ತುಮಕೂರು
`ನಿಯಮಗಳನ್ನು ಅನುಸರಿಸದಿರುವ ಲೇಔಟ್ಗಳಲ್ಲಿ ನಿವೇಶನ ಖರೀದಿಸಿರುವ ಜನರಿಗೆ ಮನೆ ನಿರ್ಮಿಸಲು ಈಗ ಕಟ್ಟಡ ಪರವಾನಗಿ ಲಭಿಸದೆ ಸಂಕಷ್ಟ ಅನುಭವಿಸುವಂತಾಗಿರುವ ಸಮಸ್ಯೆಯ ಪರಿಹಾರಕ್ಕೆ ಸದ್ಯದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಉನ್ನತ ಮಟ್ಟದ ಚರ್ಚೆ ನಡೆಸುವ ಮೂಲಕ ಈ ಸಮಸ್ಯೆಗೊಂದು ತಾರ್ಕಿಕ ಅಂತ್ಯ ತರಲಾಗುವುದು’ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಭರವಸೆ ನೀಡಿದರು.
ಅವರು ತುಮಕೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶನಿವಾರ ಮಧ್ಯಾಹ್ನ ತುಮಕೂರು ಮಹಾನಗರ ಪಾಲಿಕೆಗೆ ಸಂಬಂಧಿ ಸಿದಂತೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಿದರು.ಮಾಜಿ ಕಾರ್ಪೋರೇಟರ್ ಪ್ರೆಸ್ ರಾಜಣ್ಣ ಅವರು ಸಚಿವರಿಗೆ ಲಿಖಿತ ಅಹವಾಲು ಸಲ್ಲಿಸುತ್ತ, ತುಮಕೂರು ನಗರದಲ್ಲಿ ಈಗಾಗಲೇ ಭೂಪರಿವರ್ತನೆ ಆಗಿರುವ ನಿವೇಶನದಲ್ಲಿ ಮನೆ ನಿರ್ಮಿಸಲು ನಿವೇಶನದಾರರಿಗೆ ಪಾಲಿಕೆಯಿಂದ ಪರವಾನಗಿ ಲಭಿಸುತ್ತಿಲ್ಲವೆಂದು ವಿವರಿಸಿದಾಗ ಮತ್ತು ಇದಕ್ಕೆ ದನಿಗೂಡಿಸಿ ಸಾರ್ವಜನಿಕ ಹೋರಾಟಗಾರ ಇಮ್ರಾನ್ ಪಾಷ ಅವರು ಟೂಡಾದಿಂದ ಅನುಮತಿ ತರುವಂತೆ ಪಾಲಿಕೆ ಹೇಳುತ್ತಿರುವುದನ್ನು ಸವಿವರವಾಗಿ ಸಚಿವರ ಗಮನಕ್ಕೆ ತಂದಾಗ ಸಚಿವ ಖಾದರ್ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.
ಮೊದಲಿಗೆ ಸಚಿವರು ಟೂಡಾ ಆಯುಕ್ತ ರಂಗಸ್ವಾಮಿ ಅವರನ್ನು ಪ್ರಶ್ನಿಸಿದರು. ಆಗ ರಂಗಸ್ವಾಮಿ ಅವರು, ಹಿಂದಿನ ನಗರಸಭೆಯ ಅವಧಿಯಲ್ಲಿ ನಿಯಮ ಉಲ್ಲಂಘಿಸಿರುವ ಲೇಔಟ್ಗಳಲ್ಲಿನ ನಿವೇಶನಗಳಿಗೆ ಆಸ್ತಿ ಸಂಖ್ಯೆ ನೀಡಲಾಗಿದೆ. ಆದರೆ ಕಾಲಾನಂತರದಲ್ಲಿ ಸರ್ಕಾರಿ ಸುತ್ತೋಲೆ ಬಂದಿರುವುದರಿಂದ ಈಗ ಅದನ್ನು ಅನಿವಾರ್ಯವಾಗಿ ನಾವು ಪಾಲಿಸಬೇಕಾಗಿದೆ ಎಂದು ಸ್ಪಷ್ಟಪಡಿಸಿದರು.
