ಕಾಂಗ್ರೆಸ್‍ಕೋಟೆ ಛಿದ್ರ : ಮತ್ತೊಮ್ಮೆ ಅರಳಿತು ಕಮಲ

ಚಿತ್ರದುರ್ಗ

   ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಎ.ನಾರಾಯಣಸ್ವಾಮಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಚಿತ್ರದುರ್ಗ ವಲಸಿಗರ ಸುರಕ್ಷಿತ ತಾಣವೆಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ.ಹಿಂದಿನ ಎಲ್ಲಾ ಚುನಾವಣೆಯ ಫಲಿತಾಂಶವನ್ನು ಗಮನಿಸಿದರೆ ಬಹುತೇಕರು ವಲಸಿಗರೇ ಇಲ್ಲಿ ವಿಜಯಶಾಲಿಯಾಗಿದ್ದಾರೆ. ಅದರಲ್ಲೂ ಕೇವಲ 15-20 ದಿನಗಳಲ್ಲಿಯೇ ಕ್ಷೇತ್ರಕ್ಕೆ ಬಂದು ಗೆದ್ದುವರ ಸಂಖ್ಯೆ ಹೆಚ್ಚಿದೆ. ಚಿತ್ರನಟ ಶಶಿಕುಮಾರ್, ಪಿ.ಕೋದಂಡರಾಮಯ್ಯ, ಎನ್.ವೈ.ಹನುಮಂತಪ್ಪ, ಜನಾರ್ಧನಾಸ್ವಾಮಿ, ಬಿ.ಎನ್.ಚಂದ್ರಪ್ಪ ಇವರೆಲ್ಲರೂ ಕ್ಷೇತ್ರಕ್ಕೆ ದಿಡೀರನೆ ಬಂದು ಗೆಲುವು ಕಂಡವರು.

    ಹಾಗೆಯೇ ಈ ಬಾರಿಯೂ ಸ್ಥಳೀಯರಿಗೆ ಟಿಕೆಟ್ ಕೊಡಬೇಕು ಎನ್ನುವ ಕೂಗು ಬಲವಾಗಿ ಕೇಳಿ ಬಂದಿದ್ದರೂ ಟಿಕೆಟ್ ಗಿಟ್ಟಿಸಿಕೊಂಡು ಕ್ಷೇತ್ರಕ್ಕೆ ಕಾಲಿಟ್ಟ ಅನೇಕಲ್ ನಾರಾಯಣಸ್ವಾಮಿ ಕೇವಲ 25ದಿನಗಳಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

    ಸಿ.ಪಿ.ಮೂಡಲಗಿರಿಯಪ್ಪ ಅವರ ಬಳಿಕ ಈ ಕ್ಷೇತ್ರದಲ್ಲಿ ಮರು ಆಯ್ಕೆಯ ಅದೃಷ್ಟ ಯಾರಿಗೂ ಇರಲಿಲ್ಲ.ಆದರೆ ಹಾಲಿ ಸಂಸದ ಬಿ.ಎನ್.ಚಂದ್ರಪ್ಪ ಅವರು ಮರು ಆಯ್ಕೆಯಾಗುವರೆಂಬ ವಿಶ್ವಾಸ ಜನರಲ್ಲಿ ದಟ್ಟವಾಗಿತ್ತು. ಆದರೆ ಎಲ್ಲರ ಲೆಕ್ಕಾಚಾರಗಳೂ ಉಲ್ಟವಾಗಿವೆ. ನಿರೀಕ್ಷೆಯೂ ಹುಸಿಯಾಗಿ ಬಿಜೆಪಿ ಅಚ್ಚರಿಯ ಗೆಲುವು ಕಂಡಿದೆ.

