಚಿಸಿ ಬಗೆ ಹರಿಸಿಕೊಳ್ಳಲಿದ್ದಾರೆ ಎಂದರು.
ಸಮ್ಮಿಶ್ರ ಸರ್ಕಾರ ಸುಭದ್ರವಾಗಿರಲಿದೆ.ಮೇ ಇಪ್ಪತ್ಮೂರರ ನಂತರ ಸರ್ಕಾರ ಉರುಳಲಿದೆ ಎಂಬ ಯಡಿಯೂರಪ್ಪ ಅವರ ಹೇಳಿಕೆ ಡಬ್ಬಾ ಷೋ ನಂತೆ ಪ್ಲಾಪ್ ಆಗಲಿದೆ.ಇದರಲ್ಲಿ ಯಾವ ಅನುಮಾನವೂ ಬೇಡ ಎಂದರು.
ಯಡಿಯೂರಪ್ಪ ಅವರ ಹೇಳಿಕೆಯನ್ನು ನೋಡಿದರೆ ನಮಗೆ ಬಾಲ್ಯದ ನೆನಪಾಗುತ್ತದೆ.ಆಗ ಸೈಕಲ್ ಮೇಲೆ ಡಬ್ಬಾ( ಗರ್ಜಿ ಗಮ್ಮತ್ತು) ತಂದು ಒಂದು ರಂಧ್ರದಲ್ಲಿ ಕಣ್ಣಿಟ್ಟು ನೋಡಲು ಹೇಳುತ್ತಿದ್ದರು.ನೋಡುತ್ತಿದ್ದಂತೆಯೇ ಮೈಸೂರ್ ಮಹಾರಾಜ್ರನ್ನ ನೋಡು,ಬಾಂಬೆ ನೋಡು,ಕಲ್ಕತ್ತಾ ನೋಡು ಎಂದು ಹೇಳುತ್ತಿದ್ದರು.
ಅವರು ಹೇಳುತ್ತಿದ್ದಂತೆ ಚಿತ್ರಗಳು ಬದಲಾಗುತ್ತಿದ್ದವು.ಆದರೆ ಅಂತಿಮವಾಗಿ ಅವನ ಕೆಲಸ ಮುಗಿದ ಮೇಲೆ ಡಬ್ಬಾ ಹಿಡಿದುಕೊಂಡು ಮುಂದೆ ಹೋಗುತ್ತಿದ್ದ.ಯಡಿಯೂರಪ್ಪ ಕೂಡಾ ಹಾಗೆಯೇ.ಸೈಕಲ್ ಮೇಲೆ ಡಬ್ಬಾ ತಂದು ಸರ್ಕಾರ ಬೀಳತ್ ನೋಡು ಎಂದು ಹೇಳುತ್ತಲೇ ಇದ್ದಾರೆ.
ಅವರ ಹಾಗೆಯೇ ಅಶೋಕಣ್ಣ(ಮಾಜಿ ಡಿಸಿಎಂ)ಕೂಡಾ ಡೆಲ್ಲಿ ನೋಡು,ಕಲ್ಕತ್ತಾ ನೋಡು ಅಂತಾವ್ರೆ.ಆದರೆ ಏನೂ ಆಗುವುದಿಲ್ಲ.ಎಲ್ಲವೂ ಹಿಂದಿನಂತೆಯೇ ಇರಲಿದೆ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಸುಭದ್ರವಾಗಿರಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಬಗ್ಗೆ ಇರಲಿ,ಇವರು ಮೊದಲು ಕೇಂದ್ರ ಸರ್ಕಾರದ ಕಡೆ ನೋಡಲಿ.ಅವರೇ ಮರಳಿ ಅಧಿಕಾರಕ್ಕೆ ಬರುವ ಲಕ್ಷಣಗಳಿಲ್ಲ.ಬಿಬಿಸಿ ವರದಿಯ ಪ್ರಕಾರವೇ ಆರನೇ ಹಂತದ ಮತದಾನ ನಡೆದ ಐವತ್ತೊಂಭತ್ತು ಕ್ಷೇತ್ರಗಳಲ್ಲಿ ಬಿಜೆಪಿ ಹದಿನೈದು,ಹದಿನೆಂಟು ಸೀಟು ಪಡೆಯುವುದೂ ಕಷ್ಟ.
ಹಾಗೆಯೇ ರಾಜ್ಯದಲ್ಲಿಯೂ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಹದಿನೆಂಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಬಿಬಿಸಿ ಹೇಳಿದೆ.ಅದೇ ಹೇಳಿದ ಮೇಲೆ ನಾವು ಹೇಳುವುದೇನಿದೆ?ನನಗನ್ನಿಸುವ ಪ್ರಕಾರ ಜೆಡಿಎಸ್ ಆರು ಕ್ಷೇತ್ರಗಳಲ್ಲಿ,ಕಾಂಗ್ರೆಸ್ ಹನ್ನೆರಡು ಕ್ಷೇತ್ರಗಳಲ್ಲಿ ಜಯ ಸಾಧಿಸುವುದು ನಿಶ್ಚಿತ ಎಂದರು.