ಮತ್ತೆ ಮಾತು ಮುಂದುವರೆಸಿದ ಸಚಿವರು, “ಸಾರ್ವಜನಿಕರು ಎತ್ತಿರುವ ಪ್ರಶ್ನೆ ಸರಿಯಾಗಿದೆ. ಆದರೆ ಹಿಂದೆ ಯಾವಾಗಲೋ ಲೇಔಟ್ ಮಾಡಿದವರು ನಿಯಮ ಉಲ್ಲಂಘಿಸಿ ಲೇಔಟ್ ಮಾಡಿ ನಿವೇಶನ ಮಾರಿ ಹೋಗಿಬಿಟ್ಟಿದ್ದಾರೆ. ಅಲ್ಲಿ ಹಿಂದೆಯೇ ಮನೆ ಕಟ್ಟಿದವರು ಬಚಾವಾಗಿದ್ದಾರೆ. ಈಗ ಕಟ್ಟಲು ಹೊರಟವರು ಸಮಸ್ಯೆ ಎದುರಿಸುತ್ತಿದ್ದಾರೆ. ಇದು ತುಮಕೂರಷ್ಟೇ ಅಲ್ಲ, ಇಡೀ ರಾಜ್ಯ ಎದುರಿಸುತ್ತಿರುವ ಸಮಸ್ಯೆ ಆಗಿದೆ. ಇಂತಹ ಪ್ರಸಂಗಗಳಿಗೊಂದು ಪೂರ್ಣವಿರಾಮ ಹಾಕಲೆಂದು ಮತ್ತು ಇಂತಹ ಸಮಸ್ಯೆ ಮತ್ತೆ ತಲೆದೋರಬಾರದೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದಕಾರಣ ಈಗ ಇರುವ ಸಮಸ್ಯೆ ಪರಿಹಾರದ ಬಗ್ಗೆ ಆಲೋಚಿಸುವುದು ಮುಖ್ಯ” ಎಂದರು.
ಪುನಃ ಉತ್ತರ ಕೊಟ್ಟ ಟೂಡಾ ಆಯುಕ್ತ ರಂಗಸ್ವಾಮಿ ಅವರು, ಅಕ್ರಮ ಸಕ್ರಮ ನೀತಿ ಜಾರಿಗೆ ಬಂದರೆ ಈ ಸಮಸ್ಯೆ ಪರಿಹಾರ ಆಗಬಹುದು ಎಂದರು.
ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್ ಅವರು ಮಧ್ಯ ಪ್ರವೇಶಿಸಿ, `ತುಮಕೂರು ಪಾಲಿಕೆಯಲ್ಲಿ ಪ್ರಸ್ತುತ ಪಿ.ಐ.ಡಿ. ಸಂಖ್ಯೆ ಹೊಂದಿರುವ 1 ಲಕ್ಷ 15 ಸಾವಿರ ಆಸ್ತಿಗಳಿವೆ. ಹಿಂದೆ ಈ ಪಿ.ಐ.ಡಿ. ಸಂಖ್ಯೆ ಆಧರಿಸಿ ಕಟ್ಟಡ ಪರವಾನಗಿ ನೀಡಲಾಗುತ್ತಿತ್ತು. ಆದರೆ ಈಗ ಅದು ಸಾಧ್ಯವಾಗದೆ ಜನರಿಗೆ ತೊಂದರೆ ಆಗುತ್ತಿದೆ. ಅಲ್ಲದೆ ದುಪ್ಪಟ್ಟು ಕಂದಾಯವೂ ಜನರಿಗೆ ಹೊರೆಯಾಗಿದೆ’ ಎಂದು ಸಚಿವರ ಗಮನ ಸೆಳೆದರು. ಪಾಲಿಕೆಯ ವಿರೋಧ ಪಕ್ಷದ ನಾಯಕ ಸಿ.ಎನ್.ರಮೇಶ್ ಮಾತನಾಡಿ, ಏಕ ನಿವೇಶನಕ್ಕೆ ಈಗ ಟೂಡಾದಲ್ಲಿ ಅನುಮತಿ ಲಭಿಸದಿರುವುದು ಸಹ ಸಮಸ್ಯೆಗೆ ಕಾರಣವಾಗಿದೆ ಎಂದರು.
