ಬಿಕ್ಕಟ್ಟಿಗೆ ಚುನಾವಣಾ ಸುಧಾರಣೆಯೊಂದೇ ದಾರಿ

ದಾವಣಗೆರೆ

    ಪ್ರಸ್ತುತ ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು, ಮುಂದೆ ಮರುಕಳಿಸದಂತೆ ತಡೆಯಲು, ಚುನಾವಣಾ ಆಯೋಗವು ಕಟ್ಟುನಿಟ್ಟಿನ ಕಾನೂನು ಜಾರಿಗೆ ತರುವ ಮೂಲಕ ಚುನಾವಣೆಗಳಲ್ಲಿ ಸುಧಾರಣೆ ತರುವುದೊಂದೇ ದಾರಿಯಾಗಿದೆ ಎಂದು ಸಿಪಿಐ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್ ಅಭಿಪ್ರಾಯಪಟ್ಟರು.

    ನಗರದ ಕಾಮ್ರೇಡ್ ಪಂಪಾಪತಿ ಭವನದಲ್ಲಿ ಭಾನುವಾರ ನಡೆದ ಭಾರತ ಕಮ್ಯುನಿಷ್ಟ್ ಪಕ್ಷದ ಜಿಲ್ಲಾ ಮಂಡಳಿಯ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಂದು ಪಕ್ಷದ ಚಿಹ್ನೆಯಡಿ ಗೆಲ್ಲುವ ಶಾಸಕ ಐದು ವರ್ಷದ ವರೆಗೆ ಪಕ್ಷಾಂತರ ಮಾಡದಂತೆ, ರಾಜ್ಯದ ಸಂಪತ್ತು ಲೂಟಿ ಹೊಡೆಯದಂತೆ, ಕುದುರೆ ವ್ಯಾಪಾರಕ್ಕೆ ಒಳಗಾಗದಂತೆ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬೇಕಾದ ಅವಶ್ಯಕತೆ ಇದ್ದು, ಚುನಾವಣಾ ಆಯೋಗವು ಈ ನಿಟ್ಟಿನಲ್ಲಿ ಕ್ರಮ ವಹಿಸಿ, ಚುನಾವಣಾ ಸುಧಾರಣೆ ತರಬೇಕೆಂದು ಆಗ್ರಹಿಸಿದರು.

ಸುಮ್ಮನಿದ್ದರೆ ಉಳಿಗಾಲವಿಲ್ಲ:

    ಒಂದು ಪಕ್ಷದ ಸಿದ್ಧಾಂತವನ್ನು ನೋಡಿ ಮತದಾರರು, ನಾವು ಆಯ್ಕೆ ಮಾಡುವ ಶಾಸಕರು ಮಾರಟಕ್ಕೆ ಒಳಗಾಗದೇ, ಐದು ವರ್ಷ ನಮ್ಮ ಋಣ ತೀರಿಸುವ ಕೆಲಸ ಮಾಡುತ್ತಾರೆಂಬ ನಿರೀಕ್ಷೆಯಲ್ಲಿ ಆಯ್ಕೆ ಮಾಡಿರುತ್ತಾರೆ. ಆದರೆ, ಇಂದು ಶಾಸಕರು ಜನರ ನಿರೀಕ್ಷೆಗಳನ್ನು ಹುಸಿ ಗೊಳಿಸಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರೆಸಾರ್ಟ್‍ಗಳಿಗೆ ಓಡೋಡಿ ಹೋಗಿ ಬ್ಲಾಕ್‍ಮೇಲ್ ಮಾಡುತ್ತಿದ್ದಾರೆ. ಜನಪರ ನಿಲುವು ಇಲ್ಲದ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಈ ಮೂರು ಪಕ್ಷಗಳ ಶಾಸಕರು ದೊಂಬರಾಟ ನಡೆಸುತ್ತಿರುವುದನ್ನು ನೋಡಿಕೊಂಡು ನಾವು ಮೌನವಾಗಿದ್ದರೆ, ರಾಜ್ಯಕ್ಕೆ ಹಾಗೂ ದೇಶಕ್ಕೆ ಉಳಿಗಾಲವಿಲ್ಲ ಎಂದು ಸೂಚ್ಯವಾಗಿ ನುಡಿದರು.