ಲೋಕಸಭಾ ಚುನಾವಣೆಯ ನಂತರ ಬಿಜೆಪಿ ಹಾಗೂ ಜೆಡಿಎಸ್ ಸೇರಿ ಸರ್ಕಾರ ರಚಿಸುವ ಬಗ್ಗೆ ಸಿಎಂ ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರಮೋದಿ ಅವರನ್ನು ಭೇಟಿಯಾದಾಗ ಪ್ರಸ್ತಾಪಿಸಿದ್ದಾರೆ ಎಂಬ ವರದಿಗಳನ್ನು ಅವರು ತಳ್ಳಿ ಹಾಕಿದರು.
ಅಂತಹ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ.ಇದ್ದಿದ್ದರೆ ಮೂರು ತಿಂಗಳ ಮುಂಚಿತವಾಗಿಯೇ ಅವರು ಹೇಳಬಹುದಿತ್ತು.ನಾನೇ ಖುದ್ದಾಗಿ ಸಿಎಂ ಕುಮಾರಸ್ವಾಮಿ ಅವರ ಜತೆ ದೆಹಲಿಗೆ ಹೋಗಿದ್ದೇನೆ.ಪ್ರಧಾನಿಯವರನ್ನು ಭೇಟಿ ಮಾಡಿದ್ದೇನೆ.ಬರಗಾಲದ ಬಗ್ಗೆ,ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನವಿ ಸಲ್ಲಿಸಿ ಬಂದಿದ್ದೇವೆ ಎಂದು ಅವರು ಹೇಳಿದರು.
ಆಗಲೇ ಇಲ್ಲದ ಮಾತು ಈಗೇಕೆ ಕೇಳಿ ಬರುತ್ತಿದೆ?ಆಗಲೇ ಅವರ ಜತೆ ಕೈ ಜೋಡಿಸುವುದಿಲ್ಲ ಎಂದ ನಾವು ಈಗೇಕೆ ಅವರ ಜತೆ ಕೈ ಜೋಡಿಸುತ್ತೇವೆ?ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಇದೆ.ಸುಭದ್ರವಾಗಿ ಮುಂದುವರಿಯಲಿದೆ ಎಂದು ಅವರು ಪುನರುಚ್ಚರಿಸಿದರು.
ಪ್ರಧಾನಿ ಮೋದಿಯವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು,ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಇವರು ರಾಜೀವ್ ಗಾಂಧಿಯವರನ್ನು ಭ್ರಷ್ಟ ಎನ್ನುತ್ತಾರೆ.ಅವರು ಇರುವಾಗಲೇ ಆ ಮಾತು ಹೇಳಬೇಕಿದ್ದವರು ಸತ್ತು ಇಷ್ಟು ವರ್ಷಗಳಾದ ಮೇಲೆ ಏಕೆ ಮಾತನಾಡುತ್ತಿದ್ದಾರೆ?ಎಂದು ವಿಷಾದಿಸಿದರು.
ಹಾಗೆಯೇ ಇಂದಿರಾಗಾಂಧಿ ಅವರ ಹತ್ಯೆಯ ಹಿನ್ನೆಲೆಯಲ್ಲಿ ಸಿಖ್ಖರ ಮೇಲೆ ಹಲ್ಲೆ ನಡೆದ ಘಟನೆಯ ಬಗ್ಗೆ ಈಗೇಕೆ ಮಾತು?ಆಗಲೇ ಪಂಜಾಬಿನ ಜನ ಅದನ್ನು ಮರೆತಾಯಿತು.ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತಂದಾಯಿತು.ಹೀಗಿರುವಾಗ ಮತ್ತೆ ಆ ಬಗ್ಗೆ ಯಾಕೆ ಮಾತನಾಡಬೇಕು?ಎಂದು ಪ್ರಶ್ನಿಸಿದರು.
ಯಡಿಯೂರಪ್ಪ,ಅಶೋಕ್ ಸೇರಿದಂತೆ ರಾಜ್ಯದ ಬಿಜೆಪಿ ನಾಯಕರಿಗೆ ತಮ್ಮ ಮುಖದ ಮೇಲೆ ತಮಗೇ ನಂಬಿಕೆ ಇಲ್ಲ.ಅದಕ್ಕಾಗಿ ನಮ್ಮನ್ನು ನೋಡಿ ಬೇಡ.ಮೋದಿಯವರನ್ನು ನೋಡಿ ವೋಟು ಹಾಕಿ ಎಂದರು.ಅಂದರೆ ನಮ್ಮ ಮುಖಗಳೆಲ್ಲ ಆಗಲೇ ಕೆಟ್ಟಾಗಿದೆ ಎಂದಲ್ಲವೇ ಅರ್ಥ?ಎಂದು ಪ್ರಶ್ನಿಸಿದರು.ಇವರ ಬಳಿ ನಮ್ಮ ಇಪ್ಪತ್ತು ಶಾಸಕರು ಸಂಪರ್ಕದಲ್ಲಿದ್ದಾರಂತೆ.ಇದ್ದರೆ.ಕರೆದುಕೊಂಡು ಹಿಂದೆಯೇ ಸರ್ಕಾರ ಮಾಡಿಬಿಡಬೇಕಿತ್ತು ಎಂದು ವ್ಯಂಗ್ಯವಾಡಿದ ಅವರು,ಇವರೇನೇ ಮಾಡಿದರೂ ಸಮ್ಮಿಶ್ರ ಸರ್ಕಾರಕ್ಕೆ ಯಾವ ಆಪತ್ತೂ ಇಲ್ಲ ಎಂದರು.