ಸಚಿವ ಖಾದರ್ ಅವರು ಮತ್ತೆ ಮಾತನಾಡುತ್ತ, ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಅಕ್ರಮ ಲೇಔಟ್ಗಳು ತಲೆಯತ್ತತೊಡಗಿದಾಗ ಕಾನೂನುಗಳು ಬಿಗಿಯಾಗಲಾರಂಭಿಸಿದ್ದನ್ನು ಉಲ್ಲೇಖಿಸುತ್ತ, ಅಕ್ರಮ ಸಕ್ರಮ ಯೋಜನೆಯನ್ನೂ ಪ್ರಸ್ತಾಪಿಸಿದರು. ಜನರಿಗೆ ತೊಂದರೆ ಆಗಬಾರದೆಂಬ ಕಾರಣಕ್ಕಾಗಿ ಹಾಗೂ ನಗರವೂ ವ್ಯವಸ್ಥಿತವಾಗಿರಬೇಕೆಂಬ ಉದ್ದೇಶದಿಂದ ಕಾನೂನುಗಳು ಇವೆ ಎಂದು ಒತ್ತಿ ಹೇಳಿದರು. ಆದರೂ ಸಹ ಕಟ್ಟಿರುವ ಮನೆಗಳು ಕಾನೂನಿನ ಪ್ರಕಾರ ಇದ್ದರೆ ಅವುಗಳಿಗೆ ಒಪ್ಪಿಗೆ ಕೊಡಲು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಒಂದು ವೇಳೆ ಇದಕ್ಕೆ ಒಪ್ಪಿಗೆ ದೊರೆತರೆ ಶೇ. 70 ರಷ್ಟು ಇಂತಹ ಸಮಸ್ಯೆ ಪರಿಹಾರವಾಗಬಹುದು ಎಂದರು.
ದುಪ್ಪಟ್ಟು ದಂಡಕ್ಕೆ ಸಮರ್ಥನೆ
ತುಮಕೂರು ಪಾಲಿಕೆಯು ಅಕ್ರಮ ಕಟ್ಟಡಗಳಿಗೆ ದುಪ್ಪಟ್ಟು ದಂಡ ವಿಧಿಸುತ್ತಿರುವುದನ್ನು ಸಚಿವ ಖಾದರ್ ಬಲವಾಗಿ ಸಮರ್ಥಿಸಿಕೊಂಡರು.ಇದಕ್ಕೂ ಮೊದಲು ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್ ಮತ್ತು ಇತರರು ದುಪ್ಪಟ್ಟು ತೆರಿಗೆ ಒಮ್ಮೆ ಮಾತ್ರ ಸಾಕು. ಪ್ರತಿ ವರ್ಷ ಪಾವತಿ ಮಾಡುವುದು ಜನರಿಗೆ ಕಷ್ಟವಾಗುತ್ತದೆ ಎಂದು ಪ್ರಸ್ತಾಪಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು, ಸರ್ಕಾರದ ನಿಯಮದ ಪ್ರಕಾರ ಅಕ್ರಮ ಕಟ್ಟಡಕ್ಕೆ ದುಪ್ಪಟ್ಟು ದಂಡ ವಿಧಿಸಲೇಬೇಕಾಗುತ್ತದೆ. ಅಕ್ರಮ ಸಕ್ರಮ ಯೋಜನೆ ಜಾರಿಗೆ ಬರುವವರೆಗೂ ದುಪ್ಪಟ್ಟು ದಂಡ ಪಾವತಿಸುವುದು ಅನಿವಾರ್ಯವಾಗಿದೆ. ಒಂದು ಸ್ಥಳದಲ್ಲಿ ಒಬ್ಬರು ಸರ್ಕಾರದ ಎಲ್ಲ ನಿಯಮಗಳನ್ನೂ ಪಾಲಿಸಿ, ಕಟ್ಟಡ ನಿರ್ಮಿಸಿ, ತೆರಿಗೆ ಕಟ್ಟುತ್ತಾರೆ. ಆದರೆ ಅವರ ಪಕ್ಕದ ಜಾಗದಲ್ಲಿ ಇನ್ನೊಬ್ಬರು ಯಾವುದೇ ತೆರಿಗೆ ಪಾವತಿಸದೆ ಅಕ್ರಮವಾಗಿ ಕಟ್ಟಡ ಕಟ್ಟುತ್ತಾರೆ.
