ಬಳ್ಳಾರಿ
ಬಳ್ಳಾರಿ ನಗರಕ್ಕೆ ನೀರು ಪೂರೈಸುವ ಅಲ್ಲಿಪುರ ಕೆರೆಗೆ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಲ್ಲಿಪುರ ಕೆರೆ 5.6ಕಿ.ಮೀ ವಿಸ್ತೀರ್ಣ ಹೊಂದಿದ್ದು, 12600 ಎಂಎಲ್ಡಿ ನೀರು ಸಂಗ್ರಹಣಾ ಸಾಮಥ್ರ್ಯ ಹೊಂದಿದೆ. 3.6ಕಿ.ಮೀ ಕೆರೆಯ ಬಂಡ್ ದುರಸ್ತಿಯಲ್ಲಿತ್ತು,ಅದನ್ನು ಸರಿಪಡಿಸಲಾಗಿದ್ದು, ಇನ್ನೂ 15 ವರ್ಷ ಈ ಕೆರೆಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಚೀಫ್ ಎಂಜನಿಯರ್ ಎಸ್.ಎನ್.ದಿನೇಶ್ ತಿಳಿಸಿದರು.ಇದನ್ನು ಆಲಿಸಿದ ಸಚಿವ ಯು.ಟಿ.ಖಾದರ್ ಅವರು ಉಳಿದ 2 ಕಿ.ಮೀ ಬಂಡ್ ಕೂಡ ದುರಸ್ತಿ ಮಾಡಿಸಿ, ಮೋಕಾ ಕೆರೆಯದ್ದು ದುರಸ್ತಿ ಇದ್ದರೇ ಅದನ್ನು ಮಾಡಿ ಎಂದು ಸೂಚಿಸಿದರು.
ಬಳ್ಳಾರಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಇದೆ ಇರುವುದು ಗಮನಕ್ಕೆ ಬಂದಿದ್ದು, ತುಂಗಾಭದ್ರಾ ಡ್ಯಾಂ ನಿಂದ ಬಳ್ಳಾರಿ ನಗರಕ್ಕೆ ನೇರವಾಗಿ ನೀರು ಪೂರೈಸುವ ನಿಟ್ಟಿನಲ್ಲಿ 1200 ಕೋಟಿ ರೂ.ವೆಚ್ಚದ ಡಿಪಿಎಆರ್ ಸರಕಾರದ ಮುಂದೆ ಇದೆ. ಅದು ಅನುಷ್ಠಾನವಾಗು ವವರೆಗೆ ಈಗಿರುವ ನಗರಕ್ಕೆ ನೀರು ಪೂರೈಸುವ ಸಂಗ್ರಹಗಾರಗಳನ್ನು ದುರಸ್ತಿಪಡಿಸಿ ಮತ್ತು ವಿತರಣಾ ಸಮಸ್ಯೆ ಸರಿಪಡಿಸಿ ನೀರು ಪೂರೈಸಲಾಗುವುದು ಎಂದರು.
ಬಳ್ಳಾರಿ ನಗರಕ್ಕೆ ಮುಂದಿನ 30 ವರ್ಷಗಳ ಜನಸಂಖ್ಯೆ ಆಧರಿಸಿ ಸಮರ್ಪಕ ನೀರು ಪೂರೈಸುವ ನಿಟ್ಟಿನಲ್ಲಿ ಅಂದಾಜು ಪಟ್ಟಿ ರೂಪಿಸಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ ಅವರು, ಬಳ್ಳಾರಿ ನಗರವನ್ನು ಒಂದು ಮಾದರಿ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಏನೆಲ್ಲಾ ಸೌಕರ್ಯಗಳನ್ನು ಕಲ್ಪಿಸಬೇಕೋ ಅವುಗಳನ್ನೆಲ್ಲ ನಮ್ಮ ಸರಕಾರ ಕಲ್ಪಿಸಲಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಜಿ.ಸೋಮಶೇಖರರೆಡ್ಡಿ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಎಂಜನಿಯರ್ ವೀರನಗೌಡ, ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ ಗಂಗಾಧರಗೌಡ, ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ, ಪಾಲಿಕೆ ಸದಸ್ಯರಾದ ಮಲ್ಲನಗೌಡ,ಮೋತ್ಕರ್ ಶ್ರೀನಿವಾಸ್, ವೆಂಕಟರಮಣ ಸೇರಿದಂತೆ ಅನೇಕರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