     ಚಿತ್ರದುರ್ಗ ಲೋಕಸಭಾ ಕ್ಷೇತ್ರ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಐವರು ಬಿಜೆಪಿ ಶಾಸಕರು, ಇಬ್ಬರು ಕಾಂಗ್ರೆಸ್ ಶಾಸಕರು ಮತ್ತು ಒಬ್ಬರು ಜೆಡಿಎಸ್ ಶಾಸಕರಿದ್ದಾರೆ. ನಿರೀಕ್ಷೆಯಂತೆಯೇ ಬಿಜೆಪಿಯ ಹಾಲಿ ಶಾಸಕರು ಇರುವ ಕ್ಷೇತ್ರಗಳಲ್ಲಿ ನಾರಾಯಣಸ್ವಾಮಿ ಅವರಿಗೆ ಅಧಿಕ ಮತಗಳು ಲಭಿಸಿವೆ. ಕಾಂಗ್ರೆಸ್ ಶಾಸಕರಿರುವ ಚಳ್ಳಕರೆಯಲ್ಲಿಯೂ ಬಿಜೆಪಿಗೆ ಅಧಿಕ ಮತಗಳು ಬಿದ್ದಿವೆ. ಇನ್ನು ಸಚಿವ ವೆಂಕಟರಮಣಪ್ಪ ಅವರ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‍ಗೆ ಹೆಚ್ಚು ಮತಗಳು ಬಂದಿವೆ.

     ಬಿಜೆಪಿಯ ಪ್ರಭಾವಿ ನಾಯಕರಾಗಿರುವ ಶ್ರೀರಾಮುಲು ಪ್ರತಿನಿಧಿಸಿರುವ ಮೊಳಕಾಲ್ಮೂರಿನಲ್ಲಿ ಬಿಜೆಪಿಗಿಂತ ಕಾಂಗ್ರೆಸ್‍ಗೆ ಜನರು ಒಲವು ತೋರಿದ್ದಾರೆ ಉಳಿದಂತೆ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು ಮತ್ತು ಶಿರಾದಲ್ಲಿ ಬಿಜೆಪಿಗೆ ಬಹುಮತ ಲಭಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಂದ ಫಲಿತಾಂಶವೇ ಈಗ ಮರುಕಳಿಸಿದಂತಿದೆ. ಚಿತ್ರದುರ್ಗ ಮತ್ತು ಹೊಳಲ್ಕೆರೆಯಲ್ಲಿ ಬಿಜೆಪಿಗೆ ಹೆಚ್ಚು ಬಲತಂದುಕೊಟ್ಟಿದೆ. ಈ ಎರಡೂ ಕ್ಷೇತ್ರಗಳೇ ಬಿಜೆಪಿಯ ಗೆಲುವಿಗೆ ಪ್ರಮುಖ ಕಾರಣವೆನ್ನಬಹುದು.

      ಕಾಂಗ್ರೆಸ್‍ನ ಬಿ.ಎನ್.ಚಂದ್ರಪ್ಪ ಅವರು ಚುನಾವಣೆ ಘೋಷಣೆಗೂ ಮುನ್ನವೇ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಪ್ರಚಾರ ನಡೆಸಿದ್ದರು. ಕಳೆದ ಬಾರಿಗಿಂತ ಈ ಚುನಾವಣೆಯಲ್ಲಿ ಅಧಿಕ ಮತಗಳಿಂದ ಗೆಲ್ಲುವ ವಿಶ್ವಾಸವನ್ನೂ ಹೊಂದಿದ್ದರು. ಆಯಾ ವಿಧಾನಸಭಾ ಕ್ಷೇತ್ರಗಳ ಹಾಲಿ ಮತ್ತು ಮಾಜಿ ಶಾಸಕರುಗಳನ್ನೇ ನಂಬಿಕೊಂಡಿದ್ದರು. ಜೆಡಿಎಸ್‍ನ ಬೆಂಬಲದ ಜೊತೆಗೆ ಕ್ಷೇತ್ರದಲ್ಲಿ ತಮ್ಮ ವ್ಯಕ್ತಿತ್ವದ ಬಗ್ಗೆ ವ್ಯಕ್ತವಾದ ಜನರ ಒಲವು ಮತಗಳಾಗಿ ಪರಿವರ್ತನೆಯಾಗಲಿಲ್ಲ. ಇಲ್ಲಿ ಮೋದಿ ಅಲೆ ಕೆಲಸ ಮಾಡಿದೆ ಎಂಬುದು ಫಲಿತಾಂಶ ಸಾಕ್ಷೀಕರಿಸಿದೆ.