ಇಬ್ಬರಿಗೂ ಒಂದೇ ನೀತಿ ಅನುಸರಿಸಿದರೆ, ನಿಯಮ ಪಾಲಿಸಿದವರಿಗೆ ಬೆಲೆ ಇರಲು ಸಾಧ್ಯವೇ? ತಪ್ಪು ಮಾಡಿದವರಿಗೆ ತಪ್ಪಿನ ಬೆಲೆ ಗೊತ್ತಾಗಬೇಡವೇ? ಅಲ್ಲದೆ ಈ ರೀತಿ ದುಪ್ಪಟ್ಟು ದಂಡ ವಿಧಿಸದಿದ್ದರೆ ಅಕ್ರಮ ನಿರ್ಮಾಣಗಳನ್ನು ತಡೆಗಟ್ಟುವುದೂ ಕಷ್ಟವಾಗಿಬಿಡುತ್ತದೆ. ಅಕ್ರಮ ಕಟ್ಟಡಗಳನ್ನು ಕೇವಲ ದಂಡ ಕಟ್ಟಿಸಿಕೊಂಡು ಸಕ್ರಮಗೊಳಿಸಲು ಪಾಲಿಕೆ ಹಂತದಲ್ಲಿ ಸಾಧ್ಯವೂ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. ಮಂಗಳೂರಿನ ಪ್ರಮುಖ ಸ್ಥಳದಲ್ಲಿರುವ ಪ್ರಮುಖ ಕಟ್ಟಡವೊಂದಕ್ಕೆ ಇದೇ ರೀತಿ ದುಪ್ಪಟ್ಟು ದಂಡ ವಿಧಿಸಲಾಗಿರುವುದನ್ನೂ ಈ ಸಂದರ್ಭದಲ್ಲಿ ಉದಾಹರಿಸಿದರು.
ಟೂಡಾ ಲೇಔಟ್ ಅವ್ಯವಸ್ಥೆ
ಇದೇ ಸಂದರ್ಭದಲ್ಲಿ ನಾಗರಿಕರೊಬ್ಬರು ನಗರದ ಮೆಳೆಕೋಟೆ ರಸ್ತೆಯಲ್ಲಿರುವ ಟೂಡಾ ಲೇಔಟ್ ದುಸ್ಥಿತಿಯನ್ನು ಸಚಿವರ ಗಮನಕ್ಕೆ ತಂದದ್ದು, ಬಿಸಿ ಬಿಸಿ ಚರ್ಚೆಗೆ ಎಡೆಮಾಡಿಕೊಟ್ಟಿತು. ಸಚಿವ ಖಾದರ್ ಅವರು ಟೂಡಾ ಆಯುಕ್ತ ರಂಗಸ್ವಾಮಿ ಅವರನ್ನು ಉದ್ದೇಶಿಸಿ, ಟೂಡಾ ಲೇಔಟ್ಗಳಲ್ಲೇ ಅವ್ಯವಸ್ಥೆ ಇದ್ದರೆ, ನೀವು ಹೇಗೆ ಖಾಸಗಿ ಲೇಔಟ್ಗಳ ಅವ್ಯವಸ್ಥೆಗಳನ್ನು ಪ್ರಶ್ನಿಸಲು ಸಾಧ್ಯ? ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಈ ಬಾರಿಯ ಟೂಡಾ ಬಜೆಟ್ನಲ್ಲಿ ಕೆಲವೊಂದು ಕಾಮಗಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಮೇಳೆ ಕೋಟೆ ಟೂಡಾ ಲೇಔಟ್ ದುಸ್ಥಿತಿ ಬಗ್ಗೆ ಆ ಭಾಗದ ಪಾಲಿಕೆ ಸದಸ್ಯ ಮನು ಅವರು ಗಮನ ಸೆಳೆದರೆ, ನಗರದ ಶಿರಾಗೇಟ್ ಟೂಡಾ ಬಡಾವಣೆಯ ಅವ್ಯವಸ್ಥೆಗಳತ್ತ ಅಲ್ಲಿನ ಸದಸ್ಯ ಹಾಗೂ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನರಸಿಂಹರಾಜು ಅವರು ವಿವರಿಸಿದರು. “ಶಿರಾಗೇಟ್ನ ಟೂಡಾ ಬಡಾವಣೆಯಲ್ಲಿ ಕಾರ್ನರ್ ನಿವೇಶನಗಳ ಮಾರಾಟದಿಂದ ಬಂದ ಹಣವನ್ನು ಆ ಬಡಾವಣೆಯ ಅಭಿವೃದ್ಧಿಗೆ ಬಳಸದೆ, ಬೇರೆ ಉದ್ದೇಶಕ್ಕೆ ಬಳಸಲಾಗಿದೆ” ಎಂದೂ ಲಕ್ಷ್ಮೀನರಸಿಂಹರಾಜು ದೂರಿದರು.