ಜೆಡಿಎಸ್ ಪಕ್ಷವನ್ನು ತಳಮಟ್ಟದಿಂದ ಮುಗಿಸಲು ಬಿಜೆಪಿ ಸಂಚು ಮಾಡಿದೆಯೇ?ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,ಅಯ್ಯೋ,ಯಾರೂ ಯಾರನ್ನೂ ಮುಗಿಸಲು ಸಾಧ್ಯವಿಲ್ಲ.ಹಾಗೇನಾದರೂ ಮುಗಿಸುವುದಿದ್ದರೆ ಜನರು,ದೇವರು ಸೇರಿ ಮುಗಿಸಬೇಕು ಎಂದರು.
ಆದರೆ ಕೇಂದ್ರ ಸರ್ಕಾರ ಐಟಿ ಧಾಳಿ ನಡೆಸಿದ ಕ್ರಮ ಸರಿಯಲ್ಲ.ನಮ್ಮ ಮನೆಗೆ ತರಕಾರಿ ಪೂರೈಕೆ ಮಾಡುವವರ ಮೇಲೆ,ನಾವು ಪೂಜಿಸುವ ಈಶ್ವರ ದೇವಾಲಯದ ಪೂಜಾರಿಯ ಮೇಲೆ,ನಮ್ಮ ಥಿಯೇಟರ್ ಮೂಲಕ ಬರುವ ದುಡ್ಡನ್ನು ತಂದವನ ಮೇಲೆ,ನಾಮಕರಣ ಶಾಸ್ತ್ರಕ್ಕೆ ಅಂತ ಎರಡು ಕ್ವಿಂಟಾಲ್ ಅಕ್ಕಿ ತಂದಿಟ್ಟುಕೊಂಡಿದ್ದ ನಮ್ಮ ಅಜಿತ್ ಎಂಬ ಹುಡುಗನ ಮೇಲೆ,ಪಾಂಡವಪುರದಲ್ಲಿ ಕೋಳಿ ಮಾರಿ ಎರಡು ಲಕ್ಷ ರೂಪಾಯಿ ಸಂಗ್ರಹಿಸಿಟ್ಟಿದ್ದವನ ಮೇಲೆ,ನಮ್ಮ ಸಂಬಂಧಿಗಳ ಮೇಲೆ ಐಟಿ ಧಾಳಿ ನಡೆಸಿದ್ದಾರೆ.
ಥಿಯೇಟರ್ ಕಲೆಕ್ಷನ್ ತಂದವನ ಬಳಿ ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿ ಇತ್ತು.ವಶಪಡಿಸಿಕೊಂಡ ಐಟಿಯವರು ಇದುವರೆಗೆ ಎಫ್ಐಆರ್ ಹಾಕಿಲ್ಲ.ತನಿಖೆಗೆ ಬಂದಿಲ್ಲ ಎಂದ ಅವರು,ಈ ಕುರಿತ ವಿಡಿಯೋ ದಾಖಲೆಯನ್ನು ನಾನು ನಾಶ ಪಡಿಸಿದ್ದೇನೆ ಎಂಬುದು ಸುಳ್ಳು.ಅದನ್ನು ಯಾರಾದರೂ ನಾಶ ಮಾಡಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲಿ ಎಂದರು.
ದೇಶದ ರಾಜಕಾರಣ ವಿಚಿತ್ರ ತಿರುವು ಪಡೆಯುತ್ತಿದೆ.ಮೂವತ್ತೆಂಟು ಜನ ಎಮ್ಮೆಲ್ಲೆಗಳೊಂದಿಗೆ ಬಂದ ಕುಮಾರಸ್ವಾಮಿ ಸಿಎಂ ಆಗಿ ಆಯ್ಕೆಯಾಗುತ್ತಾರೆ ಎಂದು ಯಾರಾದರೂ ನಿರೀಕ್ಷಿಸಿದ್ದರಾ?ಮುಂದೆ ರಾಷ್ಟ್ರ ರಾಜಕಾರಣದಲ್ಲಿ ಯಾರು ಏನಾಗುತ್ತಾರೆ?ಎಂದು ನಿರೀಕ್ಷಿಸಲು ಸಾಧ್ಯವಾ?ಎಂದು ಪ್ರಶ್ನಿಸಿದರು.