ರೆಸಾರ್ಟ್ ರಾಜಕಾರಣ:

   ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆಯಾಗಿಲ್ಲ, ಜಲಾಶಯಗಳು ಭರ್ತಿಯಾಗಿಲ್ಲ. ಮುಂದೆ ಬರುವ ಭೀಕರ ಬರಗಾಲವನ್ನು ತಡೆಯಲು, ತಮ್ಮಗಳ ಮಧ್ಯೆ ಇರುವ ರಾಜಕೀಯ ವೈರುದ್ಯಗಳನ್ನು ಮರೆತು, ಸಮರೋಪಾದಿಯಲ್ಲಿ ಕೆಲಸ ಮಾಡುವುದು ಆಡಳಿತ ಮತ್ತು ವಿರೋಧ ಪಕ್ಷಗಳ ಆದ್ಯ ಕರ್ತವ್ಯವಾಗಿದೆ. ಆದರೆ, ಇಂತಹ ಸಂದರ್ಭಲ್ಲಿಯೂ ತಮ್ಮ ಕುರ್ಚಿ ಭದ್ರ ಮಾಡಿಕೊಳ್ಳಲು ಆಡಳಿತ ಪಕ್ಷದ ಮುಖ್ಯಮಂತ್ರಿ ಆದಿಯಾಗಿ ಶಾಸಕರೆಲ್ಲರೂ ರೆಸಾರ್ಟ್‍ನಲ್ಲಿ ಹೋಗಿ ಕೂತಿರುವುದು ಮತ್ತು ಹೇಗಾದರೂ ಮಾಡಿ ಮೈತ್ರಿ ಸರ್ಕಾರವನ್ನು ಕೆಡವಿ ತಾವು ಅಧಿಕಾರಕ್ಕೆ ಬರಬೇಕೆಂಬ ಕಾರಣಕ್ಕೆ ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿಜೆಪಿಯ ಶಾಸಕರು ಸಹ ರೆಸಾರ್ಟ್ ಸೇರಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೋಹತ್ಯೆ ಮಾಡುತ್ತಿರುವ ಪಕ್ಷಗಳು:

    ರಾಜ್ಯ ಸರ್ಕಾರದ ನಿರ್ಧಾರದಂತೆ ಜೂನ್ 30ರಿಂದ ಗೋ ಶಾಲೆಗಳಿಗೆ ಮೇವು ಪೂರೈಸುವುದನ್ನು ಅಧಿಕಾರಿಗಳು ನಿಲ್ಲಿಸಿ, ಗೋವುಗಳನ್ನು ಮನೆ ಒಡೆದುಕೊಂಡು ಹೋಗಿ ಎಂಬುದಾಗಿ ಹೇಳುತ್ತಿರುವುದು. ಅತ್ಯಂತ ಕಟುಕ ನೀತಿಯಾಗಿದೆ ಎಂದು ಆರೋಪಿಸಿದ ಸಾತಿ ಸುಂದರೇಶ್, ಜಾನುವಾರುಗಳಿಗೆ ಮೇವು ಸಿಗದೇ, ರೈತರು ದನ-ಕರುಗಳನ್ನು ಕಟುಕರಿಗೆ ಮಾರುವ ಪರಿಸ್ಥಿತಿ ನಿರ್ಮಾಣ ವಾಗಿದ್ದರೂ, ಇಂತಹ ಪರಿಸ್ಥಿತಿಯನ್ನು ಸುಧಾರಿಸದ ಆಡಳಿತ ಪಕ್ಷವಾಗಿರುವ ಕಾಂಗ್ರೆಸ್-ಜೆಡಿಎಸ್ ಹಾಗೂ ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿಜೆಪಿ ಪಕ್ಷಗಳು ಗೋಹತ್ಯೆ ಮಾಡುತ್ತಿವೆ ಎಂದರು.

ಬಯೋಮೆಟ್ರಿಕ್ ಬಿಡಿ:

      ಬರಗಾಲದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಸ್ಥಗಿತಗೊಂಡು, ಉದ್ಯೋಗ ನಾಶವಾಗಿದೆ. ದುಡಿಮೆ ಇಲ್ಲದೇ, ಕೃಷಿ ಕೂಲಿ ಕಾರ್ಮಿಕರ ಬದುಕು ಗಂಭೀರವಾಗಿದೆ. ಇನ್ನೂ ಇವರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನೀಡುತ್ತಿದ್ದರೂ, ಕೆಲಸದ ಹಾಜರಾತಿಯನ್ನು ಮತ್ತು ಕೂಲಿ ಪಾತಿಗೆ ಬಯೋ ಮೆಟ್ರಿಕ್ ಸಿಸ್ಟಂ ವ್ಯವಸ್ಥೆ ಜಾರಿ ಮಾಡಿ, ಥಂಬ್ ಇಂಪ್ರೇಷನ್ ಮಾಡಿದರಷ್ಟೆ ಕೂಲಿ ಬರಲಿದೆ ಎಂಬ ಅಧಿಕಾರಿಗಳ ಕ್ರಮ ಅತ್ಯಂತ ಅವೈಜ್ಞಾನಿಕವಾಗಿದೆ. ಏಕೆಂದರೆ, ನಿರಂತರವಾಗಿ ಕೆಲಸ ಮಾಡಿಕೊಂಡು ಬಂದಿರುವ ದುಡಿಯುವ ವರ್ಗದ ಜನರ ಬೆರಳ ರೇಖೆಗಳು ಸವೆದಿರುವ ಕಾಣ ಥಂಬ್ ಇಂಪ್ರೆಸ್ ರೀಡ್ ಮಾಡುವುದಿಲ್ಲ. ಹೀಗಾಗಿ ತಕ್ಷಣವೇ ಈ ಪದ್ಧತಿಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು.

