ದಾವಣಗೆರೆ:
ಕೇಂದ್ರ ಅರೆ ಸೇನಾ ಪಡೆಯಲ್ಲಿ 21 ವರ್ಷ ಕಾಲ ಸೇವೆ ಸಲ್ಲಿಸಿದ್ದ ಮಾಜಿ ಸೈನಿಕರೊಬ್ಬರು ಇದೀಗ ಜಮೀನು, ನಿವೇಶನಕ್ಕಾಗಿ ನಗರದ ಜಿಲ್ಲಾಡಳಿತ ಭವನದ ಎದುರು ಏಕಾಂಗಿಯಾಗಿ ಧರಣಿ ಆರಂಭಿಸಿದ್ದಾರೆ.
ನಗರದ ಜಿಲ್ಲಾಡಳಿತ ಭವನದ ಎದುರು ಏಕಾಂಗಿಯಾಗಿ, ತಮಗೆ ನ್ಯಾಯಯುತವಾಗಿ ಸಿಗಬೇಕಾದ ನಿವೇಶನ, ಜಮೀನು ನೀಡಬೇಕೆಂದು ಒಯಿಸಿ ಜಿಲ್ಲೆಯ ಜಗಳೂರು ತಾಲೂಕಿನ ಭರಮಸಮುದ್ರ ಗ್ರಾಮದ ಮಾಜಿ ಸೈನಿಕ ಬಿ.ಎನ್.ಪ್ರಹ್ಲಾದ ರೆಡ್ಡಿ ಏಕಾಂಗಿಯಾಗಿ ಧರಣಿ ನಡೆಸುವ ಮೂಲಕ ಅಧಿಕಾರಿಗಳ ವಿಳಂಬ ಧೋರಣೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸೈನಿಕ ಪ್ರಹ್ಲಾದ ರೆಡ್ಡಿ, ಜಮೀನು, ನಿವೇಶನಕ್ಕಾಗಿ ಕಳೆದ 8 ವರ್ಷಗಳಿಂದಲೂ ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದರೂ ಅಧಿಕಾರಿಗಳು ಸ್ಪಂದಿಸದೇ, ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಹೀಗಾಗಿ ತಮಗೆ ಇಂದಿಗೂ ನ್ಯಾಯವು ಮರೀಚಿಕೆಯಾಗಿದೆ ಎಂದು ಆರೋಪಿಸಿದರು.
1998ರಿಂದ 2022ರವರೆಗೆ ಸೆಂಟ್ರಲ್ ಪ್ಯಾರಾ ಮಿಲಿಟರಿ ಫೋರ್ಸ್ನಲ್ಲಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿಯಾಗಿದ್ದೇನೆ. ತಮಗೆ ನೀಡಬೇಕಾಗ ಜಮೀನು, ನಿವೇಶನ ನೀಡದೇ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರ ಹಾಗೂ ನ್ಯಾಯಾಲಯದ ಆದೇಶದಂತೆ ನಿವೃತ್ತರಾದ ಮಾಜಿ ಸೈನಿಕರಿಗೆ ಜಮೀನು, ಖಾಲಿ ನಿವೇಶನ ಕೊಡಬೇಕು. ಆದರೆ, ಜಗಳೂರು ತಾಲೂಕಿನ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತಮಗೆ ಈ ವರೆಗೂ ಜಮೀನಾಗಲೀ, ನಿವೇಶನವಾಗಲೀ ಸಿಕ್ಕಿಲ್ಲ ಎಂದು ಕಿಡಿಕಾರಿದರು
ಭರಮಸಮುದ್ರ ಗ್ರಾಮದ ಸರ್ವೇ ನಂಬರ್ 24ರಲ್ಲಿ ಸರ್ಕಾರಿ ಸೇಂದಿ ವನ ಇದೆ. ಅಲ್ಲಿನ 20.21 ಎಕರೆ ಜಮೀನಿನಲ್ಲಿ ಅಂತಿಮವಾಗಿ ತಾಲೂಕು ಸರ್ವೇ ಅದಿಕಾರಿ ತಮಗೆ 4.5 ಎಕರೆ ಜಮೀನನ್ನು ಸರ್ವೇ ಮಾಡಿಕೊಟ್ಟಿದ್ದರು. ಅದಕ್ಕೆ ಸಂಬಂಧಿಸಿದ ಕಾಗದಪತ್ರಗಳು ಜಿಲ್ಲಾಧಿಕಾರಿಗಳ ಕಚೇರಿ ತಲುಪಿದ್ದರೂ ಈವರೆಗೆ ನನಗೆ ಜಮೀನು ಕೊಟ್ಟಿಲ್ಲ. ಜಗಳೂರು ಪಪಂ ವ್ಯಾಪ್ತಿಯ ಸರ್ವೇ ನಂಬರ್ 99ರಲ್ಲಿ ಜಮೀನಿದ್ದು, ಹಿಂದಿನ ಶಾಸಕರು ಹಾಗೂ ಜಿಲ್ಲಾ„ಕಾರಿಗಳು 40-30 ಅಡಿ ಅಳತೆಯ ನಿವೇಶನ ನೀಡುವಂತೆ ಆದೇಶಿಸಿದ್ದರೂ ತಮಗೆ ಈವರೆಗೂ ನಿವೇಶನವನ್ನೇ ನೀಡಿಲ್ಲ. ಕಳೆದ 8 ವರ್ಷದಿಂದಲೂ ಜಮೀನು ಮತ್ತು ನಿವೇಶನಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದರೂ ಯಾವೊಬ್ಬ ಅ„ಕಾರಿಯೂ ಸ್ಪಂದಿಸಿಲ್ಲ. ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರು, ಮುಖ್ಯಮಂತ್ರಿ ಸೇರಿದಂತೆ ಅನೇಕರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಭ್ರಷ್ಟಾಚಾರ ನಿಗ್ರಹ ದಳ, ಲೋಕಾಯುಕ್ತಕ್ಕೆ ದೂರು ನೀಡುವ ಜೊತೆಗೆ ದೆಹಲಿಯಲ್ಲೂ ಧರಣಿ ಸತ್ಯಾಗ್ರಹ ನಡೆಸಲು ನಿರ್ಧಾರ ಮಾಡಿದ್ದೇನೆಂದು ಅವರು ಎಚ್ಚರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