80178 ಅಂತರದಲ್ಲಿ ಗೆಲುವು

      ಚುನಾವಣೆಯಲ್ಲಿ ಬಿಜೆಪಿಯ ನಾರಾಯಣಸ್ವಾಮಿ ಅವರು 80178 ಮತಗಳ ಅಂತರದಿಂದ ಬಾರೀ ಗೆಲುವು ಸಾಧಿಸಿದ್ದಾರೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು 1760111 ಮತದಾರರ ಪೈಕಿ 1243269 ಮತದಾರರು ಮತ ಚಲಾವಣೆ ಮಾಡಿದ್ದರು. ಮತ ಎಣಿಕೆ ಪ್ರಾರಂಭಗೊಂಡ ನಂತರ ಮೊದಲ ಸುತ್ತಿನಿಂದ ಕೊನೆಯ 22 ನೇ ಸುತ್ತಿನವರೆಗೂ ಮುನ್ನಡೆ ಕಾಯ್ದುಕೊಂಡು ಸಾಗಿದ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ನಾರಾಯಣಸ್ವಾಮಿ ಅವರು ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಅವರಿಗಿಂತ 3905 ಹೆಚ್ಚು ಮತಗಳನ್ನು ಪಡೆದರು, ನಂತರ ಎರಡನೆ ಸುತ್ತಿನಲ್ಲಿ 9733 ಮತಗಳ ಮುನ್ನಡೆ, ಮೂರನೆ ಸುತ್ತಿನಲ್ಲಿ 15115 ಮತಗಳಿಂದ ಮುಂದಿದ್ದರು.

        ನಾಲ್ಕನೆ ಸುತ್ತಿನಲ್ಲಿ ಮುನ್ನಡೆಯ ಅಂತರ 15971 ಮತಗಳಾಗಿದ್ದರೆ, ಐದನೆ ಸುತ್ತಿನಲ್ಲಿ ಈ ಅಂತರ 19994 ಮತಗಳಾಗಿತ್ತು. ಬಳಿಕ ಆರನೆ ಸುತ್ತಿನಲ್ಲಿ 26998 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡರು. ಏಳನೆ ನೇ ಸುತ್ತಿನಲ್ಲಿ 34543 ಮತಗಳ ಅಂತರದಿಂದ ಮುಂದಿದ್ದರು. ಎಂಟನೆ ಸುತ್ತಿನಲ್ಲಿ ಇದರ ಅಂತರ 38268 ಮತಗಳಷ್ಟಾಯಿತು. ಅಂತ್ಯದಲ್ಲಿ 22 ನೇ ಸುತ್ತಿನ ವೇಳೆಗೆ ಬಿಜೆಪಿಯ ನಾರಾಯಣಸ್ವಾಮಿ ಅವರು 626195 ಮತಗಳನ್ನು ಪಡೆದರೆ, ಕಾಂಗ್ರೆಸ್‍ನ ಬಿ.ಎನ್. ಚಂದ್ರಪ್ಪ ಅವರು 546017 ಮತಗಳನ್ನು ಪಡೆದರು. ಒಟ್ಟಾರೆ ಬಿಜೆಪಿಯ ನಾರಾಯಣಸ್ವಾಮಿ ಅವರು ಕಾಂಗ್ರೆಸ್‍ನ ಬಿ.ಎನ್. ಚಂದ್ರಪ್ಪ ಅವರಿಗಿಂತ 80178 ಹೆಚ್ಚು ಮತಗಳನ್ನು ಪಡೆದು ಜಯ ಸಾಧಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link