ಮತವಷ್ಟೇ ಬೇಕೆ?:

       ಕೇಂದ್ರ ಸರ್ಕಾರವೇ ಬರಗಾಲ ಅಧ್ಯಯನ ಮಾಡಲು ಕಳುಹಿಸಿದ ಕೇಂದ್ರ ಬರ ಅಧ್ಯಯನ ತಂಡವು ರಾಜ್ಯಾದ್ಯಂತ ಬರ ಪರಿಶೀಲನೆ ನಡೆಸಿ, ಕರ್ನಾಟಕದಲ್ಲಿ ಅಂದಾಜು 40 ಸಾವಿರ ಕೋಟಿ ಮೊತ್ತದ ಬೆಳೆ ಹಾನಿಯಾಗಿದ್ದು, ಕನಿಷ್ಠ 4500 ಕೋಟಿ ಹಣವನ್ನು ರೈತರಿಗೆ ಪರಿಹಾರವನ್ನಾಗಿ ನೀಡಲು ಶಿಫಾರಸು ಮಾಡಿ, ಪ್ರಧಾನಿ ಕಾರ್ಯಾಲಯಕ್ಕೆ ವರದಿ ನೀಡಿತ್ತು. ಆದರೆ, ಚುನಾವಣೆಯ ಸಂದರ್ಭದಲ್ಲಿ ಬಂದು ಕರ್ನಾಟಕದ ಜನರ ಮತ ಕೇಳುವ ಪ್ರಧಾನಿ ನರೇಂದ್ರ ಮೋದಿ ಈ ವರೆಗೂ ಕೇವಲ 950 ಕೋಟಿ ರೂ. ಹಣವನ್ನಷ್ಟೇ ಬಿಡುಗಡೆ ಮಾಡಿದ್ದಾರೆ. ಏಕೆ ಮೋದಿಗೆ ನಮ್ಮ ರಾಜ್ಯದ ಮತ ಮಾತ್ರಬೇಕೇ? ರೈತರ ಸಂಕಷ್ಟ ಬೇಕಾಗಿಲ್ಲವೇ? ಎಂದು ಪ್ರಶ್ನಿಸಿದರು.

ದಲಿತರಿಗೆ ಸುರಕ್ಷತೆ ಇಲ್ಲ:

      ದೇಶದಲ್ಲಿ ದಲಿತರ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಸಮಾಜಿಕ ಸಂಘರ್ಷಗಳು ಹೆಚ್ಚು, ಹೆಚ್ಚು ನಡೆಯುತ್ತಿವೆ. ಇತ್ತೀಚೆಗಷ್ಟೇ ದಲಿತ ಯುವಕನನ್ನು ಬೆತ್ತಲೆ ಗೊಳಿಸಿ, ಮೆರವಣಿಗೆ ಮಾಡಿದ ಅಮಾನವೀಯ ಕೃತ್ಯ ನಡೆದಿದೆ. ಗೋವು ಸಾಗಾಟದ ನೆಪದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುತ್ತಿದೆ ಎಂದರು.

ಮಿಸ್ಡ್ ಕಾಲ್ ಪಾರ್ಟಿಯಲ್ಲ:

     ಕೆಲವರು ನಿಮ್ಮ ಸದಸ್ಯರ ಸಂಖ್ಯೆ ಏಕೆ ಬೆಳೆಯುತ್ತಿಲ್ಲ ಎಂಬುದಾಗಿ ಕೇಳಬಹುದು. ಆದರೆ, ನಮ್ಮದು ಬೇರೆಯವರಂತೆ ಮಿಸ್ಡ್ ಕಾಲ್ ಪಾರ್ಟಿಯಲ್ಲ. ಶಿಸ್ತಿನ ಸಿಪಾಯಿಗಳ ಪಕ್ಷವಾಗಿದೆ. ಅವರ ಹಾಗೇ ನಾವು ಮಿಸ್ಡ್ ಕಾಲ್ ಕೊಟ್ಟ ತಕ್ಷಣ ನಮ್ಮ ಪಕ್ಷದ ಸದಸ್ಯತ್ವ ನೀಡಲ್ಲ. ಕೆಂಬಾವುಟ ಹಿಡಿದು ದೇಶಕ್ಕಾಗಿ ತ್ಯಾಗ ಮಾಡುವ ಮನೋಭಾವ ಇರುವವರಿಗೆ ಮಾತ್ರ ನಾವು ಸದಸ್ಯತ್ವ ನೀಡುತ್ತೇವೆ. ಹೀಗಾಗಿ ನಮ್ಮ ಸಂಖ್ಯೆ ಕಡಿಮೆ ಇರಬಹುದಷ್ಟೇ ಎಂದರು.