ಸದಸ್ಯೆ ಫರೀದಾಬೇಗಂ ಅವರು 13 ನೇ ವಾರ್ಡ್ ವ್ಯಾಪ್ತಿಯಲ್ಲಿ ಉಂಟಾಗಿರುವ ಒಳಚರಂಡಿ ಸಮಸ್ಯೆ ವಿವರಿಸಿದಾಗ, ಮಾಜಿ ಕಾರ್ಪೋರೇಟರ್ ಮಹಮದ್ ಹಫೀಜ್ ಸಹ ದನಿಗೂಡಿಸಿದರು. ಆಗ ಸಚಿವ ಖಾದರ್ ಅವರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿ ಎಕ್ಸಿಕ್ಯುಟೀವ್ ಇಂಜಿನಿಯರ್ ಮುದ್ದುರಾಜ್ ಅವರಿಗೆ ನಾಳೆ ಬೆಳಗ್ಗೆ ಸ್ಥಳಪರಿಶೀಲಿಸಿ ಅಗತ್ಯ ಕ್ರಮ ಜರುಗಿಸುವಂತೆ ಆದೇಶಿಸಿದರು.
ರಾಜಕಾಲುವೆ ಒತ್ತುವರಿ ತೆರವಿಗೆ ಸಹಕಾರ ನೀಡಿ
ಉಪ್ಪಾರಹಳ್ಳಿ ಭಾಗದಲ್ಲಿ ರಾಜಗಾಲುವೆ ಒತ್ತುವರಿ ಬಗ್ಗೆ ಸದಸ್ಯ ಶಿವರಾಂ ಗಮನ ಸೆಳೆದಾಗ, ರಾಜಗಾಲುವೆ ಸುಸ್ಥಿತಿಗೆ ಇಲಾಖೆಯಿಂದ ಸಾಕಷ್ಟು ಹಣ ಮಂಜೂರಾಗುತ್ತಿದ್ದು, ಒತ್ತುವರಿಯನ್ನು ಸಹ ತೆರವುಗೊಳಿಸಲಾಗುವುದು ಎಂದು ಸಚಿವರು ಭರವಸೆ ಕೊಟ್ಟರು.
ಮಾಜಿ ಸದಸ್ಯ ಮಹಮದ್ಹಫೀಜ್, 17 ನೇ ವಾರ್ಡ್ ಸದಸ್ಯ ಮಂಜುನಾಥ್, ಸದಸ್ಯ ಧರಣೇಂದ್ರಕುಮಾರ್ ಮೊದಲಾದವರೂ ರಾಜಗಾಲುವೆ ಒತ್ತುವರಿ ಬಗ್ಗೆ ಪ್ರಸ್ತಾಪಿಸಿದರು. ರಾಜಗಾಲುವೆ ಮೂಲಕ ಮಳೆ ನೀರನ್ನು ಮರಳೂರು ಕೆರೆಗೆ ಹರಿಸಬಹುದು ಎಂಬ ಸಲಹೆಯನ್ನು ಸದಸ್ಯ ಮಂಜುನಾಥ್ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಿಮ್ಮ ವಾರ್ಡ್ಗಳ ರಾಜಗಾಲುವೆ ತೆರವಿಗೆ ಕಾರ್ಪೋರೇಟರ್ಗಳು ಸಹಕಾರ ಕೊಟ್ಟರೆ ಕೆಲಸ ಸುಲಭವಾಗಲಿದೆ ಎಂದರು.ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಬಿ.ಆರ್.ವೇಣುಗೋಪಾಲಕೃಷ್ಣ ಸೇರಿದಂತೆ ಕೆಲವು ಸಾರ್ವಜನಿಕರು ಆಗಮಿಸಿ ಸಚಿವರಿಗೆ ವಿವಿಧ ವಿಷಯಗಳ ಬಗ್ಗೆ ಮನವಿ ಪತ್ರ ಸಲ್ಲಿಸಿದರು. ವೇದಿಕೆಯಲ್ಲಿ ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮೇಯರ್ ಲಲಿತಾ ರವೀಶ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಉಪಮೇಯರ್ ರೂಪಶ್ರೀ, ಪಾಲಿಕೆ ಆಯುಕ್ತ ಟಿ.ಭೂಬಾಲನ್ ಮೊದಲಾದವರು ಇದ್ದರು. ಪಾಲಿಕೆಯ ಅನೇಕ ಸದಸ್ಯರುಗಳು, ಪಾಲಿಕೆ-ಸ್ಮಾರ್ಟ್ಸಿಟಿ-ಒಳಚರಂಡಿ ಮಂಡಲಿ-ಟೂಡಾ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