ಬಿಜೆಪಿಗೆ ಮೈತ್ರಿ ಗಿಫ್ಟ್:

    ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 25 ಸೀಟು ಗೆದ್ದಿರುವ ಬಿಜೆಪಿಯು ತನ್ನ ವರ್ಚಸ್ಸು ಹಾಗೂ ಮೋದಿ ಅಲೆಯಿಂದ ಗೆದ್ದಿಲ್ಲ. ಆ ಪಕ್ಷ ನಿಜವಾಗಿ ಗೆದ್ದಿರುವುದು ಕೇವಲ 16 ಸೀಟುಗಳು ಮಾತ್ರ. ಆದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ವೈಫಲ್ಯ ಹಾಗೂ ದೇವೇಗೌಡರ ಕುಟುಂಬ ರಾಜಕಾರಣದ ಕಾರಣದಿಂದ ಇನ್ನುಳಿದ ಸೀಟುಗಳನ್ನು ಬಿಜೆಪಿಗೆ ಗಿಫ್ಟ್ ನೀಡಿದಂತಾಗಿದೆ ಎಂದು ಹೇಳಿದರು.

    ಅಧ್ಯಕ್ಷತೆ ವಹಿಸಿದ್ದ ಪಕ್ಷದ ಜಿಲ್ಲಾ ಮಂಡಳಿ ಕಾರ್ಯದರ್ಶಿ ಎಚ್.ಕೆ.ರಾಮಚಂದ್ರಪ್ಪ ಮಾತನಾಡಿ, ಲೋಕಸಭಾ ಚುನಾವಣೆಯ ನಂತರದಲ್ಲಿ ಬದಲಾಗಿರುವ ರಾಜಕೀಯ ವಿದ್ಯಾಮಾನ ಹಾಗೂ ಇತ್ತೀಚೆಗಷ್ಟೇ ಮಂಡನೆಯಾದ ಕೇಂದ್ರ ಬಜೆಟ್ ಬಗ್ಗೆ ವಿಮರ್ಷಾತ್ಮಕವಾಗಿ ಚರ್ಚಿಸಿ, ನಮ್ಮ ಮುಂದಿನ ಹೋರಾಟದ ರೂಪುರೇಷೆ ರೂಪಿಸಲು ಈ ಸಭೆ ಆಯೋಜಿಸಲಾಗಿದೆ ಎಂದರು.

      ಸಭೆಯಲ್ಲಿ ಪಕ್ಷದ ರಾಜ್ಯ ಮಂಡಳಿ ಸಹ ಕಾರ್ಯದರ್ಶಿ ಡಾ.ಕೆ.ಎಸ್.ಜನಾರ್ಧನ್, ಜಿಲ್ಲಾ ಮಂಡಳಿ ಖಜಾಂಚಿ ಆನಂದರಾಜ್, ಸಿಪಿಐ ಮುಖಂಡರಾದ ಹೆಚ್.ಜಿ.ಉಮೇಶ್, ಟಿ.ಎಸ್.ನಾಗರಾಜ್, ಎಂ.ಬಿ.ಶಾರದಮ್ಮ, ಆವರಗೆರೆ ವಾಸು, ಮಹಮ್ಮದ್ ಭಾಷಾ, ಟಿ.ಎಚ್.ನಾಗರಾಜ, ಮಹಮ್ಮದ್ ರಫೀಕ್, ಎಚ್.ಎಂ.ಸತೋಷ್, ಪಾಲವ್ವನಹಳ್ಳಿ ಪ್ರಸನ್ನಕುಮಾರ್, ಖಾಜಾಪೀರ್ ಮತ್ತಿತರರು ಭಾಗವಹಿಸಿದ್ದರು.

      ಜಿಲ್ಲಾ ಮಂಡಳಿ ಸಹ ಕಾರ್ಯದರ್ಶಿ ಆವರಗೆರೆ ಚಂದ್ರು ಸ್ವಾಗತಿಸಿದರು. ಇಪ್ಟಾ ಕಲಾವಿದರಾದ ಐರಣಿ ಚಂದ್ರು, ಪಿ.ಷಣ್ಮುಖಸ್ವಾಮಿ ಸೇರಿದಂತೆ ಮತ್ತಿತರರು ಕ್ರಾಂತಿಗೀತೆ ಹಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link